ಬೆಳ್ತಂಗಡಿ : ಕೃಷಿ ಇಲಾಖೆ ಬೆಳ್ತಂಗಡಿ , ಗ್ರಾಮ ಪಂಚಾಯತ್ ಅಂಡಿಂಜೆ , ನಿಸರ್ಗ ಸಂಜೀವಿನಿ ಗ್ರಾಮ್ ಪಂಚಾಯತ್ ಮಟ್ಟದ ಒಕ್ಕೂಟ ಅಂಡಿಂಜೆ ಇದರ ಸಂಯುಕ್ತ ಆಶ್ರಯದಲ್ಲಿ “ಸಮತೋಲನ ರಸ ಗೊಬ್ಬರಗಳ ಬಳಕೆ ಹಾಗೂ ಮಣ್ಣು ಪರೀಕ್ಷೆಯ ಮಹತ್ವದ ಬಗ್ಗೆ “ಒಂದು ದಿನದ ರೈತ ತರಬೇತಿಯನ್ನು ಮೇ 15 ರಂದು ಅಂಡಿಂಜೆ ಪಂಚಾಯಿತಿ ಸಭಾಂಗಣದಲ್ಲಿ ಒಕ್ಕೂಟದ ಉಪಾಧ್ಯಕ್ಷೆ ರಮಣಿ ಅವರ ಅಧ್ಯಕ್ಷತೆಯಲ್ಲಿ ನಡೆಸಲಾಯಿತು.

ತರಬೇತಿ ಕಾರ್ಯಾಗಾರವನ್ನು ಪ್ರಗತಿಪರ ಕೃಷಿಕರು ಸಾವ್ಯ ಬಾಲಕೃಷ್ಣ ಭಟ್ ದೀಪ ಬೆಳಗಿಸಿ ಉದ್ಘಾಟಿಸಿದರು. ನಂತರ ಕೃಷಿ ಅಧಿಕಾರಿ ಗಣೇಶ್ ಆಡಿಗ ಪ್ರಾಸ್ತಾವಿಕವಾಗಿ ಮಾತನಾಡಿ ಕೃಷಿ ಇಲಾಖೆಯ ಯೋಜನೆಗಳ ಬಗ್ಗೆ ಮಾಹಿತಿ ನೀಡಿದರು. ಸಂಪನ್ಮೂಲ ವ್ಯಕ್ತಿಯಾದ ವಿಜ್ಞಾನಿ ಡಾI ಮಲ್ಲಿಕಾರ್ಜುನ ತರಬೇತಿಯನ್ನು ಪ್ರಾರಂಭಿಸಿ ಸಮತೋಲನ ರಸಗೊಬ್ಬರಗಳ ಬಳಕೆ ಹಾಗೂ ಮಣ್ಣು ಪರೀಕ್ಷೆಯ ಮಹತ್ವದ ಬಗ್ಗೆ ಮಾಹಿತಿ ನೀಡಿದರು.
ಸಹಾಯ ಕೃಷಿ ನಿರ್ದೇಶಕರಾದ ವೀರಭದ್ರಪ್ಪ ಮಾತನಾಡಿ ರಸಗೊಬ್ಬರದ ಬಳಕೆ , ಮಣ್ಣು ಪರೀಕ್ಷೆಗೆ ಮಣ್ಣು ತೆಗೆಯುವ ವಿಧಾನ , ಸರ್ಕಾರದಿಂದ ರೈತರಿಗೆ ಸಿಗುವ ಸೌಲಭ್ಯ, ವಿವಿಧ ರೀತಿಯ ಕಾಳು ಬೆಳೆಗಳನ್ನು ಬೆಳೆಯಲು ರೈತರಿಗೆ ಪ್ರೋತ್ಸಾಹಿಸಿದರು. ಕಳೆನಾಶಕಗಳನ್ನು ಬೆಳೆಗನುಗುಣವಾಗಿ ಬಳೆಸಬೇಕು, ಪೊಟ್ಯಾಶಿಯಂನ ಮಹತ್ವ, ಮುಂತಾದ ವಿಷಯದ ಬಗ್ಗೆ ಮಾಹಿತಿ ನೀಡಿದರು.
ತರಬೇತಿಯಲ್ಲಿ ಸಂಜೀವಿನಿ ಅಭಿಯಾನ ಘಟಕದ ವ್ಯವಸ್ಥಾಪಕರು ಕೃಷಿ ಬಂಗಾರಪ್ಪ , ಒಕ್ಕೂಟದ ಅಧ್ಯಕ್ಷರು, ಆತ್ಮ ಯೋಜನೆಯ ಸಿಬ್ಬಂದಿ ಅಭಿಲಾಶ್, ಪ್ರಗತಿಪರ ಕೃಷಿಕರಾದ ಸಾವ್ಯ ಬಾಲಕೃಷ್ಣ ಭಟ್ ಉಪಸ್ಥಿತರಿದ್ದರು. ಅಂಡಿಂಜೆ, ಸಾವ್ಯ, ಕೊಕ್ರಾಡಿ ಗ್ರಾಮದ ರೈತರು , ಒಕ್ಕೂಟದ ಪದಾಧಿಕಾರಿಗಳು, ಒಕ್ಕೂಟದ ಸಿಬ್ಬಂದಿಗಳು, ಪಂಚಾಯತ್ ಸಿಬ್ಬಂದಿಗಳು ಭಾಗವಹಿಸಿದ್ದರು.
ಕೃಷಿ ಸಖಿ ಶ್ರೀಮತಿ ವತ್ಸಲಾ ಸ್ವಾಗತಿಸಿದರು. ಪಂಚಾಯತ್ ಸಿಬ್ಬಂದಿ ಶೀನ ಕಾರ್ಯಕ್ರಮ ನಿರೂಪಿಸಿದರು. ಪಶು ಸಖಿ ಶ್ವೇತಾ ಧನ್ಯವಾದ ನೀಡಿದರು.













