ಬೆಳ್ತಂಗಡಿ: ಭಾರೀ ಮಳೆಯಿಂದ ಲಾಯಿಲ ಗ್ರಾಮದ ಪುತ್ರಬೈಲು, ಗುರಿಂಗಾನ ಸೇರಿದಂತೆ ಇನ್ನಿತರ ಕಡೆಗಳಲ್ಲಿ ಸೋಮಾವತಿ ನದಿಯಲ್ಲಿ ಉಕ್ಕಿ ಬಂದ ಪ್ರವಾಹದಿಂದ ಹಲವು ಮನೆಗಳು ಜಲಾವೃತಗೊಂಡು ಹಾನಿ ಉಂಟಾಗಿದ್ದು , ಅ 5 ರಂದು ಉಸ್ತುವಾರಿ ಸಚಿವ ಯು.ಟಿ. ಖಾದರ್ ಭೇಟಿ ನೀಡಿ ಪರಿಸ್ಥಿತಿಯನ್ನು ಪರಿಶೀಲಿಸಿದರು.
ಈ ಸಂದರ್ಭದಲ್ಲಿ ಗುರಿಂಗಾನ ರಸ್ತೆಯಲ್ಲಿ ಹಲವು ವರ್ಷಗಳಿಂದ ಬೀದಿ ದೀಪಗಳ ಕೊರತೆಯಿದ್ದು, ಈ ಬಗ್ಗೆ ಪಂಚಾಯತ್ ಗೆ
ಹಲವು ಬಾರಿ ಮನವಿ ಮಾಡಿದ್ದರೂ ಬೇಡಿಕೆ ಈಡೇರಿಲ್ಲ ಎಂದು ಸ್ಥಳೀಯರು ಸಚಿವ ಯು.ಟಿ. ಖಾದರ್ ಹಾಗೂ ರಕ್ಷಿತ್ ಶಿವರಾಂ ಅವರ ಗಮನಕ್ಕೆ ತಂದರು.

ಸ್ಥಳೀಯರ ಸಮಸ್ಯೆಯನ್ನು ಆಲಿಸಿದ ಸಚಿವರು, ತಕ್ಷಣವೇ ಲಾಯಿಲ ಗ್ರಾಮ ಪಂಚಾಯತ್ ಪಿಡಿಒ ತಾರನಾಥ್ ಅವರಲ್ಲಿ ಈ ಬಗ್ಗೆ ಅಗತ್ಯ ಕ್ರಮ ಕೈಗೊಳ್ಳುವಂತೆ ಸೂಚಿಸಿದರು. ಇದೇ ವೇಳೆ ರಕ್ಷಿತ್ ಶಿವರಾಂ ಅವರು ಬೀದಿ ದೀಪಗಳನ್ನು ಒದಗಿಸುವುದಾಗಿ ಭರವಸೆ ನೀಡಿದರು.
ಸಚಿವರ ಸೂಚನೆಗೆ ತಕ್ಷಣ ಸ್ಪಂದಿಸಿದ ಲಾಯಿಲ ಗ್ರಾಮ ಪಂಚಾಯತ್ ಕಂಬಗಳಲ್ಲಿ ಎಚ್ ಟಿ ಲೈನ್ ಮಾತ್ರ ಇದ್ದು ಅದಕ್ಕೆ ಎಲ್ ಟಿ ವಿದ್ಯುತ್ ಲೈನ್ ಎಳೆದು ಗುರಿಂಗಾನ ರಸ್ತೆ ಬದಿ ಹೊಸ ಬೀದಿ ದೀಪಗಳನ್ನು ಅಳವಡಿಸಿದೆ. ಇದರಿಂದ ಹಲವು ವರ್ಷಗಳಿಂದ ಗ್ರಾಮಸ್ಥರು ಎದುರು ನೋಡುತ್ತಿದ್ದ ಬೇಡಿಕೆ ಈಡೇರಿದಂತಾಗಿದೆ.
ಬೀದಿ ದೀಪಗಳ ಕೊರತೆಯಿಂದ ರಾತ್ರಿ ವೇಳೆ ವಿದ್ಯಾರ್ಥಿಗಳು , ಮಹಿಳೆಯರು , ಸಾರ್ವಜನಿಕರು ಹಾಗೂ ವಾಹನ ಸವಾರರು ಸಾಕಷ್ಟು ತೊಂದರೆ ಅನುಭವಿಸುತ್ತಿದ್ದರು. ಇದೀಗ ಹೊಸ ದೀಪಗಳ ಅಳವಡಿಕೆಯಿಂದ ರಾತ್ರಿ ಸಂಚಾರಕ್ಕೆ ಅನುಕೂಲವಾಗುವುದರ ಜೊತೆಗೆ ಸಾರ್ವಜನಿಕರ ಸುರಕ್ಷತೆಯೂ ಹೆಚ್ಚಲಿದೆ.













