ಉಜಿರೆ: ಉಜಿರೆಯ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ (ಸ್ವಾಯತ್ತ) ಕಾಲೇಜು 2024-25ನೇ ಶೈಕ್ಷಣಿಕ ಸಾಲಿನಲ್ಲಿ ಹೊರತಂದ ‘ಮನೀಷಾ’ ವಾರ್ಷಿಕ ಸಂಚಿಕೆಯು ಮಂಗಳೂರು ವಿಶ್ವವಿದ್ಯಾನಿಲಯ ಮಟ್ಟದ ಸ್ಪರ್ಧೆಯಲ್ಲಿ ಮತ್ತೊಮ್ಮೆ ಮೊದಲ ಬಹುಮಾನಿತ ಆದ್ಯತೆಯೊಂದಿಗೆ ‘ಅತ್ಯುತ್ತಮ ಕಾಲೇಜು ಮ್ಯಾಗಝಿನ್” ಎಂಬ ಮನ್ನಣೆಗೆ ಪಾತ್ರವಾಗಿದೆ.
ಈ ಮೂಲಕ ಸತತ ಮೂರು ವರ್ಷಗಳ ಕಾಲ ಅತ್ಯುತ್ತಮ ಕಾಲೇಜು ಮ್ಯಾಗಝಿನ್ ಆಗಿ ಹ್ಯಾಟ್ರಿಕ್ ಹೆಗ್ಗಳಿಕೆಯನ್ನು ತನ್ನದಾಗಿಸಿಕೊಂಡಿದೆ. ಈ ಹಿಂದೆ 2022-23, 2023-24 , 2024-25ರ ಎರಡೂ ಶೈಕ್ಷಣಿಕ ವರ್ಷಗಳಲ್ಲಿ ಬೆಸ್ಟ್ ಮ್ಯಾಗಜಿನ್ ಮಾನ್ಯತೆ ಪಡೆದಿತ್ತು.
ಇತ್ತೀಚೆಗೆ ಮಂಗಳೂರು ವಿಶ್ವವಿದ್ಯಾಲಯದಲ್ಲಿ ನಡೆದ ಸಮಾರಂಭದಲ್ಲಿ ಕುಲಪತಿ ಪ್ರೊ.ಪಿ.ಎಲ್.ಧರ್ಮ ಅವರು ಎಸ್.ಡಿ.ಎಂ ಕಾಲೇಜಿನ ಪ್ರಾಂಶುಪಾಲರಾದ ಡಾ.ವಿಶ್ವನಾಥ ಪಿ ಅವರಿಗೆ ‘ಮನೀಷಾ’ ಸಂಚಿಕೆಯ ಅನನ್ಯ ಪ್ರಯೋಗಶೀಲತೆಗಾಗಿ ಪ್ರಥಮ ಬಹುಮಾನಿತ ಮನ್ನಣೆಯ ಪ್ರಶಸ್ತಿ ಪತ್ರ ನೀಡಿ ಗೌರವಿಸಿದರು.
ಪ್ರಸಕ್ತ ವರ್ಷದ ಸಂಚಿಕೆಯು ಪದವಿ ಮತ್ತು ಮತ್ತು ಸ್ನಾತಕೋತ್ತರ ಪದವಿ ವಿದ್ಯಾರ್ಥಿ ವಿದ್ಯಾರ್ಥಿನಿಯರ ಬರಹ, ಕವಿತೆ, ಕಥೆಗಳನ್ನು ಒಳಗೊಂಡಿದೆ. ಕರ್ನಾಟಕ ಮಾತ್ರವಲ್ಲದೇ ಭಾರತದ ಉಳಿದ ಪ್ರದೇಶಗಳ ಸ್ಥಳೀಯ ಸಂಸ್ಕೃತಿಯನ್ನು ಧ್ವನಿಸುವ ಬರಹಗಳು, ಉಪಭಾಷಿಕ ಅಸ್ಮಿತೆ, ಹೊಸ ಕಾಲದ ತಲ್ಲಣಗಳ ಕುರಿತ ಯುವ ಮನಸುಗಳ ವಿವೇಚನಾತ್ಮಕ ಚಿಂತನೆ, ಬೆಳೆಯುವ ಮನಸುಗಳ ವಿಭಿನ್ನ ಆಶೋತ್ತರಗಳನ್ನು ಈ ಸಂಚಿಕೆಯು ದಾಖಲಿಸಿದೆ.
ಬೆಸ್ಟ್ ಮ್ಯಾಗಝಿನ್ ಹ್ಯಾಟ್ರಿಕ್ ಮನ್ನಣೆಗೆ ಪಾತ್ರವಾದ ಮನೀಷಾ ಸಂಚಿಕೆಯ ವಿದ್ಯಾರ್ಥಿ ಬರಹಗಾರರು ಮತ್ತು ಸಂಪಾದಕೀಯ ಮಂಡಳಿಯ ಪ್ರಯೋಗಶೀಲತೆಯ ಬಗ್ಗೆ ಎಸ್.ಡಿ.ಎಂ ಶಿಕ್ಷಣ ಸಂಸ್ಥೆಗಳ ಅಧ್ಯಕ್ಷರೂ, ಧರ್ಮಸ್ಥಳ ಧರ್ಮಾಧಿಕಾರಿ ಡಿ.ವೀರೇಂದ್ರ ಹೆಗ್ಗಡೆ, ಕಾರ್ಯದರ್ಶಿಗಳಾದ ಡಿ.ಹರ್ಷೇಂದ್ರ ಕುಮಾರ್, ಡಾ.ಸತೀಶ್ಚಂದ್ರ ಎಸ್, ಪ್ರಾಂಶುಪಾಲರಾದ ಪ್ರೊ.ವಿಶ್ವನಾಥ ಪಿ, ಎಸ್.ಡಿ.ಎಂ ಸ್ನಾತಕೋತ್ತರ ಕೇಂದ್ರದ ಡೀನ್ ಡಾ.ಸೌಮ್ಯ ಬಿ.ಪಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ಕಳೆದ ಮೂರು ವರ್ಷಗಳಿಂದ ಸತತವಾಗಿ ನಮ್ಮ ಕಾಲೇಜಿನ ವಾರ್ಷಿಕ ಸಂಚಿಕೆಗೆ ಅತ್ಯುತ್ತಮ ಕಾಲೇಜು ಮ್ಯಾಗಝೀನ್ ಪ್ರಶಸ್ತಿ ಬಂದಿರುವುದು ಅತ್ಯಂತ ಸಂತೋಷದ ವಿಷಯ.
ಈ ಪ್ರಶಸ್ತಿಯು ನಮ್ಮ ಕಾಲೇಜಿನ ಪದವಿ ಮತ್ತು ಸ್ನಾತಕೋತ್ತರ ಪದವಿಯ ವಿದ್ಯಾರ್ಥಿ/ನಿಯ ಶೈಕ್ಷಣಿಕ ಮಟ್ಟವನ್ನು ಸೂಚಿಸುತ್ತದೆ. ಮೌಲಿಕವಾದ ಶ್ರೇಷ್ಠ ಗುಣಮಟ್ಟದ ಶಿಕ್ಷಣವನ್ನು ಸಂಸ್ಥೆಯು ನೀಡಿರುವುದರಿಂದ ಸಹಜವಾಗಿ ವಿದ್ಯಾರ್ಥಿ/ನಿಯರ ವಿವಿಧ ಲೇಖನಗಳು ಗುಣಮಟ್ಟವನ್ನು ಕಾಯ್ದುಕೊಂಡಿರುತ್ತದೆ. ನಮ್ಮ ಸಂಸ್ಥೆಯ ಅಧ್ಯಕ್ಷರ ಮತ್ತು ಆಡಳಿತ ಮಂಡಳಿಯವರ ಮಾರ್ಗದರ್ಶನದಲ್ಲಿ ಮೂಡಿಬಂದಿರುವ ಮನೀಷಾ ಇದರ ಸಂಪಾದಕ ಮಂಡಳಿಗೆ ಅಭಿನಂದನೆಗಳು.
– ಪ್ರೊ. ವಿಶ್ವನಾಥ್ ಪಿ ಪ್ರಾಚಾರ್ಯರು, ಎಸ್.ಡಿ.ಎಂ ಸ್ವಾಯತ್ತ ಕಾಲೇಜು ಉಜಿರೆ.












