ಉಜಿರೆ: ವಿಶ್ವ ಪರಿಸರ ದಿನಾಚರಣೆ ಹಾಗೂ “ಸ್ವಚ್ಛ ಗ್ರಾಮ, ಸುರಕ್ಷಿತ ಹವಾಮಾನ” ವಿಶೇಷ ಅಭಿಯಾನವನ್ನು ಉಜಿರೆ ಗ್ರಾಮ ಪಂಚಾಯತ್ ವತಿಯಿಂದ ಸ್ವಚ್ಛ ಸಂಕೀರ್ಣ ಘನ ತ್ಯಾಜ್ಯ ನಿರ್ವಹಣಾ ಘಟಕದಲ್ಲಿ ಆಚರಿಸಲಾಯಿತು.

ಕಾರ್ಯಕ್ರಮದ ಅಂಗವಾಗಿ ತೋಟಗಾರಿಕಾ ಇಲಾಖೆಯಿಂದ ಪಡೆದುಕೊಂಡ ರಾಂಬುಟನ್, ಹಲಸು, ಮಾವು ಸೇರಿದಂತೆ ವಿವಿಧ ಜಾತಿಯ ಸುಮಾರು 50 ಹಣ್ಣಿನ ಗಿಡಗಳನ್ನು ಸ್ವಚ್ಛ ಸಂಕೀರ್ಣ ಘನ ತ್ಯಾಜ್ಯ ನಿರ್ವಹಣಾ ಘಟಕದ ಸಮೀಪದ ಪ್ರದೇಶದಲ್ಲಿ ನೆಟ್ಟು ವೃಕ್ಷಾರೋಪಣ ನಡೆಸಲಾಯಿತು.
ಈ ಸಂದರ್ಭದಲ್ಲಿ ಪಂಚಾಯತ್ ಅಭಿವೃದ್ಧಿ ಅಧಿಕಾರಿ ಪ್ರಕಾಶ್ ಶೆಟ್ಟಿ ಮಾತನಾಡಿ, “ತ್ಯಾಜ್ಯವನ್ನು ಮೂಲದಲ್ಲಿಯೇ ವಿಂಗಡಿಸುವುದು ಪ್ರತಿಯೊಬ್ಬ ನಾಗರಿಕನ ಜವಾಬ್ದಾರಿಯಾಗಿದೆ. ‘ನನ್ನ ತ್ಯಾಜ್ಯ ನನ್ನ ಜವಾಬ್ದಾರಿ’ ಎಂಬುದು ಉಜಿರೆಯ ಪ್ರತಿಯೊಬ್ಬ ನಾಗರಿಕನ ಧ್ಯೇಯ ವಾಕ್ಯವಾಗಬೇಕು. ಸ್ವಚ್ಛತೆ ಮತ್ತು ಪರಿಸರ ಸಂರಕ್ಷಣೆಯಲ್ಲಿ ಸಾರ್ವಜನಿಕರ ಸಹಭಾಗಿತ್ವ ಅತ್ಯಗತ್ಯ” ಎಂದು ಹೇಳಿದರು.
ಮಾಜಿ ಸದಸ್ಯರಾದ ನಾಗೇಶ್ ಅವರು ಮಾತನಾಡಿ, ಪರಿಸರ ಸಂರಕ್ಷಣೆ ಇಂದಿನ ಅಗತ್ಯವಾಗಿದ್ದು, ಪ್ರಕೃತಿಯನ್ನು ಉಳಿಸುವುದು ಪ್ರತಿಯೊಬ್ಬರ ಕರ್ತವ್ಯವಾಗಿದೆ ಎಂದು ತಿಳಿಸಿದರು. ನಮ್ಮ ಪೂರ್ವಜರು ಪರಿಸರದ ಮಹತ್ವವನ್ನು ಮನಗಂಡು ಅಶ್ವತ್ಥ ಕಟ್ಟೆಯಂತಹ ಸಂಪ್ರದಾಯಗಳ ಮೂಲಕ ಪ್ರಕೃತಿಯೊಂದಿಗೆ ನಿಕಟ ಸಂಬಂಧ ಬೆಳೆಸಿದ್ದರು ಎಂದು ಅವರು ಸ್ಮರಿಸಿದರು.
ಕೃಷಿ ಸಖಿ ಭಾಗೀರತಿ ಅವರು ಮಾತನಾಡಿ, ಸ್ವಚ್ಛ ಸಂಕೀರ್ಣ ಘಟಕಕ್ಕೆ ಭೇಟಿ ನೀಡಿದಾಗ ತ್ಯಾಜ್ಯ ನಿರ್ವಹಣೆಯ ಸವಾಲುಗಳು ಮತ್ತು ಜನರು ನಿರ್ಲಕ್ಷ್ಯವಾಗಿ ತ್ಯಾಜ್ಯವನ್ನು ತ್ಯಜಿಸುವ ಪರಿಣಾಮಗಳ ಅರಿವು ಉಂಟಾಗುತ್ತದೆ. ಮುಂದಿನ ದಿನಗಳಲ್ಲಿ ವಿವಿಧ ಕಾರ್ಯಕ್ರಮಗಳಲ್ಲಿ ಸ್ಮರಣಿಕೆ (ಮೊಮೆಂಟೊ) ನೀಡುವ ಬದಲು ಒಂದು ಗಿಡವನ್ನು ನೀಡುವ ಮೂಲಕ ಪರಿಸರ ಸಂರಕ್ಷಣೆಗೆ ಎಲ್ಲರೂ ಮಾದರಿಯಾಗಬೇಕು ಎಂಬ ಸಂದೇಶ ನೀಡಿದರು.
ಕಾರ್ಯಕ್ರಮದಲ್ಲಿ ಪರಿಸರ ಸಂರಕ್ಷಣೆ, ಹವಾಮಾನ ಬದಲಾವಣೆಯ ಪರಿಣಾಮಗಳು, ಘನ ಮತ್ತು ದ್ರವ ತ್ಯಾಜ್ಯ ನಿರ್ವಹಣೆ, ಮೂಲದಲ್ಲಿಯೇ ತ್ಯಾಜ್ಯ ವಿಂಗಡಣೆ ಹಾಗೂ ಪ್ಲಾಸ್ಟಿಕ್ ಬಳಕೆ ನಿಯಂತ್ರಣದ ಕುರಿತು ಅರಿವು ಮೂಡಿಸಲಾಯಿತು.
ಗ್ರಾಮ ಪಂಚಾಯತ್ ಕಾರ್ಯದರ್ಶಿ ಶ್ರವಣ್, ಎಸ್.ಡಿ.ಎ. ಮಮತಾ, ಪ್ರೇರಣಾ ಸಂಜೀವಿನಿ ಮಹಿಳಾ ಒಕ್ಕೂಟದ ಎಂ.ಬಿ.ಕೆ., ಕೃಷಿ ಸಖಿ ಭಾಗೀರತಿ, ಒಕ್ಕೂಟದ ಪದಾಧಿಕಾರಿಗಳು, ಗ್ರಂಥಾಲಯ ಮೇಲ್ವಿಚಾರಕರು ಹಾಗೂ ಮಾಜಿ ಸದಸ್ಯರಾದ ನಾಗೇಶ್ ಮತ್ತು ಗುರುಪ್ರಸಾದ್, ಗ್ರಾಮ ಪಂಚಾಯತ್ ಸಿಬ್ಬಂದಿಗಳು ಹಾಗೂ ಪಂಪು ಆಪರೇಟರ್ ಗಳು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.












