July 14, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಬೆಳ್ತಂಗಡಿ

ಎಸ್.ಡಿ.ಎಂ ಪ.ಪೂ ಕಾಲೇಜು : ‘ ಪ್ರವೇಶಂ’ ನೂತನ ವಿದ್ಯಾರ್ಥಿಗಳಿಗೆ ಸ್ವಾಗತ ಸಮಾರಂಭ

ಉಜಿರೆ : ಪ್ರತಿಯೊಬ್ಬ ಸಾಧಕ ವಿದ್ಯಾರ್ಥಿಯ ಹಿಂದೆ ನಿರಂತರ ಪ್ರಯತ್ನ ಮತ್ತು ಏಕಾಗ್ರತೆಯ ಜೊತೆಗೆ ಪೋಷಕರ ಪ್ರೋತ್ಸಾಹ ಹಾಗೂ ಗುರು ಹಿರಿಯರ ಮಾರ್ಗದರ್ಶನವಿರುತ್ತದೆ. ನಕಾರಾತ್ಮಕ ಚಿಂತನೆಗಳಿಗೆ ತಲೆದೂಗದೆ ಸಕಾರಾತ್ಮಕ ಯೋಚನೆ ಮತ್ತು ಯೋಜನೆಗಳಿಂದ ಯಶಸ್ಸನ್ನು ಸಾಧಿಸಿದಾಗ ಸಂಘ ಸಂಸ್ಥೆಗಳು ಹಾಗು ಸಮಾಜ ನಮ್ಮನ್ನು ಗುರುತಿಸಿ ಪ್ರೋತ್ಸಾಹಿಸುತ್ತದೆ ಎಂದು ಎಸ್.ಡಿ.ಎಂ ಶಿಕ್ಷಣ ಸಂಸ್ಥೆಗಳ ಕಾರ್ಯದರ್ಶಿ ಡಾ. ಸತೀಶ್ಚಂದ್ರ ಎಸ್ ಅಭಿಪ್ರಾಯಪಟ್ಟರು.

ಇವರು ಉಜಿರೆಯ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಪದವಿ ಪೂರ್ವ ಕಾಲೇಜಿನ ವತಿಯಿಂದ ಎಸ್.ಡಿ.ಎಂ ಸ್ವಾಯತ್ತ ಕಾಲೇಜಿನ ಇಂದ್ರಪ್ರಸ್ಥ ಸಭಾಂಗಣದಲ್ಲಿ ಆಯೋಜಿಸಿದ್ದ ‘ ಪ್ರವೇಶಂ 2026-27’ ಪ್ರಥಮ ಪಿಯುಸಿ
ನೂತನ ವಿದ್ಯಾರ್ಥಿಗಳ ಸ್ವಾಗತ ಹಾಗೂ ಪ್ರಶಿಕ್ಷಣ ಸಮಾರಂಭದಲ್ಲಿ ಮುಖ್ಯ ಅಭ್ಯಾಗತರಾಗಿ ಮಾತನಾಡಿದರು.

ಭವಿಷ್ಯದ ಬದುಕಿಗಾಗಿ ನಾವು ವಿದ್ಯಾರ್ಥಿ ಜೀವನದಿಂದಲೇ ಶಿಸ್ತು ಮತ್ತು ಯಶಸ್ಸಿನ ದಾರಿಯನ್ನು ರೂಡಿಸಿಕೊಳ್ಳಬೇಕು. ಪ್ರತಿಯೊಬ್ಬ ಪೋಷಕರಿಗೂ ವಿದ್ಯಾರ್ಥಿಗಳ ಮೇಲೆ ಮಹತ್ತರವಾದ ಕನಸ್ಸಿರುತ್ತದೆ. ಇದನ್ನು ಸಾಕಾರಗೊಳಿಸುವಲ್ಲಿ ವಿದ್ಯಾರ್ಥಿ ಸಮೂಹ ಉತ್ತಮ ನಾಗರಿಕರಾಗುವುದರ ಜೊತೆಗೆ ಈ ದೇಶದ ಜವಾಬ್ದಾರಿಯುತ ಪ್ರಜೆಗಳಾಗಬೇಕು ಎಂದು ಎಲ್ಲಾ ಸಾಧಕ ವಿದ್ಯಾರ್ಥಿಗಳಿಗೆ ಮತ್ತು ತರಬೇತುದಾರರಿಗೆ , ಪ್ರೋತ್ಸಾಹಿಸಿದ ಉಪನ್ಯಾಸಕರು ಮತ್ತು ಪೋಷಕರಿಗೆ ಅಭಿನಂದನೆಗಳನ್ನು ತಿಳಿಸಿ ಮೆಚ್ಚುಗೆ ವ್ಯಕ್ತಪಡಿಸಿದರು. ಮೌಲ್ಯಯುತ ಶಿಕ್ಷಣ ಮತ್ತು ಜೀವನ ಶಿಕ್ಷಣವನ್ನು ವಿದ್ಯಾರ್ಥಿಗಳಿಗೆ ಕಲ್ಪಸಿಕೊಡುವುದು ಎಸ್.ಡಿ.ಎಂ ಶಿಕ್ಷಣ ಸಂಸ್ಥೆಗಳ ಮಹತ್ತರ ಉದ್ದೇಶವಾಗಿದೆ. ಇದನ್ನು ಹಿರಿಯ ವಿದ್ಯಾರ್ಥಿಗಳು ಸಾಬೀತು ಮಾಡಿದ್ದಾರೆ. ಇವೆಲ್ಲವು ನಿಮಗೆ ಪ್ರೇರಣೆಯಾಗಬೇಕು ಎಂದರು.

ಕಾರ್ಯಕ್ರಮವನ್ನು ಎಸ್.ಡಿ.ಎಂ ಶಿಕ್ಷಣ ಸಂಸ್ಥೆಗಳ ಶೈಕ್ಷಣಿಕ ಸಂಯೋಜಕ ಪ್ರೊ. ಶಶಿಶೇಖರ್ ಕಾಕತ್ಕಾರ್ ಉದ್ಘಾಟಿಸಿದರು. ಬಳಿಕ ಮಾತನಾಡಿದ ಇವರು ಎಸ್.ಡಿ.ಎಂ ಶಿಕ್ಷಣ ಸಂಸ್ಥೆ ವಿದ್ಯಾರ್ಥಿಗಳ ಸರ್ವತೋಮುಖ ಬೆಳವಣಿಗೆಗಾಗಿ ಎಲ್ಲಾ ರೀತಿಯ ವ್ಯವಸ್ಥೆಗಳನ್ನು ಕಲ್ಪಿಸಿಕೊಟ್ಟಿದೆ. ವಿದ್ಯೆ ಎಂಬುದೂ ನಿಜವಾದ ಸಂಪತ್ತು. ಇದನ್ನು ಯಾರೂ ನಮ್ಮಿಂದ ಕಸಿದುಕೊಳ್ಳಲು ಸಾದ್ಯವಿಲ್ಲ. ಶಿಸ್ತು ಮತ್ತು ಸಂಸ್ಕಾರದಿಂದ ಕೂಡಿದ ವಿದ್ಯಾರ್ಥಿ ಜೀವನ ಅತ್ಯಂತ ಅರ್ಥಪೂರ್ಣ ಎನಿಸಿಕೊಳ್ಳುತ್ತದೆ ಎಂದು ವಿದ್ಯಾರ್ಥಿಗಳಿಗೆ ಶುಭ ಹಾರೈಸಿದರು.

ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿದ್ದ ಪುತ್ತೂರು ಸರಕಾರಿ ಪ.ಪೂ. ಕಾಲೇಜಿನ ಪ್ರಾಧ್ಯಾಪ ಅಬ್ದುಲ್ ರಜಾಕ್ ಅನಂತಾಡಿ ಪ್ರಧಾನ ಉಪನ್ಯಾಸ ನೀಡಿದರು. ವಿದ್ಯಾರ್ಥಿಗಳು ದೃಢತೆ ಮತ್ತು ಏಕಾಗ್ರತೆಯನ್ನು ಕಾಯ್ದುಕೊಳ್ಳಬೇಕು. ವಿದ್ಯಾಭ್ಯಾಸದ ಅವಧಿಯಲ್ಲಿ ವಿಚಲಿತರಾಗದೇ ಸಾಧನೆಯ ಗುರಿಯತ್ತ ಹೆಜ್ಜೆ ಹಾಕಬೇಕು. ಶಿಕ್ಷಣದ ವ್ಯವಸ್ಥೆಯಲ್ಲಿ ಹಾಜರಾತಿಯ ಜೊತೆಗೆ ಪಾಠ ಪ್ರವಚನಗಳ ಕಡೆ‌ ಹೆಚ್ಚಿನ ಗಮನ ನೀಡಬೇಕು. ಸಣ್ಣ ತಪ್ಪುಗಳು, ನಕಾರಾತ್ಮಕ ಯೋಚನೆಗಳು ಕಲಿಕೆಯ ಮೇಲೆ ಪ್ರಭಾವ ಬೀರುತ್ತದೆ.
ವಿದ್ಯಾರ್ಥಿಗಳು ಕಲಿಯುವ ವಿದ್ಯಾ ಸಂಸ್ಥೆಯ ಮೇಲೆ ಗೌರವ ಮತ್ತು ಅಭಿಮಾನ ಹೊಂದಿರಬೇಕು. ಹೆತ್ತವರ ಭರವಸೆಯನ್ನು ಸಕಾರಗೊಳಿಸುವಲ್ಲಿ ನಾವು ಪ್ರಯತ್ನ ಶೀಲರಾಗಬೇಕು ಎಂದು ಪ್ರಥಮ ಪಿಯುಸಿ ವಿದ್ಯಾರ್ಥಿಗಳಿಗೆ ಕಿವಿ ಮಾತು ನುಡಿದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ಕಾಲೇಜಿನ ಪ್ರಾಂಶುಪಾಲ ಪ್ರಮೋದ್ ಕುಮಾರ್ ಬಿ ಮಾತನಾಡಿ,
ವಿದ್ಯಾರ್ಥಿಗಳ ತುಡಿತ ಸಾಧನೆಯೆಡೆಗಿರಬೇಕು. ಎಸ್.ಡಿ.ಎಂ ಸಂಸ್ಥೆ ವಿದ್ಯಾರ್ಥಿಗಳ ಶೈಕ್ಷಣಿಕ ಬೆಳವಣಿಗೆಗಾಗಿ ಸರ್ವ ರೀತಿಯ ವ್ಯವಸ್ಥೆಗಳನ್ನು ಅನುವು ಮಾಡಿಕೊಟ್ಟಿದೆ ಇದನ್ನು ವಿದ್ಯಾರ್ಥಿಗಳು ಸದ್ಬಳಕೆ ಮಾಡಿಕೊಳ್ಳಬೇಕು ಎಂದರು.

ಕಾರ್ಯಕ್ರಮದಲ್ಲಿ ನೂತನವಾಗಿ ಆಗಮಿಸಿದ ಪ್ರಥಮ ವರ್ಷದ ಪಿಯುಸಿ ವಿದ್ಯಾರ್ಥಿಗಳಿಗೆ ‘ ಎಸ್.ಡಿ.ಎಂ ನಮ್ಮ ಹೆಮ್ಮೆ’ ಎಂಬ ಬ್ಯಾಡ್ಜ್ ವಿತರಿಸಲಾಯಿತು. ಸಭಾ ಕಾರ್ಯಕ್ರಮದ ಬಳಿಕ ಕಾಲೇಜಿನ ಶಿಸ್ತು, ನಿಯಮ ಸೇರಿದಂತೆ ವಿವಿಧ ಸವಲತ್ತು, ವಿಭಾಗ ಹಾಗು ಕಮಿಟಿಗಳ ಮಾಹಿತಿ ಕಾರ್ಯಕ್ರಮ ಜರುಗಿತು.

ಕಾರ್ಯಕ್ರಮದಲ್ಲಿ ವಿದ್ಯಾರ್ಥಿ ಕ್ಷೇಮಪಾಲನಾಧಿಕಾರಿ ಯುವರಾಜ್ ಪುವಣಿ, ಪೋಷಕರು, ವಿದ್ಯಾರ್ಥಿಗಳು ಸೇರಿದಂತೆ ಉಪನ್ಯಾಸಕರು ಭಾಗಿಯಾಗಿದ್ದರು. ಕಾರ್ಯಕ್ರಮವನ್ನು ಕಾಲೇಜಿನ ಉಪ ಪ್ರಾಚಾರ್ಯ ಡಾ. ರಾಜೇಶ್ ಬಿ. ಸ್ವಾಗತಿಸಿದರು. ಕಾಲೇಜು ವಿದ್ಯಾರ್ಥಿನಿಯರು ಪ್ರಾರ್ಥನೆ ಹಾಡಿದರು. ಕಾರ್ಯಕ್ರಮವನ್ನು ಉಪನ್ಯಾಸಕ ಡಾ . ಮಹಾವೀರ ಜೈನ್ ನಿರೂಪಿಸಿ, ಉಪನ್ಯಾಸ ತಿರುಮಲೇಶ್ ವಂದಿಸಿದರು. ಉಪನ್ಯಾಸಕಿ ಕುಮಾರಿ ದಿವ್ಯ ಮತ್ತು ನಿಹಾರಿಕ ಸಹಕರಿಸಿದರು.

ರಾಜ್ಯ ಮಟ್ಟದದಲ್ಲಿ ರ್ಯಾಂಕ್ ವಿಜೇತರಿಗೆ ಸನ್ಮಾನ :

ಕಾರ್ಯಕ್ರಮದಲ್ಲಿ 2025 -26 ನೇ ಸಾಲಿನ ಶೈಕ್ಷಣಿಕ ವರ್ಷದ ವಾರ್ಷಿಕ ಪಿಯುಸಿ ಪರೀಕ್ಷೆಯಲ್ಲಿ ಉತ್ತಮ ಅಂಕ ಪಡೆದು, ರಾಜ್ಯ ಮಟ್ಟದದಲ್ಲಿ ರ್ಯಾಂಕ್ ಪಡೆದ ಏಳು ವಿದ್ಯಾರ್ಥಿಗಳಿಗೆ ಸನ್ಮಾನ ಕಾರ್ಯಕ್ರಮ ನಡೆಯಿತು. ಈ ಸಂದರ್ಭದಲ್ಲಿ ಎಸ್.ಡಿ.ಎಂ ಶಿಕ್ಷಣ ಸಂಸ್ಥೆಗಳ ಕಾರ್ಯದರ್ಶಿ ಡಾ. ಸತೀಶ್ಚಂದ್ರ ಎಸ್ ಅತಿಥಿಗಳ ಸಮ್ಮುಖದಲ್ಲಿ ವಿದ್ಯಾರ್ಥಿಗಳಾದ ಕಲಾ ವಿಭಾಗದಲ್ಲಿ ರಾಜ್ಯಕ್ಕೆ 2ನೇ ಸ್ಥಾನ ಪಡೆದ ನಿಜ ಕುಲಾಲ್, 9ನೇ ಸ್ಥಾನ ಪಡೆದ ಶ್ರೀಪೂರ್ಣ ಗಬ್ಲಡ್ಕ, ವಾಣಿಜ್ಯ ವಿಭಾಗದಲ್ಲಿ ರಾಜ್ಯಕ್ಕೆ 6 ನೇ ಸ್ಥಾನ ಪಡೆದ ಹಂಸಿನಿ ಭಿಡೆ, 8 ನೇ ಸ್ಥಾನ ಪಡೆದ ಅರ್ಪಿತ ಅಡಿಗ, 9 ನೇ ಸ್ಥಾನ ಪಡೆದ ಅಂಶುಲ ಶ್ರೇಷ್ಠ, 10 ನೇ ಸ್ಥಾನ ಪಡೆದ ರಾಮಚರಣ್ ಎಸ್, ಮತ್ತು ವಿಜ್ಞಾನ ವಿಭಾಗದಲ್ಲಿ 9 ನೇ ಸ್ಥಾನ ಪಡೆದ ಅಂಕಿತಾ ಇವರನ್ನು ಶಾಲು ಹೊದಿಸಿ ಗೌರವಿಸಿದರು.

Related posts

ಮುಂಡಾಜೆ ಗ್ರಾಮ ಪಂಚಾಯತ್ ನ ಗ್ರಾಮ ಸಭೆ

Suddi Udaya

ಪೆರಿಂಜೆ: ಪೇಪರ್ ಪೆನ್ ತಯಾರಿ ಕಾರ್ಯಾಗಾರ ಹಾಗೂ ಪರಿಸರ ಜಾಗೃತಿ ಕಾರ್ಯಕ್ರಮ

Suddi Udaya

ಧರ್ಮಸ್ಥಳ: ಶಾಂತಿವನ ಯೋಗ ಮತ್ತು ಪ್ರಕೃತಿ ಚಿಕಿತ್ಸಾಲಯದಲ್ಲಿ ಗಣರಾಜ್ಯೋತ್ಸವ ಆಚರಣೆ – ಭಾರತ ವಿಶ್ವಗುರುವಾಗಬೇಕು : ಎಚ್.ಎನ್. ಚಂದ್ರಶೇಖರ್

Suddi Udaya

ಬೆಳ್ತಂಗಡಿ: ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ಸ್ಥಳೀಯ ಸಂಸ್ಥೆಯಿಂದ ದ್ವಿತೀಯ ಸೋಪಾನ, ಗರಿ, ಚರಣ ಪರೀಕ್ಷೆ

Suddi Udaya

ಬೆಳ್ತಂಗಡಿ ವಿಧಾನ ಸಭಾ ಕ್ಷೇತ್ರದ ಮತ ಎಣಿಕೆ :ಎಂಟನೇ ಸುತ್ತಿನಲ್ಲಿ 7906 ಮತಗಳ ಮೂಲಕ ಬಿಜೆಪಿ ಅಭ್ಯರ್ಥಿ ಹರೀಶ್ ಪೂಂಜ ಮುನ್ನಡೆ

Suddi Udaya

ಜ.16-20: ಗೇರುಕಟ್ಟೆ ವಲಿಯುಲ್ಲಾಹಿ ಫಕೀರ್ ಮುಹಿಯುದ್ದೀನ್ ದರ್ಗಾ ಶರೀಫ್ ಪರಪ್ಪು ಉರೂಸ್ ಕಾರ್ಯಕ್ರಮ

Suddi Udaya
error: Content is protected !!