ಬೆಳ್ತಂಗಡಿ: ತಾಲೂಕಿನದ್ಯಾಂತ ಮಳೆ ಆರ್ಭಟ ಮುಂದುವರಿದಿದ್ದು ಆ. 1 ರಂದು ಸುರಿದ ಕುಂಭದ್ರೋಣ ಮಳೆಗೆ ತಾಲೂಕಿನ ನಾನಾ ಕಡೆಗಳಲ್ಲಿ ಸಂಪರ್ಕ ಕಡಿತ, ಗುಡ್ಡ ಜರಿತ, ತೋಟ, ಮನೆಗಳು ಜಲಾವೃತಗೊಂಡು ಹಾನಿಯಾದ ಹಿನ್ನಲೆ ದ.ಕ. ಜಿಲ್ಲಾಧಿಕಾರಿ ದರ್ಶನ್ ಹೆಚ್.ವಿ. ಅವರು ಆ.3 ರಂದು ಬೆಳ್ತಂಗಡಿ ತಾಲೂಕಿನ ಲಾಯಿಲ ಮತ್ತು ಮುಂಡಾಜೆ ಗ್ರಾಮಗಳಿಗೆ ಭೇಟಿ ನೀಡಿದರು.

ಲಾಯಿಲ ಗ್ರಾಮದ ಪುತ್ರಬೈಲು ಹಾಗೂ ಗುರಿಂಗಾನ ಪರಿಸರದಲ್ಲಿ 17 ಮನೆಗಳಿಗೆ ನದಿ ನೀರುನುಗ್ಗಿತ್ತು, ಕಿಲ್ಲೂರು ರಸ್ತೆ ಜಲಾವೃತಗೊಂಡು ಸಂಪರ್ಕ ಕಡಿತಗೊಂಡಿತ್ತು. ಈ ಹಿನ್ನಲೆ ಸದ್ರಿ ಸ್ಥಳಕ್ಕೆ ಭೇಟಿ ನೀಡಿದ ಅವರು ಕಿಂಡಿ ಅಣೆಕಟ್ಟನ್ನು ಪರಿಶೀಲನೆ ನಡೆಸಿ ಅಧಿಕಾರಗಳೊಂದಿಗೆ ಮಾಹಿತಿ ಪಡೆದರು.

ದೇಶದಲ್ಲಿ ಅತೀ ಹೆಚ್ಚು ಮಳೆಯಾದ ಎರಡನೇ ಸ್ಥಳ ಮುಂಡಾಜೆ ಗ್ರಾಮಕ್ಕೆ ಭೇಟಿ ನೀಡಿ ಮಳೆಯಿಂದ ಹಾನಿಗೀಡಾದ ಪ್ರದೇಶವನ್ನು ಪರಿಶೀಲನೆ ನಡೆಸಿದರು.

ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಜೊತೆಯಲ್ಲಿ ಬೆಳ್ತಂಗಡಿ ತಹಶೀಲ್ದಾರ್ ಎಸ್.ಎನ್.ನರಗುಂದ, ಬೆಳ್ತಂಗಡಿ ತಾಲೂಕು ಪಂಚಾಯತ್ ಇಒ ಭವಾನಿಶಂಕರ್, ಬೆಳ್ತಂಗಡಿ ಕಂದಾಯ ನಿರೀಕ್ಷಕ ರಾಜು ಲಮಾಣಿ, ಲಾಯಿಲ ಪಿಡಿಒ ತಾರಾನಾಥ್ ನಾಯ್ಕ್, ಲಾಯಿಲ ಗ್ರಾಮ ಆಡಳಿತಾಧಿಕಾರಿ ರನಿತಾ, ಮುಂಡಾಜೆ ಪಿಡಿಒ ಗಾಯತ್ರಿ, ಇಂಜಿನಿಯರ್ ಸಂದೀಪ್, ಪಿ.ಆರ್.ಡಿ.ಇ. ನ ಎಇಇ ಜನಾರ್ಧನ್ ಹಾಗೂ ಮತ್ತಿತರ ಅಧಿಕಾರಿಗಳು ಭಾಗಿಯಾಗಿದ್ದರು.













