ಬೆಳ್ತಂಗಡಿ: ದಾರುಸ್ಸಲಾಂ ಸೆಂಟರ್ ಬೆಳ್ತಂಗಡಿಯ ವಿದ್ಯಾರ್ಥಿ ಸಂಘಟನೆಯಾದ ಮನ್ಶಊಲ್ ಬಯಾನ್ ಸ್ಟೂಡೆಂಟ್ ಅಸೋಸಿಯೇಷನ್ನ 2026-27ನೇ ಸಾಲಿನ ಉದ್ಘಾಟನಾ ಕಾರ್ಯಕ್ರಮವು ಜೂ.6ರಂದು ಖಿಳ್ರ್ ಜುಮಾ ಮಸೀದಿಯಲ್ಲಿ ನಡೆಯಿತು.
ಕಾರ್ಯಕ್ರಮವು ವಿದ್ಯಾರ್ಥಿ ಮುಝಮ್ಮಿಲ್ ಅವರ ಖಿರಾಅತ್ ಪಠಣದೊಂದಿಗೆ ಆರಂಭವಾಯಿತು. ಆಗಮಿಸಿದ ಗಣ್ಯರನ್ನು ನವಾಝ್ ಮಾಸ್ಟರ್ ಸ್ವಾಗತಿಸಿದರು. ಸಂಸ್ಥೆಯ ಅಧ್ಯಕ್ಷ ಸಯ್ಯಿದ್ ಝೈನುಲ್ ಆಬಿದೀನ್ ಜಿಫ್ರಿ ತಂಙಳ್ ಅವರು ಅಲ್ಲಾಹನ ನಾಮದಿಂದ ಕಾರ್ಯಕ್ರಮವನ್ನು ಉದ್ಘಾಟಿಸಿದರು.
ಬಳಿಕ ಬೆಳ್ತಂಗಡಿ ಖಿಳ್ರ್ ಜುಮಾ ಮಸೀದಿಯ ಅಧ್ಯಕ್ಷ ಜನಾಬ್ ಅಕ್ಬರ್ ಬೆಳ್ತಂಗಡಿ ಅವರು ವಿದ್ಯಾರ್ಥಿಗಳಿಗೆ ಶುಭ ಹಾರೈಸಿ ಮಾತನಾಡಿದರು. ಸಂಸ್ಥೆಯ ಉಪಪ್ರಾಂಶುಪಾಲರಾದ ಯೂನುಸ್ ಅಲಿ ಬಾಖವಿ ಹಾಗೂ ಇಸ್ಮಾಯಿಲ್ ತಂಙಳ್ ಉಪ್ಪಿನಂಗಡಿ ಅವರು ಅನುಗ್ರಹ ನುಡಿಗಳನ್ನು ನೀಡಿದರು.
ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದ ಖ್ಯಾತ ವಾಗ್ಮಿ ಬಹು. ಅಸ್ಲಾಂ ಅಝ್ಹರಿ ಅವರು ನಮಾಝಿನ ಮಹತ್ವದ ಕುರಿತು ವಿದ್ಯಾರ್ಥಿಗಳಿಗೆ ಮನಮುಟ್ಟುವ ರೀತಿಯಲ್ಲಿ ವಿಶೇಷ ತರಗತಿ ನಡೆಸಿ ಮಾರ್ಗದರ್ಶನ ನೀಡಿದರು.
ವಿದ್ಯಾರ್ಥಿ ಸಂಘದ ಪ್ರಧಾನ ಕಾರ್ಯದರ್ಶಿ ಅಬ್ದುಲ್ ಸಮದ್ ಅವರು ಧನ್ಯವಾದ ಸಮರ್ಪಿಸಿದರು. ಕಾರ್ಯಕ್ರಮದಲ್ಲಿ ಶಿಕ್ಷಕ ವೃಂದ ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.












