ಬೆಳ್ತಂಗಡಿ: ಅಂತಾರಾಷ್ಟ್ರೀಯ ಸೀನಿಯರ್ ಚೇಂಬರ್ನ ಮಂಜುಶ್ರೀ ಬೆಳ್ತಂಗಡಿ ಘಟಕದ ಅಧ್ಯಕ್ಷ ಮಂಜುನಾಥ ರೈ ಅಧ್ಯಕ್ಷತೆಯಲ್ಲಿ ಇತ್ತೀಚೆಗೆ ನಡೆದ ಸಾಮಾನ್ಯ ಸಭೆಯಲ್ಲಿ 2026-27 ಸಾಲಿನ ಪದಾಧಿಕಾರಿಗಳ ಆಯ್ಕೆ ಪ್ರಕ್ರಿಯೆ ನಡೆಯಿತು.
ಅಧ್ಯಕ್ಷರಾಗಿ ಸೀನಿಯರ್ ಪಿಪಿಎಫ್ ಜಾನ್ ಅರ್ವಿನ್ ಡಿ’ಸೋಜ, ಕಾರ್ಯದರ್ಶಿಯಾಗಿ ಶರತ್ ಕುಮಾರ್, ಕೋಶಾಧಿಕಾರಿಯಾಗಿ ಪದ್ಮಕುಮಾರ್, ಜತೆ ಕಾರ್ಯದರ್ಶಿಯಾಗಿ ಹರೀಶ್ ಶೆಟ್ಟಿ, ಉಪಾಧ್ಯಕ್ಷರಾಗಿ ಪುಷ್ಪರಾಜ ಶೆಟ್ಟಿ ಪಿ. ಮತ್ತು ವಿಲ್ಸನ್ ಗೊನ್ಸಾಲಿಸ್ ಅವಿರೋಧವಾಗಿ ಆಯ್ಕೆಯಾದರು.
ಪದಗ್ರಹಣ ಸಮಾರಂಭ: ಗುರುವಾಯನಕೆರೆ ಛಾಯಾ ಭವನದಲ್ಲಿ ಏ.28 ರಂದು ಸೀನಿಯರ್ ಪಿಪಿಎಫ್ ಮಂಜುನಾಥ ರೈ ಅಧ್ಯಕ್ಷತೆಯಲ್ಲಿ ಪದಗ್ರಹಣ ಸಮಾರಂಭ ಜರುಗಲಿದ್ದು ಅಂತಾರಾಷ್ಟ್ರೀಯ ಸೀನಿಯರ್ ಚೇಂಬರ್ ಉಪಾಧ್ಯಕ್ಷೆ ಪಿಪಿಎಫ್ ಅಕ್ಷತಾ ಆರ್. ನೂತನವಾಗಿ ಆಯ್ಕೆಯಾದ ಅಧ್ಯಕ್ಷರಿಗೆ ಮತ್ತು ಸದಸ್ಯರಿಗೆ ಪ್ರಮಾಣ ವಚನ ಬೋಧಿಸಲಿದ್ದಾರೆ. ಸುವರ್ಣ ಪ್ರತಿಷ್ಠಾನ ಅಧ್ಯಕ್ಷ ಸಂಪತ್ ಬಿ.ಸುವರ್ಣ ಮುಖ್ಯ ಅತಿಥಿಯಾಗಿ ಭಾಗವಹಿಸಲಿದ್ದು, ರಾಷ್ಟ್ರೀಯ ನಿರ್ದೇಶಕ ಬೆಳ್ತಂಗಡಿ ಮಂಜುಶ್ರೀ ಸೀನಿಯರ್ ಚೇಂಬರ್ ಸ್ಥಾಪಕಾಧ್ಯಕ್ಷ ಸೀನಿಯರ್ ಪಿಪಿಎಫ್ ಸಿಎಸ್ಎಲ್ ಪ್ರಮೋದ್ ಆರ್. ನಾಯಕ್ ಅತಿಥಿಯಾಗಿ ಪಾಲ್ಗೊಳ್ಳಲಿದ್ದಾರೆ.













