ಧರ್ಮಸ್ಥಳ: ಭಾರತೀಯ ಜನತಾ ಪಾರ್ಟಿ ಕರ್ನಾಟಕ ವತಿಯಿಂದ ಪಂ. ದೀನದಯಾಳ್ ಉಪಾಧ್ಯಾಯ ಪ್ರಶಿಕ್ಷಣ ಮಹಾಭಿಯಾನ – 2026 ಅಂಗವಾಗಿ ಬೆಳ್ತಂಗಡಿ ಮಂಡಲ ಮಟ್ಟದ ಪ್ರಶಿಕ್ಷಣ ವರ್ಗ ಮೇ. 28 ರಂದು ಸೂರ್ಯಕಮಲ್ ಸಭಾಂಗಣದಲ್ಲಿ ಆರಂಭವಾಯಿತು.

ಕಾರ್ಯಕ್ರಮವನ್ನು ಬೆಳ್ತಂಗಡಿ ಶಾಸಕ ಹರೀಶ್ ಪೂಂಜ ಉದ್ಘಾಟಿಸಿದರು. ಪ್ರತಾಪ್ ಸಿಂಹ ನಾಯಕ್, ಜಯಂತ್ ಕೋಟ್ಯಾನ್ ಮರೋಡಿ, ಮಂಡಲ ಅಧ್ಯಕ್ಷ ಶ್ರೀನಿವಾಸ್ ರಾವ್ ಧರ್ಮಸ್ಥಳ, ಮಂಡಲ ಪ್ರಧಾನ ಕಾರ್ಯದರ್ಶಿ ಪ್ರಶಾಂತ್ ಎಂ ಪಾರೆಂಕಿ, ಸೀತಾರಾಮ್ ಬೆಳಾಲು, ಹಾಗೂ ಪ್ರಮುಖರು ಉಪಸ್ಥಿತರಿದ್ದರು.ಮೇ 28 ಮತ್ತು 29 ರಂದು ಎರಡು ದಿನಗಳ ಕಾಲ ನಡೆಯುವ ಈ ಪ್ರಶಿಕ್ಷಣ ವರ್ಗದಲ್ಲಿ ಮಂಡಲದ ಪ್ರಮುಖ ಪದಾಧಿಕಾರಿಗಳು, ಶಕ್ತಿ ಕೇಂದ್ರ ಪ್ರಮುಖರು ಮತ್ತು ಬೂತ್ ಅಧ್ಯಕ್ಷರು ಭಾಗವಹಿಸಿದರು.
ಪಕ್ಷದ ಸಿದ್ಧಾಂತ, ಸಂಘಟನಾತ್ಮಕ ವಿಷಯಗಳು, ಚುನಾವಣಾ ನಿರ್ವಹಣೆ ಮತ್ತು ಕೇಂದ್ರ-ರಾಜ್ಯ ಸರ್ಕಾರದ ಸಾಧನೆಗಳ ಬಗ್ಗೆ ಕಾರ್ಯಕರ್ತರಿಗೆ ತರಬೇತಿ ನೀಡಲಾಯಿತು.ಸಭಾಂಗಣವನ್ನು ಕೇಸರಿ ಧ್ವಜಗಳು ಮತ್ತು ಪಂ. ದೀನದಯಾಳ್ ಉಪಾಧ್ಯಾಯ ಅವರ ಭಾವಚಿತ್ರದೊಂದಿಗೆ ಸಿಂಗರಿಸಲಾಗಿತ್ತು. ಭಾಗವಹಿಸಿದ ಎಲ್ಲ ಕಾರ್ಯಕರ್ತರಿಗೆ ಪ್ರಶಿಕ್ಷಣ ಕೈಪಿಡಿ ಮತ್ತು ನೋಟ್ಬುಕ್ ವಿತರಿಸಲಾಯಿತು. ಬಿಜೆಪಿ ರಾಜ್ಯ ಘಟಕವು 2026ರ ಚುನಾವಣೆ ದೃಷ್ಟಿಯಿಂದ ರಾಜ್ಯದ ಎಲ್ಲ ಮಂಡಲಗಳಲ್ಲಿ ಈ ಪ್ರಶಿಕ್ಷಣ ಮಹಾಭಿಯಾನವನ್ನು ಹಮ್ಮಿಕೊಂಡಿದೆ.
ಪಕ್ಷವನ್ನು ತಳಮಟ್ಟದಿಂದ ಬಲಪಡಿಸುವುದು ಮತ್ತು ಕಾರ್ಯಕರ್ತರನ್ನು ಸೈದ್ಧಾಂತಿಕವಾಗಿ ಸಜ್ಜುಗೊಳಿಸುವುದು ಇದರ ಮುಖ್ಯ ಉದ್ದೇಶವಾಗಿದೆ. ಇಂದು ಸಂಜೆ ಸಮಾರೋಪ ಸಮಾರಂಭ ನಡೆಯಲಿದೆ.












