ಧರ್ಮಸ್ಥಳ: ದಿನಾಂಕ: 05.05.2026ರಂದು ಧರ್ಮಸ್ಥಳ ಗ್ರಾಮ ಪಂಚಾಯಿತಿ ಹಾಗೂ ಅರಿವು ಕೇಂದ್ರ ಗ್ರಾಮ ಪಂಚಾಯತ್ ಡಿಜಿಟಲ್ ಗ್ರಂಥಾಲಯ ಹಾಗೂ ಮಾಹಿತಿ ಕೇಂದ್ರದ ವತಿಯಿಂದ ಓದುವ ಬೆಳಕು ಕಾರ್ಯಕ್ರಮದಡಿ “ಗ್ರಾಮೀಣ ಮಕ್ಕಳ ಬೇಸಿಗೆ ಶಿಬಿರ”ದ ಉದ್ಘಾಟನಾ ಸಮಾರಂಭವನ್ನು ಧರ್ಮಸ್ಥಳ ಮಂಡಲ ಪಂಚಾಯತ್ ನ ಮಾಜಿ ಪ್ರಧಾನರು, ಗ್ರಂಥಾಲಯ ಸಲಹಾ ಸಮಿತಿಯ ಸದಸ್ಯರೂ ಆದ ಸುಂದರ ಗೌಡ ಇವರು ದೀಪ ಪ್ರಜ್ವಲನೆಯ ಮೂಲಕ ನೆರವೇರಿಸಿ ಅಂತರ್ಜಾಲಗಳಿಂದ ಮಕ್ಕಳನ್ನು ದೂರವಿರಿಸಲು ಇಂಥ ಶಿಬಿರಗಳು ಅತ್ಯಗತ್ಯ ಹಾಗೂ ಶಿಬಿರದ ಮಹತ್ವವನ್ನ ತಿಳಿಸಿದರು.
ಜಮಾ ಉಗ್ರಾಣದ ಹಿರಿಯ ಮುತ್ಸದಿ ಗ್ರಂಥಾಲಯ ಸಲಹಾ ಸಮಿತಿಯ ಸದಸ್ಯರೂ ಆದಂತಹ ಬಿ ಭುಜಬಲಿ ಇವರು ಕಾರ್ಯಕ್ರಮದ ಅಧ್ಯಕ್ಷೀಯ ಶುಭ ನುಡಿಗಳಲ್ಲಿ ” ಆನೆ ” ಎಂಬ ಪದವನ್ನು ಈಗಲಿಂದಲೇ ನೆನಪಲ್ಲಿ ಉಳಿಸಿಕೊಳ್ಳಬೇಕು “ಆ” ಎಂದರೆ ಆರೋಗ್ಯ, “ನೆ” ಎಂದರೆ ನೆಮ್ಮದಿ ಎನ್ನುತ್ತಾ, ಓದಿನ ಮಹತ್ವವನ್ನು ತಿಳಿಸಿದರು.
ಗ್ರಂಥಾಲಯ ಸಲಹಾ ಸಮಿತಿಯ ಸದಸ್ಯರು ನವೀನ್ ಚಂದ್ರ ಶೆಟ್ಟಿ ಮುಖ್ಯ ಅಥಿತಿಗಳಾಗಿ ಮಕ್ಕಳಿಗೆ ಶುಭ ಹಾರೈಸಿದರು. ಧರ್ಮಸ್ಥಳ ಗ್ರಾಮ ಪಂಚಾಯತ್ ಅಭಿವೃದ್ಧಿ ಅಧಿಕಾರಿ ಗಾಯತ್ರಿ ಪಿ.ಸ್ವಾಗತಿಸಿದರು. ಕಾರ್ಯದರ್ಶಿ ಪ್ರಮೀಳಾ ವಂದನಾರ್ಪಣೆಗೈದರು.
ಕಾರ್ಯಕ್ರಮದಲ್ಲಿ ಪಂಚಾಯತ್ ನೌಕರರ ಶ್ರೇಯೋಭಿವೃದ್ಧಿ ಸಂಘದ ಅಧ್ಯಕ್ಷ ಡಾ. ದೇವಿ ಪ್ರಸಾದ್ ಬೊಳ್ಮಾ, ಎಂ.ಬಿ.ಕೆ ಚಂದ್ರಾವತಿ, ಅಂಗನವಾಡಿ ಕಾರ್ಯಕರ್ತೆ ಸುಚಿತ್ರ, ಬಿಂದು, ಶ್ರೀ ಕ್ಷೇತ್ರ ಕನ್ಯಾಕುಮಾರಿ ಯುವತಿ ಮಂಡಲದ ಕಾರ್ಯದರ್ಶಿ ಅರುಣ ಪಾಲ್ಗೊಂಡಿದ್ದರು. ಗ್ರಂಥಾಲಯವೆಂಬ ಬೃಹದಾಕಾರವಾದ ಮರದ ಕಾಂಡಗಳಿಗೆ ಅತಿಥಿಗಳು, ಎಲೆಗಳಿಗೆ ಮಕ್ಕಳು ತಮ್ಮ ಸಹಿ ಹಾಕುವುದರ ಮೂಲಕ ಶಿಬಿರ ಪ್ರಾರಂಭಗೊಂಡಿತು. ಗ್ರಂಥಾಲಯ ಮೇಲ್ವಿಚಾರಕಿ ಮಂಜುಳ ಕಾರ್ಯಕ್ರಮ ನಿರೂಪಿಸಿದರು. ಪಂಚಾಯತ್ ವತಿಯಿಂದ ಲಘು ಪಾನೀಯ ವ್ಯವಸ್ಥೆಯನ್ನು ಮಾಡಲಾಯಿತು.













