ಬೆಳ್ತಂಗಡಿ: 2026–27ನೇ ಶೈಕ್ಷಣಿಕ ಸಾಲಿನ ಶಾಲಾ ಸಂಸತ್ತಿನ ರಚನೆಗಾಗಿ ಬಜಿಲ ಸರಕಾರಿ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ಪ್ರಜಾಪ್ರಭುತ್ವದ ಮೌಲ್ಯಗಳನ್ನು ಮಕ್ಕಳಲ್ಲಿ ಬೆಳೆಸುವ ಉದ್ದೇಶದಿಂದ ಶಾಲಾ ಸಂಸತ್ ಚುನಾವಣೆ ಯಶಸ್ವಿಯಾಗಿ ನಡೆಸಲಾಯಿತು.
ಚುನಾವಣೆಯಲ್ಲಿ ಮುಖ್ಯಮಂತ್ರಿ ಹಾಗೂ ಉಪಮುಖ್ಯಮಂತ್ರಿ ಹುದ್ದೆಗಳಿಗೆ ತಲಾ ನಾಲ್ಕು ಅಭ್ಯರ್ಥಿಗಳು ಸ್ಪರ್ಧಿಸಿದರು. ಚುನಾವಣಾ ಪ್ರಕ್ರಿಯೆಯನ್ನು ಸಂಪೂರ್ಣ ಪಾರದರ್ಶಕವಾಗಿ ಹಾಗೂ ಪ್ರಜಾಪ್ರಭುತ್ವದ ನಿಯಮಾನುಸಾರ ಮತಪತ್ರದ ಮೂಲಕ ನಡೆಸಲಾಯಿತು. ಎಲ್ಲಾ ವಿದ್ಯಾರ್ಥಿಗಳು ಉತ್ಸಾಹದಿಂದ ಮತದಾನದಲ್ಲಿ ಭಾಗವಹಿಸಿ ತಮ್ಮ ಮತದಾನದ ಹಕ್ಕನ್ನು ಚಲಾಯಿಸಿದರು.
ಚುನಾವಣಾ ಅಧಿಕಾರಿಗಳಾಗಿ ಶಾಲೆಯ ಶಿಕ್ಷಕ ಸೀತಾರಾಮ, ಶ್ರೀಮತಿ ಸೌಮ್ಯ ಹಾಗೂ ಶ್ರೀಮತಿ ಕುಸುಮಾವತಿ ಅವರು ಕಾರ್ಯನಿರ್ವಹಿಸಿ ಚುನಾವಣೆಯನ್ನು ಸುಗಮವಾಗಿ ನಡೆಸಿಕೊಟ್ಟರು.
ಮತದಾನ ಮುಗಿದ ನಂತರ ಅಭ್ಯರ್ಥಿಗಳು ಹಾಗೂ ವಿದ್ಯಾರ್ಥಿಗಳ ಸಮ್ಮುಖದಲ್ಲಿ ಮತ ಎಣಿಕೆ ಕಾರ್ಯವನ್ನು ನಡೆಸಲಾಯಿತು. ಮತ ಎಣಿಕೆಯ ಫಲಿತಾಂಶದ ಪ್ರಕಾರ 5ನೇ ತರಗತಿಯ ಚಿರಶ್ರೀ ಅವರು ಶಾಲಾ ಸಂಸತ್ತಿನ ಮುಖ್ಯಮಂತ್ರಿಯಾಗಿ ಹಾಗೂ 4ನೇ ತರಗತಿಯ ಕುಮಾರಿ ಶ್ರೇಯಾ ಅವರು ಉಪಮುಖ್ಯಮಂತ್ರಿಯಾಗಿ ಆಯ್ಕೆಯಾದರು.
ವಿಜೇತ ಅಭ್ಯರ್ಥಿಗಳಿಗೆ ಶಾಲೆಯ ವತಿಯಿಂದ ಅಭಿನಂದನೆ ಸಲ್ಲಿಸಲಾಯಿತು.
ಶಾಲಾ ಮಂತ್ರಿ ಮಂಡಲದಲ್ಲಿ ಶಿಕ್ಷಣ ಮಂತ್ರಿ ಕುಮಾರಿ ಅನುಶ್ರೀ, ಆರೋಗ್ಯ ಮಂತ್ರಿ ಕುಮಾರಿ ಲಾವಣ್ಯ, ಸ್ವಚ್ಛತಾ ಮಂತ್ರಿ ಪಲ್ಲವಿ, ಗ್ರಂಥಾಲಯ ಮಂತ್ರಿ ಕುಮಾರಿ ದೀಕ್ಷಾ, ನೀರಾವರಿ ಮಂತ್ರಿ ರವಿಪ್ರಸಾದ್, ಕ್ರೀಡಾ ಮಂತ್ರಿ ಗೌತಮ್, ಸಾಂಸ್ಕೃತಿಕ ಮಂತ್ರಿ ಕುಮಾರಿ ಚಂದನ ಮೊದಲಾದವರನ್ನು ಆಯ್ಕೆ ಮಾಡಲಾಯಿತು.
ಈ ಚುನಾವಣೆಯ ಮೂಲಕ ವಿದ್ಯಾರ್ಥಿಗಳು ಪ್ರಜಾಪ್ರಭುತ್ವದ ತತ್ವಗಳು, ಮತದಾನದ ಮಹತ್ವ, ನಾಯಕತ್ವದ ಗುಣಗಳು ಹಾಗೂ ಜವಾಬ್ದಾರಿಯುತ ನಾಗರಿಕರ ಕರ್ತವ್ಯಗಳ ಕುರಿತು ಅರಿವು ಪಡೆದರು.












