ಉಜಿರೆ : ಪಾಶ್ಚಾತ್ಯ ಸಂಸ್ಕೃತಿಯ ಆಕರ್ಷಣೆಯಿಂದ ಭಾರತೀಯ ಆಚರಣೆ ಸಂಸ್ಕೃತಿಗಳು ಮೂಲೆ ಗುಂಪಾಗುತ್ತಿರುವ ಪ್ರಸ್ತುತ ಸಂದರ್ಭದಲ್ಲಿ ಎಸ್.ಡಿ.ಎಂ ನ ರತ್ನಮಾನಸದಂತ ವಿದ್ಯಾರ್ಥಿ ನಿಲಯಗಳು ವಿದ್ಯಾರ್ಥಿಗಳಲ್ಲಿ ನೈತಿಕ ಶಿಕ್ಷಣವನ್ನು ನೀಡುವ ಜೊತೆಗೆ ದೇಶಿಯ ಚಿಂತನೆ ಮತ್ತು ಸುಸಂಸ್ಕೃತವಾದ ಜೀವನ ಶೈಲಿಯನ್ನು ಕಲಿಸಿಕೊಡುತ್ತಿದೆ.
ಇದನ್ನು ಮುಂದಿನ ತಲೆಮಾರಿಗೆ ಪರಿಚಯಿಸುವ ಜವಾಬ್ದಾರಿ ನಮ್ಮೆಲ್ಲರ ಮೇಲಿದೆ. ವಿದ್ಯಾರ್ಥಿಗಳು ಆತ್ಮವಿಶ್ವಾಸ ಮತ್ತು ಸ್ವಧೈರ್ಯದಿಂದ ಬದುಕು ಕಟ್ಟಿಕೊಳ್ಳುವ ಜೊತೆಗೆ ಸಹಬಾಳ್ವೆಯ ಜೀವನವನ್ನು ರೂಪಿಸಿಕೊಳ್ಳುಬೇಕು ಎಂದು ಉಜಿರೆಯ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಪದವಿ ಪೂರ್ವ ಕಾಲೇಜಿನ ಉಪನ್ಯಾಸಕ ಡಾ. ಮಹಾವೀರ್ ಜೈನ್ ಅಭಿಪ್ರಾಯ ಪಟ್ಟರು.

ಇವರು ಉಜಿರೆಯ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ರತ್ನಮಾನಸ ವಿದ್ಯಾರ್ಥಿ ನಿಲಯದಲ್ಲಿ ಆಯೋಜಿಸಲಾದ ನೂತನವಾಗಿ ಸೇರ್ಪಡೆಗೊಂಡ ವಿದ್ಯಾರ್ಥಿಗಳ ಪ್ರವೇಶೋತ್ಸವ ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ಪ್ರಧಾನ ಉಪನ್ಯಾಸ ನೀಡಿದರು.
ಧರ್ಮಸ್ಥಳದ ಧರ್ಮಾಧಿಕಾರಿ ಡಾ. ವೀರೇಂದ್ರ ಹೆಗ್ಗಡೆಯವರ ದೂರ ದೃಷ್ಟಿತ್ವದಿಂದ ಆರಂಭಗೊಂಡ ಶಿಕ್ಷಣ ಸಂಸ್ಥೆಗಳು ಇಂದು ರಾಜ್ಯಾದ್ಯಂತ 50 ಕ್ಕೂ ಅಧಿಕ ಶಿಕ್ಷಣ ಸಂಸ್ಥೆಗಳನ್ನು ಹೊಂದಿದೆ. 35 ಸಾವಿರಕ್ಕೂ ಅಧಿಕ ವಿದ್ಯಾರ್ಥಿಗಳು ವಿದ್ಯಾಭ್ಯಾಸವನ್ನು ಮಾಡುತ್ತಿದ್ದಾರೆ. 8 ಸಾವಿರಕ್ಕೂ ಹೆಚ್ಚಿನ ಸಿಬ್ಬಂದಿಗಳು ವಿದ್ಯಾರ್ಥಿಗಳ ಸರ್ವತೋಮುಖ ಬೆಳವಣಿಗೆಗಾಗಿ ಕಾರ್ಯನಿರ್ವಹಿಸುತ್ತಿದ್ದಾರೆ.

ಬದುಕಿನಲ್ಲಿ ಶಿಕ್ಷಣ ಅನ್ನ ನೀಡಿದರೆ ಸಂಸ್ಕಾರ ಬದುಕಿಗೆ ಅರ್ಥ ನೀಡುತ್ತದೆ. 21ನೇ ಶತಮಾನದಲ್ಲಿ ಶಿಕ್ಷಣವಿಲ್ಲದೆ ಉತ್ತಮ ಜೀವನವನ್ನು ರೂಪಿಸಿಕೊಳ್ಳುವುದು ಅಸಾಧ್ಯ.
ಗುರುಕುಲದಂತಹ ಶಿಕ್ಷಣ ಸಂಸ್ಥೆಗಳು ಅನೇಕ ಸಾಧು ಸಂತರನ್ನು ಈ ಸಮಾಜಕ್ಕೆ ನೀಡಿದೆ. ಅಂಥವರ ಮಾರ್ಗದರ್ಶನ ಈ ನಾಡಿನ ಚಿಂತನೆ ಮತ್ತು ಆಚಾರ ವಿಚಾರಗಳನ್ನು ಮತ್ತಷ್ಟು ಬಲಗೊಳಿಸಿದೆ. ರತ್ನಮಾಸದಂತ ವಿದ್ಯಾರ್ಥಿ ನಿಲಯದಿಂದ ಸಮಾಜ ಸುಧಾರಕ ಮತ್ತು ದೇಶ ಕಟ್ಟುವ ವಿದ್ಯಾರ್ಥಿಗಳನ್ನು ನಿರ್ಮಾಣ ಮಾಡಬೇಕು.
ವಿದ್ಯಾರ್ಥಿ ನಿಲಯವು ತನ್ನದೇ ಆದ ಶಿಸ್ತು ಮತ್ತು ಚಟುವಟಿಕೆಗಳ ಕಾರ್ಯರೂಪವನ್ನು ಹೊಂದಿದೆ. ವಿದ್ಯಾರ್ಥಿಗಳು ನಿಲಯ ಸೇರ್ಪಡೆಯ ಉದ್ದೇಶವನ್ನು ಮರೆಯಬಾರದು. ವಿದ್ಯಾರ್ಥಿಗಳ ಬೆಳವಣಿಗೆಯಲ್ಲಿ ಪೋಷಕರ ಸಹಕಾರವು ಬಹು ಮುಖ್ಯ. ವಿದ್ಯಾರ್ಥಿಗಳು ನಕಾರಾತ್ಮಕ ಚಿಂತನೆಗಳಿಗೆ ಒಳಗಾಗದಂತೆ ಮಾರ್ಗದರ್ಶನ ಮಾಡಬೇಕು. ಬದುಕಿನಲ್ಲಿ ಕೋಪ, ಅಸೂಯೆ, ಆಲಸ್ಯ ನಮ್ಮನ್ನು ಅತ್ಯಂತ ಸಾಮಾನ್ಯರನ್ನಾಗಿಸುತ್ತದೆ.
ಶೈಕ್ಷಣಿಕ ವಿದ್ಯಾಭ್ಯಾಸದ ಜೊತೆಗೆ ಪ್ರಾಯೋಗಿಕ ಅನುಭವಗಳ ಮೂಲಕ ಜೀವನ ಶಿಕ್ಷಣವನ್ನು ಕಲಿಸಿಕೊಡುತ್ತಿರುವ ಉಜಿರೆಯ ರತ್ನ ಮಾನಸ ವಿದ್ಯಾರ್ಥಿ ನಿಲಯಕ್ಕೆ ರಾಜ್ಯದ ನಾನಾ ಜಿಲ್ಲೆಗಳಿಂದ ವಿದ್ಯಾರ್ಥಿಗಳನ್ನು ಸೇರ್ಪಡೆ ಮಾಡಿರುವುದು ಪೋಷಕರ ಹೆಮ್ಮೆಯ ಸಂಗತಿ ಎಂದು ಹೆತ್ತವರಿಗೆ ಅಭಿನಂದನೆಗಳನ್ನು ಸಲ್ಲಿಸಿದರು.
ಕಾರ್ಯಕ್ರಮವನ್ನು ಉಜಿರೆಯ ಎಸ್.ಡಿ.ಎಂ ಸೆಕೆಂಡರಿ ಶಾಲೆಯ ಮುಖ್ಯ ಶಿಕ್ಷಕಿ ವಿದ್ಯಾಕಿರಣ್ ದೀಪ ಪ್ರಜ್ವಲಿಸುವ ಮೂಲಕ ಚಾಲನೆ ನೀಡಿ, ಹೊಸ ಉತ್ಸಾಹದಿಂದ ವಿದ್ಯಾರ್ಥಿಗಳು ಇಂದು ನಾನ ಜಿಲ್ಲೆಗಳಿಂದ ಆಗಮಿಸಿದ್ದೀರ. ಪೋಷಕರ ಭರವಸೆ ಮತ್ತು ಕನಸ್ಸನ್ನು ಸಕಾರಗೊಳಿಸುವಲ್ಲಿ ಯಶಸ್ವಿಯಾಗಬೇಕು ಎಂದು ಶುಭ ಹಾರೈಸಿದರು.
ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದ ನಿಲಯದ ಹಿರಿಯ ವಿದ್ಯಾರ್ಥಿ ಡಾ. ವೆಂಕಟೇಶ್ ತಮ್ಮ ಮೂರು ದಶಕಗಳ ಹಿಂದಿನ ಅನುಭವವನ್ನು ಹಂಚಿಕೊಂಡರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ನಿಲಯದ ಮುಖ್ಯ ಮೇಲ್ವಿಚಾರಕ ಯತೀಶ್ ಬಳಂಜ ಮಾತನಾಡಿ, ವಿದ್ಯಾರ್ಥಿ ನಿಲಯವು ವಿದ್ಯಾರ್ಥಿಗಳಿಗೆ ಜೀವನ ಕಲೆಯ ಶಿಕ್ಷಣವನ್ನು ಕಲಿಸಿಕೊಡುವ ಜೊತೆಗೆ ಶೈಕ್ಷಣಿಕವಾಗಿ ಎಸ್.ಎಸ್.ಎಲ್.ಸಿ ಫಲಿತಾಂಶದಲ್ಲೂ ಕಳೆದ ಅನೇಕ ವರ್ಷಗಳಿಂದ ನೂರು ಶೇಕಡಾವನ್ನು ಕಾಯ್ದುಕೊಂಡು ಬಂದಿದೆ. ವಿದ್ಯಾರ್ಥಿಗಳ ದೈಹಿಕ ಮತ್ತು ಮಾನಸಿಕ ಕ್ಷಮತೆಯನ್ನು ಹೆಚ್ಚಿಸಲಿ ನಿಲಯದಲ್ಲಿ ಅನೇಕ ಚಟುವಟಿಕೆಗಳನ್ನು ಮಾಡಿಸಲಾಗುತ್ತದೆ. ವಿದ್ಯಾರ್ಥಿಗಳ ಬೆಳವಣಿಗೆಗೆ ಪೂರಕವಾಗುವ ಎಲ್ಲಾ ರೀತಿಯ ವ್ಯವಸ್ಥೆಗಳನ್ನು ಸಂಸ್ಥೆ ಕಲ್ಪಿಸಿಕೊಟ್ಟಿದೆ. ಇದನ್ನು ವಿದ್ಯಾರ್ಥಿಗಳು ಸದ್ಬಳಕೆ ಮಾಡಿಕೊಳ್ಳಬೇಕು ಎಂದು ವಿದ್ಯಾರ್ಥಿಗಳಿಗೆ ಶುಭ ಹಾರೈಸಿದರು.
ಕಾರ್ಯಕ್ರಮದಲ್ಲಿ ಸಂಸ್ಥೆಯ ಸಾರ್ವಜನಿಕ ಸಂಪರ್ಕ ವಿಭಾಗದ ಅರವಿಂದ, ನಿಲಯ ಪಾಲಕರಾದ ರವಿಚಂದ್ರ, ಉದಯರಾಜ್, ದೀಪಕ್ ಸೇರಿದಂತೆ ವಿದ್ಯಾರ್ಥಿಗಳು ಮತ್ತು ಪೋಷಕರು ಭಾಗಿಯಾಗಿದ್ದರು. ರಾಕೇಶ್ ಡಿ ಆರ್ ಮತ್ತು ಜ್ಞಾನೇಶ್ ಪ್ರಾರ್ಥನೆ ಹಾಡಿದರು. ಕಾರ್ಯಕ್ರಮವನ್ನು ಸಮ್ಯಕ್ ಜೈನ್ ನಿರೂಪಿಸಿ, ವಿದ್ಯಾರ್ಥಿ ಕೌತುಕ್ ವಂದಿಸಿದರು.
ಆರತಿ ಬೆಳಗಿ ಬರಮಾಡಿಕೊಂಡ ವಿದ್ಯಾರ್ಥಿಗಳು :
ಸಭಾ ಕಾರ್ಯಕ್ರಮದ ಆರಂಭವಾಗುವ ಮುನ್ನ ವಿದ್ಯಾರ್ಥಿಗಳು ನೂತನವಾಗಿ ಸೇರ್ಪಡೆಗೊಂಡ ವಿದ್ಯಾರ್ಥಿ ಮತ್ತು ಪೋಷಕರನ್ನು ಆರತಿ ಬೆಳಗಿ ಸ್ವಾಗತಿಸಿದರು. ಸ್ವತಃ ವಿದ್ಯಾರ್ಥಿಗಳೇ ಶಂಖ ಮತ್ತು ಜಾಗಟೆಯ ಸಂಭ್ರಮದೊಂದಿಗೆ ಎಲ್ಲರನ್ನು ಮೆರವಣಿಗೆಯ ಮೂಲಕ ಬರಮಾಡಿಕೊಂಡರು.












