ಪಡಂಗಡಿ : ಮಹಾತ್ಮ ಗಾಂಧಿ ಪಡಂಗಡಿ ಗ್ರಾಮ ಪಂಚಾಯತಿಯಲ್ಲಿ ಮಹಿಳಾ ಗ್ರಾಮಸಭೆಯು ಶ್ರೀಮತಿ ಮೀನಾಕ್ಷಿಯವರ ಅಧ್ಯಕ್ಷತೆಯಲ್ಲಿ ನಡೆಯಿತು.
ಸಭೆಯಲ್ಲಿ ಜಿಲ್ಲಾ ಮಹಿಳಾ ಸಬಲೀಕರಣ ಘಟಕ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಮಂಗಳೂರಿನ ಲಿಂಗ ತಜ್ಞರಾದ ಶ್ರೀಮತಿ ವಿಶಾಲಾಕ್ಷಿಯವರು ಮಹಿಳಾ ಸಬಲೀಕರಣಕ್ಕಾಗಿ ಸರಕಾರದಿಂದ ಜಾರಿಯಲ್ಲಿರುವ ಯೋಜನೆಗಳ ಕುರಿತು ಸುಧೀರ್ಘವಾದ ಮಾಹಿತಿಯನ್ನು ನೀಡಿದರು. ಸಭೆಯಲ್ಲಿ ಉಪಸ್ಥಿತರಿದ್ದ ಜಿಲ್ಲಾ ಐಇಸಿ ಸಂಯೋಜಕರಾದ ಸುನೀತಾರವರು ವಿಬಿ- ರಾಮ್ ಜೀ ಯೋಜನೆಯಲ್ಲಿ ಮಹಿಳೆಯರಿಗೆ ಇರುವ ಅವಕಾಶಗಳ ಬಗ್ಗೆ ಮಾಹಿತಿಯನ್ನು ನೀಡಿದರು. ಹೆಣ್ಣು ಮಕ್ಕಳ ವಿದ್ಯಾಭ್ಯಾಸಕ್ಕಾಗಿ, ಸ್ವಯಂ ಉದ್ಯೋಗಕ್ಕಾಗಿ ಹಾಗೂ ಸಾಮಾಜಿಕ ಜೀವನಕ್ಕಾಗಿ ಸರಕಾರದ ಯೋಜನೆಗಳ ನೆರವನ್ನು ಪಡೆದುಕೊಳ್ಳುವಂತೆ ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳಾದ ಶ್ರೀಮತಿ ಸಫಾನರವರು ಕರೆ ನೀಡಿದರು.
ಸಭಾಧ್ಯಕ್ಷತೆ ವಹಿಸಿದ್ದ ಶ್ರೀಮತಿ ಮೀನಾಕ್ಷಿಯವರು ಮಹಿಳೆಯರು ತಮ್ಮ ಮನೆಯಲ್ಲಿ ತನ್ನ ಪಾತ್ರವನ್ನು ಯಶಸ್ವಿಯಾಗಿ ನಿಭಾಯಿಸಿದಾಗ ಮಾತ್ರ ಸ್ವಸ್ಥ ಸಮಾಜದ ನಿರ್ಮಾಣ ಸಾಧ್ಯ ಎಂದು ತಿಳಿಸಿದರು. ಕಳೆದ ಮೂರು ಅವಧಿಗೆ ಗ್ರಾಮ ಪಂಚಾಯತ್ ಸದಸ್ಯರಾಗಿ ಮತ್ತು ಏಳು ವರ್ಷ ಆರು ತಿಂಗಳುಗಳ ಸುಧೀರ್ಘ ಅವಧಿಗೆ ಗ್ರಾಮ ಪಂಚಾಯತ್ ಅಧ್ಯಕ್ಷರಾಗಿ ಜನಪರವಾಗಿ ಕಾರ್ಯನಿರ್ವಹಿಸಿದ ಶ್ರೀಮತಿ ಮೀನಾಕ್ಷಿ ಮತ್ತು ಆರೋಗ್ಯ ಇಲಾಖೆಯಲ್ಲಿ ಮೂವತ್ತೈದು ವರ್ಷಗಳ ದಾದಿಯಾಗಿ ಸುಧೀರ್ಘ ಅವಧಿಗೆ ಕರ್ತವ್ಯ ನಿರ್ವಹಿಸಿ ಅನೇಕ ಮಹಿಳೆಯರ ಹೆರಿಗೆಯನ್ನು ಮಾಡಿಸಿ ಜೀವ ಉಳಿಸಿರುವ ವನಜಾಕ್ಷಿಯವರನ್ನು ಸಭೆಯಲ್ಲಿ ಗೌರವಿಸಿ ಸನ್ಮಾನಿಸಲಾಯಿತು.
ಮಾಜಿ ಉಪಾಧ್ಯಕ್ಷೆ ವಸಂತಿ, ಮಾಜಿ ಸದಸ್ಯರಾದ ಶಕುಂತಲಾ, ಸಂಜೀವಿನಿ ಒಕ್ಕೂಟದ ಎಂ ಬಿ ಕೆ ಶ್ರೀಮತಿ ಶಾಲಿನಿ, ಅರಿವು ಕೇಂದ್ರದ ಮೇಲ್ವಿಚಾರಕಿ ಶ್ರೀಮತಿ ವಿಮಲಾ, ಅಂಗನವಾಡಿ ಕಾರ್ಯಕರ್ತೆಯರು, ಆಶಾ ಕಾರ್ಯಕರ್ತೆಯರು ಹಾಗೂ ಪಡಂಗಡಿ ಮತ್ತು ಗರ್ಡಾಡಿ ಗ್ರಾಮಗಳ ಮಹಿಳೆಯರು ಭಾಗವಹಿಸಿದ್ದರು. ಗ್ರಾಮ ಪಂಚಾಯತ್ ಸಿಬ್ಬಂದಿಗಳಾದ ದಿವ್ಯ, ಹೊನ್ನಮ್ಮ, ಗೀತಾ ಮತ್ತು ವಿಮಲಾ ಇವರ ನಾಡಗೀತೆಯೊಂದಿಗೆ ಆರಂಭವಾದ ಸಭೆಯಲ್ಲಿ ಗ್ರಾಮ ಪಂಚಾಯತ್ ಕಾರ್ಯದರ್ಶಿ ಗಣೇಶ್ ಸ್ವಾಗತಿಸಿ, ನಿರೂಪಿಸಿ, ಧನ್ಯವಾದವಿತ್ತರು.












