ಬೆಳ್ತಂಗಡಿ: ಸರ್ಕಾರಗಳು ನೀತಿಯನ್ನು ರೂಪಿಸುವ ಮೊದಲು ಜನ ಸಮೂಹದ ಜೊತೆ ಸಂವಾದಗಳನ್ನು ಮಾಡಬೇಕು ವಾಸ್ತವ ಸ್ಥಿತಿಯನ್ನು ಅರಿತು ಕಾನೂನುಗಳನ್ನು ಜಾರಿಗೆ ತರಬೇಕೆ ಹೊರತು. ಸರ್ವಾಧಿಕಾರದ ರೀತಿಯಲ್ಲಿ ವರ್ತನೆ ಮಾಡುವುದು ಸಮಂಜಸವಲ್ಲ. ಜನಪ್ರತಿನಿಧಿಗಳು ವಿಶೇಷವಾಗಿ ಶಾಸಕರು ಸಂಸದರು ಈ ಬಗ್ಗೆ ವಸ್ತುನಿಷ್ಠವಾಗಿ ಕಾನೂನಿನ ಮಜಲುಗಳನ್ನು ಅಧ್ಯಯನ ಮಾಡಿ ಧ್ವನಿಯೆತ್ತಬೇಕು. ರಾಜ್ಯ ಸರ್ಕಾರ ಯಾವ ಜನವಸತಿ ಪ್ರದೇಶಗಳನ್ನು ಬಿಟ್ಟು ಪರಿಸರ ಸೂಕ್ಷ್ಮ ವಲಯ ಘೋಷಣೆ ಮಾಡಬೇಕು. ಜನರ ಹಕ್ಕುಗಳು ವಿಶೇಷವಾಗಿ ಅರಣ್ಯ ಹಕ್ಕು ಕಾಯ್ದೆಯಂತಹ ಬುಡಕಟ್ಟು ಸಮುದಾಯದ ಹಕ್ಕುಗಳನ್ನು ರಕ್ಷಿಸುವ ಕಾಯ್ದೆಗೆ ಸಮಸ್ಯೆ ಆಗದ ರೀತಿಯಲ್ಲಿ ನಿಯಮಗಳನ್ನು ರೂಪಿಸಲು ಶಿಫಾರಸ್ಸು ಮಾಡಬೇಕು.
ಈಗಾಗಲೇ ಅರಣ್ಯ ಹಕ್ಕು ಕಾಯ್ದೆಗೆ ವನ್ಯಜೀವಿ ಸಂರಕ್ಷಣಾ ಕಾಯ್ದೆ 1972 ಮತ್ತು ಅರಣ್ಯ ಸಂರಕ್ಷಣಾ ಕಾಯ್ದೆ 1980 ಕಾಯ್ದೆಯಿಂದ ಸಮಸ್ಯೆ ಇಲ್ಲದೆ ಇದ್ರೂ ಕೂಡ ಅಧಿಕಾರಿಗಳು ಮತ್ತು ಅರಣ್ಯ ಇಲಾಖೆ ಮೊಂಡುವಾದ ಮಾಡುತ್ತಾ ಬುಡಕಟ್ಟು ಸಮುದಾಯದ ಹಕ್ಕುಗಳನ್ನು ಮೊಟಕುಗೊಳಿಸುವ ವ್ಯವಸ್ಥಿತ ಷಡ್ಯಂತ್ರ ಮಾಡುತ್ತಿದೆ. ಮುಂದೆ ಪರಿಸರ ಸೂಕ್ಷ್ಮ ವಲಯ ಎಂದು ಹೇಳಿಕೊಂಡು ಅಧಿಕಾರಿಗಳು ಜನಜೀವನವನ್ನು ಸಂಪೂರ್ಣ ಅಸ್ತವ್ಯಸ್ತ ಮಾಡುವುದು ನಿಶ್ಚಿತ. ಆದುದರಿಂದ ಸರ್ಕಾರ ಗ್ರಾಮಸಭೆಗಳ ನಿರ್ಣಯವನ್ನು ಗಂಭೀರವಾಗಿ ಪರಿಗಣಿಸಿ ಅದರ ಆಧಾರದಲ್ಲಿ ಸೂಕ್ತ ಕ್ರಮ ಕೈಗೊಳ್ಳಬೇಕು. ಸರ್ವೊಚ್ಚ ನ್ಯಾಯಾಲಯ ಒರಿಸ್ಸಾ ಮೈನಿಂಗ್ ಪ್ರಕರಣದಲ್ಲಿ ಅರಣ್ಯ ಹಕ್ಕು ಗ್ರಾಮ ಸಭೆಗಳ ಮಹತ್ವವನ್ನು ಎತ್ತಿ ಹಿಡಿದಿದೆ. ಅದೆ ಮಾದರಿಯಲ್ಲಿ ಅಧಿಸೂಚನೆ ಹೊರಡಿಸುವ ಮೊದಲು ಗ್ರಾಮಸಭೆಗಳ ನಿರ್ಣಯವನ್ನು ಗಂಭೀರವಾಗಿ ಪರಿಗಣಿಸಬೇಕು ಎಂದು ಮಲೆಕುಡಿಯ ಸಂಘ ಅಧ್ಯಕ್ಷ ಹರೀಶ್ ಎಳನೀರ್ ತಿಳಿಸಿದ್ದಾರೆ.













