ಉಜಿರೆ : ದೇಶದ ಪ್ರಧಾನಿ ನರೇಂದ್ರ ಮೋದಿಯವರು ಸ್ವಚ್ಛತೆಯ ಜಾಗೃತಿಯ ಜೊತೆಗೆ ವಿಶೇಷ ಕಾಳಜಿ ವಹಿಸಿದ್ದರಿಂದ ದೇಶಾದ್ಯಂತ ಸ್ವಚ್ಛತೆಯ ಕುರಿತು ಜಾಗೃತಿ ಹೆಚ್ಚುತ್ತಿದೆ. ಕಸದ ವಿಲೇವಾರಿ ಬಗ್ಗೆ ಜಗತ್ತು ಚಿಂತನೆ ಮಾಡುತ್ತಿದೆ. ನಾವೆಲ್ಲರೂ ಆತ್ಮಾವಲೋಕನ ಮಾಡಿಕೊಂಡು ಸ್ವಚ್ಛತೆಯ ಬಗ್ಗೆ ಕಾಳಜಿ ವಹಿಸಿದರೆ ಕಾರ್ಯಕ್ರಮ ಮಾಡಿ ಸ್ವಚ್ಛತೆ ಮಾಡಬೇಕಾದ ಅನಿವಾರ್ಯ ಪರಿಸ್ಥಿತಿಯಿಂದ ಹೊರಬರಬಹುದು. ಪ್ರತಿಯೊಬ್ಬ ವ್ಯಕ್ತಿಯೂ ವೈಯಕ್ತಿಕವಾಗಿ ನಿಶ್ಚಯ ಮಾಡಿ ಕಸ ಹಾಕಬೇಕಾದ ಸ್ಥಳದಲ್ಲೇ ಹಾಕಿದರೆ ಬೀದಿಬೀದಿಗೆ ಹೋಗಿ ಸ್ವಚ್ಛತೆಯ ಕೆಲಸ ಮಾಡುವುದು ತಪ್ಪಬಹುದು ಎಂದು ವಿಧಾನ ಪರಿಷತ್ ಸದಸ್ಯ ಪ್ರತಾಪಸಿಂಹ ನಾಯಕ್ ಹೇಳಿದರು.
ಅವರು ವಿಶ್ವಕರ್ಮ ಸಹಕಾರ ಬ್ಯಾಂಕಿನ ಉಜಿರೆ ಶಾಖೆಯ ವತಿಯಿಂದ “ಸ್ವಚ್ಛತಾ ಹೀ ಸೇವಾ” ಎಂಬ ಧ್ಯೇಯದಂತೆ ನಡೆದ 50ನೇ ಸ್ವಚ್ಛತಾ ಶ್ರಮದಾನದ ಸಮಾರೋಪ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಪ್ರತಾಪಸಿಂಹ ನಾಯಕ್, ವಿಶ್ವಕರ್ಮ ಬ್ಯಾಂಕ್ ನಿರ್ದೇಶಕ ಭಾಸ್ಕರ್ ಡಿ ಆಚಾರ್ಯ, ಉಜಿರೆ ಬಂಟರ ಸಂಘದ ಅಧ್ಯಕ್ಷ ರವೀಂದ್ರ ಶೆಟ್ಟಿ ಬಳಂಜ, ಉಜಿರೆ ವರ್ತಕರ ಸಂಘದ ಅಧ್ಯಕ್ಷ ಪ್ರಸಾದ್ ಬಿ.ಎಸ್ ಹಸಿರು ನಿಶಾನೆ ತೋರುವ ಮೂಲಕ ಶ್ರಮದಾನಕ್ಕೆ ಚಾಲನೆ ನೀಡಿದರು.
ಉಜಿರೆ ಬಸ್ ನಿಲ್ದಾಣ ಹಾಗೂ ಕಾಲೇಜು ರಸ್ತೆಯ ಸುತ್ತಮುತ್ತಲಿನ ಪರಿಸರಗಳಲ್ಲಿ ಸ್ವಚ್ಛತೆಯ ಜಾಗೃತಿ ಮೂಡಿಸುವ ನಿಟ್ಟಿನಲ್ಲಿ ಶ್ರಮದಾನ ಕಾರ್ಯಕ್ರಮ ನಡೆಯಿತು. ಉಜಿರೆಯ ಸ್ವಚ್ಛ ಭಾರತ್ ಸಂಚಾಲಕ ಉಮೇಶ್ ಆಚಾರ್ಯ ಕಾನರ್ಪ, ಗೌಡರ ಯಾನೆ ಒಕ್ಕಲಿಗರ ಸಂಘ ಉಜಿರೆ ಇದರ ಅಧ್ಯಕ್ಷ ಶೇಖರ್ ಗೌಡ ಹಾಗೂ ಸದಸ್ಯರು, ಬಂಟರ ಸಂಘ ಉಜಿರೆ ಇದರ ಸದಸ್ಯರು, ವಿಶ್ವಕರ್ಮೋಬ್ಯುದಯ ಸಂಘ ಬೆಳ್ತಂಗಡಿ ಇದರ ಅಧ್ಯಕ್ಷ ಗಣೇಶ್ ಆಚಾರ್ಯ ಹಾಗೂ ಸದಸ್ಯರು, ರೋಟರಿ ಕ್ಲಬ್ ಬೆಳ್ತಂಗಡಿ ಇದರ ಸದಸ್ಯರು, ವರ್ತಕರ ಸಂಘ ಉಜಿರೆ ಇದರ ಸದಸ್ಯರು, ಗೌಡರ ಯಾನೆ ಒಕ್ಕಲಿಗರ ಮಹಿಳಾ ಮಂಡಳ ಇದರ ಅಧ್ಯಕ್ಷೆ ಶ್ರೀಮತಿ ರಾಜಶ್ರೀ ಹಾಗೂ ಸದಸ್ಯರು, ಪ್ರಗತಿ ಮಹಿಳಾ ಮಂಡಲ ಇದರ ಅಧ್ಯಕ್ಷೆ ಶ್ರೀಮತಿ ಜಯಶ್ರೀ ಹಾಗೂ ಸದಸ್ಯರು, ಎಸ್.ಡಿ.ಎಂ ಪದವಿ ಪೂರ್ವ ಕಾಲೇಜು ರಾಷ್ಟ್ರೀಯ ಸೇವಾ ಯೋಜನೆ ಇದರ ಯೋಜನಾಧಿಕಾರಿ ವಿಶ್ವನಾಥ್ ಹಾಗೂ ಸ್ವಯಂ ಸೇವಕರು , ವಿಶ್ವಕರ್ಮ ಸಹಕಾರ ಬ್ಯಾಂಕಿನ ಉಜಿರೆ ಶಾಖೆಯ ಶಾಖಾಧಿಕಾರಿ ಲೋಕೇಶ್. ಎಸ್. ಆರ್ ಹಾಗೂ ಸಿಬ್ಬಂದಿಗಳು, ಬ್ಯಾಂಕಿನ ಸದಸ್ಯರು, ಗ್ರಾಹಕರು ಹಾಗೂ ಹೆತೈಷಿಗಳು ಭಾಗವಹಿಸಿ ಶ್ರಮದಾನದಲ್ಲಿ ಕೈ ಜೋಡಿಸಿ ಸಹಕರಿಸಿದರು.ಈ ಸಂದರ್ಭ ಸ್ವಚ್ಛತಾ ಶ್ರಮದಾನ ಕಾರ್ಯಕ್ರಮದಲ್ಲಿ ಸಹಕರಿಸಿದ ಸಂಘ-ಸಂಸ್ಥೆಗಳಿಗೆ ಗೌರವಿಸಲಾಯಿತು.












