ಬೆಳ್ತಂಗಡಿ: ಚಾರ್ಮಾಡಿ ಘಾಟಿ ರಸ್ತೆಯಲ್ಲಿ ಒಂಟಿ ಕಾಡಾನೆಯ ಹಾವಳಿ ಹೆಚ್ಚಾಗಿದ್ದು, ಏ.30ರಂದು ರಾತ್ರಿ ವೇಳೆ ಘಾಟಿ ರಸ್ತೆಯಲ್ಲಿ ಕಾಡಾನೆ ಸಂಚರಿಸುತ್ತಿದ್ದ ಹಿನ್ನೆಲೆಯಲ್ಲಿ ಸ್ವಲ್ಪ ಕಾಲ ಸಂಚಾರಕ್ಕೆ ತೊಡಕು ಉಂಟಾಗಿ ರಸ್ತೆಯಲ್ಲಿ ವಾಹನಗಳು ಸಾಲು ಗಟ್ಟಿ ನಿಂತಿದ್ದವು.
ಏ.30ರಂದು ರಾತ್ರಿ ವೇಳೆ ಚಾರ್ಮಾಡಿ ಘಾಟಿ ರಸ್ತೆಯ ಆರನೇ ತಿರುವಿನಲ್ಲಿ ಕಾಡಾನೆ ಸಂಚರಿಸುತ್ತಿತ್ತು. ಇದನ್ನು ಗಮನಿಸಿದ ವಾಹನ ಸವಾರರು ಇತರ ವಾಹನಗಳಿಗೆ ನಿಲ್ಲುವಂತೆ ಸೂಚನೆ ನೀಡಿದ್ದರು. ಘಾಟಿ ರಸ್ತೆಯಲ್ಲಿ ಮೊಬೈಲ್ ನೆಟ್ವರ್ಕ್ ಸಿಗದ ಹಿನ್ನೆಲೆಯಲ್ಲಿ ವಾಹನ ಸವಾರರು ಚೆಕ್ ಪೋಸ್ಟ್ನಲ್ಲಿ ಆನೆ ಸಂಚರಿಸುತ್ತಿರುವ ವಿಷಯ ತಿಳಿಸಿದರು. ಬಳಿಕ ಅರಣ್ಯ ಇಲಾಖೆ ಸಿಬ್ಬಂದಿ ಬಂದು, ಯಾರೂ ತೆರಳದಂತೆ ಸೂಚನೆ ನೀಡಿದರು. ಕಾಡಾನೆ ಆರನೇ ತಿರುವಿನಿಂದ ಒಂಬತ್ತನೇ ತಿರುವಿನತ್ತ ಹೋಗಿ ಬಳಿಕ ಬಾಂಜಾರು ಕಾಡಿನತ್ತ ತೆರಳಿದೆ ಎಂದು ಅರಣ್ಯ ಇಲಾಖೆ ಸಿಬಂದಿ ಮಾಹಿತಿ ನೀಡಿದ್ದಾರೆ. ಇದೇ ಒಂಟಿ ಕಾಡಾನೆ ಬುಧವಾರವೂ ಚಾರ್ಮಾಡಿ ಘಾಟರಸ್ತೆಯಲ್ಲಿ ತಿರುಗಾಡುತ್ತಿತ್ತು ಎಂದು ಜನರು ತಿಳಿಸಿದ್ದಾರೆ.













