25.1 C
ಪುತ್ತೂರು, ಬೆಳ್ತಂಗಡಿ
August 11, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಬೆಳ್ತಂಗಡಿವರದಿ

ಅಕ್ರಮ-ಸಕ್ರಮ ಹಾಗೂ 94ಸಿ ಅರ್ಜಿಗಳನ್ನು ತ್ವರಿತ ವಿಲೇವಾರಿ ಮಾಡಿ ಅರ್ಹರಿಗೆ ಹಕ್ಕುಪತ್ರ ನೀಡಿ : ಎಸ್‌ಡಿಪಿಐ ಆಗ್ರಹ”

ಬೆಳ್ತಂಗಡಿ: ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ಸೇರಿದಂತೆ ಮಲೆನಾಡು ಭಾಗದ ಸಾವಿರಾರು ರೈತರು ಮತ್ತು ನಿವೇಶನ ರಹಿತ ಬಡ ಕುಟುಂಬಗಳು ಸರ್ಕಾರದ ನಿರ್ಲಕ್ಷ್ಯದಿಂದ ತೀವ್ರ ಸಂಕಷ್ಟ ಅನುಭವಿಸುತ್ತಿದ್ದಾರೆ ಎಂದು ಎಸ್‌ಡಿಪಿಐ ಮಂಗಳೂರು ಗ್ರಾಮಾಂತರ ಜಿಲ್ಲಾ ಕಾರ್ಯದರ್ಶಿ ನವಾಜ್ ಕಟ್ಟೆ ಆಗ್ರಹಿಸಿದ್ದಾರೆ.

ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ತಲತಲಾಂತರದಿಂದ ಕೃಷಿ ಮಾಡಿಕೊಂಡು ಬಂದಿರುವ ರೈತರು ಇಂದು ತಮ್ಮದೇ ಜಮೀನಿನಲ್ಲಿ ಅತಿಕ್ರಮಣದಾರರಂತೆ ಬದುಕುವ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ಕಳವಳ ವ್ಯಕ್ತಪಡಿಸಿದರು. ಸರ್ಕಾರದ ವಿವಿಧ ಯೋಜನೆಗಳ ಅಡಿಯಲ್ಲಿ ಸಲ್ಲಿಕೆಯಾದ ಅರ್ಜಿಗಳು ವರ್ಷಗಳಿಂದ ಬಾಕಿ ಉಳಿದಿದ್ದರೂ ಅವುಗಳ ವಿಲೇವಾರಿ ನಡೆಯದೇ ಜನರು ಕಚೇರಿಯಿಂದ ಕಚೇರಿಗೆ ಅಲೆದಾಡುವಂತಾಗಿದೆ ಎಂದರು.

ಜಿಲ್ಲೆಯಲ್ಲಿ ಅಕ್ರಮ-ಸಕ್ರಮ, ನಮೂನೆ 50, 53, 57 ಹಾಗೂ 94ಸಿ ಅಡಿಯಲ್ಲಿ ಸಲ್ಲಿಕೆಯಾದ ಸಾವಿರಾರು ಅರ್ಜಿಗಳು ಇನ್ನೂ ಬಾಕಿ ಉಳಿದಿವೆ. ವಿಶೇಷವಾಗಿ 94ಸಿ ಅಡಿಯಲ್ಲಿ ನಿವೇಶನಕ್ಕಾಗಿ ಅರ್ಜಿ ಸಲ್ಲಿಸಿರುವ ಬಡ ಕುಟುಂಬಗಳ ಅರ್ಜಿಗಳನ್ನು ಸ್ಥಳ ಪರಿಶೀಲನೆ ನಡೆಸದೇ ಅಧಿಕಾರಿಗಳು ತಿರಸ್ಕರಿಸುತ್ತಿರುವುದು ಖಂಡನೀಯ ಎಂದು ಹೇಳಿದರು.

ಬಗರ್ ಹುಕುಂ ಸಮಿತಿಗಳ ನಿಷ್ಕ್ರಿಯತೆ ಮತ್ತು ರಾಜಕೀಯ ಇಚ್ಛಾಶಕ್ತಿಯ ಕೊರತೆಯಿಂದ ಸಾಮಾನ್ಯ ಜನರಿಗೆ ನ್ಯಾಯ ಸಿಗುತ್ತಿಲ್ಲ ಎಂದು ಆರೋಪಿಸಿದರು.

ಇದೇ ವೇಳೆ ಕುಮ್ಕಿ ಹಕ್ಕಿನ ಹೆಸರಿನಲ್ಲಿ ನಡೆಯುತ್ತಿರುವ ಭೂ ಅನ್ಯಾಯದ ಬಗ್ಗೆ ತೀವ್ರ ಕಳವಳ ವ್ಯಕ್ತಪಡಿಸಿದ ಅವರು, ಕೆಲ ಪ್ರಭಾವಿಗಳು ಎಕರೆಗಟ್ಟಲೆ ಸರ್ಕಾರಿ ಭೂಮಿಯನ್ನು ತಮ್ಮ ವಶದಲ್ಲಿಟ್ಟುಕೊಂಡಿದ್ದರೆ, ಇನ್ನೊಂದೆಡೆ ಬಡ ಕುಟುಂಬಗಳಿಗೆ ಸ್ವಂತ ಮನೆ ಕಟ್ಟಲು ಐದು ಸೆಂಟ್ಸ್ ಜಾಗವೂ ಸಿಗದಿರುವುದು ದುರಂತ ಎಂದು ಹೇಳಿದರು.

ನವಾಜ್ ಕಟ್ಟೆ ಅವರು ಮುಂದುವರಿದು, ಅಕ್ರಮ-ಸಕ್ರಮ ಹಾಗೂ 94ಸಿ ಸೇರಿದಂತೆ ಬಾಕಿ ಇರುವ ಎಲ್ಲಾ ಅರ್ಜಿಗಳನ್ನು ತ್ವರಿತವಾಗಿ ವಿಲೇವಾರಿ ಮಾಡಬೇಕು. ಬಗರ್ ಹುಕುಂ ಸಮಿತಿಗಳನ್ನು ತಕ್ಷಣ ಸಕ್ರಿಯಗೊಳಿಸಿ ಅರ್ಹ ರೈತರು ಮತ್ತು ನಿವೇಶನ ರಹಿತ ಬಡವರಿಗೆ ಹಕ್ಕುಪತ್ರ ನೀಡಬೇಕು ಎಂದು ಒತ್ತಾಯಿಸಿದರು.

ಅಕ್ರಮ ಕುಮ್ಕಿ ಭೂಮಿಯನ್ನು ವಶಪಡಿಸಿಕೊಂಡು ಬಡವರಿಗೆ ಹಂಚಬೇಕು ಹಾಗೂ ಸ್ಥಳ ಪರಿಶೀಲನೆ ನಡೆಸದೆ ಅರ್ಜಿ ತಿರಸ್ಕರಿಸುವ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಅವರು ಆಗ್ರಹಿಸಿದರು.

ಒಂದು ವೇಳೆ ಸರ್ಕಾರ ಮತ್ತು ಜಿಲ್ಲಾಡಳಿತ ತಕ್ಷಣ ಕ್ರಮ ಕೈಗೊಳ್ಳದಿದ್ದರೆ, ಎಸ್‌ಡಿಪಿಐ ರೈತರನ್ನು ಮತ್ತು ಜನಸಾಮಾನ್ಯರನ್ನು ಸಂಘಟಿಸಿ ಜಿಲ್ಲೆಯಾದ್ಯಂತ ಉಗ್ರ ಹೋರಾಟ ಹಮ್ಮಿಕೊಳ್ಳಲಿದೆ ಎಂದು ಎಚ್ಚರಿಸಿದರು.

ಪತ್ರಿಕಾಗೋಷ್ಠಿಯಲ್ಲಿ ಎಸ್.ಡಿ.ಪಿ.ಐ ಜಿಲ್ಲಾ ಕಾರ್ಯದರ್ಶಿ ಅಶ್ರಫ್ ಕಲ್ಲಂಪಾಡಿ, ಜಿಲ್ಲಾ ಉಪಾಧ್ಯಕ್ಷ ಇನಾಸ್ ರೋಡ್ರಿಗಸ್, ಜಿಲ್ಲಾ ಸಮಿತಿ ಸದಸ್ಯ ಅನೀಫ್ ಪುಂಜಾಲಕಟ್ಟೆ, ಬೆಳ್ತಂಗಡಿ ಎಸ್.ಡಿ.ಪಿ.ಐ ಅಧ್ಯಕ್ಷ ಅಕ್ಬರ್ ಬೆಳ್ತಂಗಡಿ ಉಪಸ್ಥಿತರಿದ್ದರು.

Related posts

ಶ್ರೀ ಧ.ಮಂ ಪ.ಪೂ ಕಾಲೇಜು : ರಾ. ಸೇ ಯೋಜನಾ ದಿನಾಚರಣೆ ಹಾಗೂ ಪ್ರಾಚಾರ್ಯರಿಗೆ ಅಭಿನಂದನೆ

Suddi Udaya

ಬೆಳ್ತಂಗಡಿ ಶ್ರೀ ಧ.ಮಂ. ಆಂಗ್ಲ ಮಾಧ್ಯಮ ಶಾಲೆಯಲ್ಲಿ ಸ್ಕೌಟ್ ಗೈಡ್ ಸಂಸ್ಥಾಪಕರ ದಿನ ಹಾಗೂ ದ್ವಜ ದಿನಾಚರಣೆ

Suddi Udaya

ಮುಸ್ಲಿಂ ಮಹಿಳೆಯರ ಬಗ್ಗೆ ಅವಹೇಳನಕಾರಿ ಹೇಳಿಕೆ: ಕಲ್ಲಡ್ಕ ಪ್ರಭಾಕರ ಭಟ್ ವಿರುದ್ಧ ಪೊಲೀಸ್ ದೂರು

Suddi Udaya

ತುಲು ಕಥೆ ಬರಹಗಾರರಿಗೆ ಸುವರ್ಣ ವೇದಿಕೆ; “ಕುದ್ಕ ಬಚ್ಚಿರೆ” ತುಲು ಸಣ್ಣ ಕಥಾ ಸ್ಪರ್ಧೆ: 10 ವಿಜೇತರಿಗೆ ನಗದು ಬಹುಮಾನ

Suddi Udaya

ಗೇರುಕಟ್ಟೆ : ಕಳಿಯ ಗ್ರಾ.ಪಂ. ಮಹಿಳಾ ಗ್ರಾಮ ಸಭೆ

Suddi Udaya

ನೆರಿಯ: ಗಂಡಿಬಾಗಿಲು ಸಂತ ತೋಮಸರ ಸಭಾಭವನದಲ್ಲಿ ಉಚಿತ ಫೂಟ್ ಫಲ್ಸ್ ಥೆರಪಿ

Suddi Udaya
error: Content is protected !!