ಗುರಿಪಳ್ಳ: ಇತ್ತೀಚೆಗೆ ಸುರಿದ ಭಾರಿ ಮಳೆಗೆ ಉಜಿರೆಯಿಂದ ಗುರಿಪಳ್ಳ ಇಂದಬೆಟ್ಟು, ಬಂಗಾಡಿ ಸಂಪರ್ಕಿಸುವ ಅಂಬಡಬೆಟ್ಟು ತಾತ್ಕಾಲಿಕ ಸೇತುವೆಯು ಸಂಪೂರ್ಣವಾಗಿ ಕುಸಿದಿದ್ದು ಆ ರಸ್ತೆಯ ಮೂಲಕ ಸಂಚರಿಸುವ ನಾಲ್ಕು ಗ್ರಾಮಗಳ ಪ್ರಯಾಣಿಕರಿಗೆ ಶಾಲಾ ಮಕ್ಕಳಿಗೆ ಹಾಗೂ ಕಾರ್ಮಿಕರಿಗೆ ತುಂಬಾ ಅಡಚಣೆಯಾಗಿದ್ದು ಈ ಬಗ್ಗೆ ಸ್ಥಳೀಯರಾದ ಯುವ ಕಾಂಗ್ರೆಸ್ ರಾಜ್ಯ ಪ್ರಧಾನ ಕಾರ್ಯದರ್ಶಿ ಪ್ರವೀಣ್ ಫೆರ್ನಾಂಡೀಸ್ ಹಳ್ಳಿಮನೆಯವರು ಸಂಬಂಧಪಟ್ಟ ಇಲಾಖೆ ಅಧಿಕಾರಿಗಳನ್ನು ಸಂಪರ್ಕಿಸಿ ತಾತ್ಕಾಲಿಕ ಸೇತುವೆ ಪುನರ್ ನಿರ್ಮಿಸುವಲ್ಲಿ ದೊಡ್ಡ ಸಹಕಾರ ನೀಡಿರುತ್ತಾರೆ.

ಪ್ರವೀಣ್ ಹಳ್ಳಿಮನೆಯವರು ಯುವ ನಾಯಕರಾದ ರಕ್ಷಿತ್ ಶಿವರಾಂರವರನ್ನು ಸಂಪರ್ಕಿಸಿ ಸೇತುವೆ ದುರಸ್ತಿಗೊಳಿಸುವಂತೆ ವಿನಂತಿಸಿರುತ್ತಾರೆ.ತಕ್ಷಣವೇ ಮನವಿಗೆ ಸ್ಪಂದಿಸಿದ ರಕ್ಷಿತ್ ಶಿವರಾಂರವರು ಬೆಂಗಳೂರಿನಲ್ಲಿದ್ದ ಲೋಕೋಪಯೋಗಿ ಇಲಾಖೆಯ ಎಕ್ಸಿಕ್ಯೂಟಿವ್ ಇಂಜಿನಿಯರ್ ರವರನ್ನು ಸಂಪರ್ಕಿಸಿ ಅತ್ಯಂತ ತುರ್ತಾಗಿ ತಾತ್ಕಾಲಿಕ ಸೇತುವೆಯನ್ನು ನಿರ್ಮಿಸಿ ಕೊಡುವಂತೆ ಸೂಚಿಸಿರುತ್ತಾರೆ.

ತಕ್ಷಣವೇ ಕಾರ್ಯ ಪ್ರವೃತ್ತರಾದ ಸಂಬಂಧಪಟ್ಟ ಇಲಾಖೆಯು ಮೋರಿ ಅಳವಡಿಸಿ ತಾತ್ಕಾಲಿಕ ಸೇತುವೆ ನಿರ್ಮಿಸಿ ಗುರಿಪಳ್ಳ ಇಂದಬೆಟ್ಟು ಜನತೆಯ ಸುಗಮ ಸಂಚಾರಕ್ಕೆ ಅನುವು ಮಾಡಿಕೊಟ್ಟಿರುತ್ತಾರೆ, ಈಗಾಗಲೇ ಕಾಂಗ್ರೆಸ್ ಸರಕಾರದ ಮೂಲಕ 2.5 ಕೋಟಿ ಅನುದಾನ ತಂದು ಹೊಸ ಸೇತುವೆ ನಿರ್ಮಿಸುವಲ್ಲಿ ಮಹತ್ತರ ಪಾತ್ರ ವಹಿಸಿದ ರಕ್ಷಿತ್ ಶಿವರಾಂ ರವರು ಇದೀಗ ಸಂಕಷ್ಟದ ಕಾಲದಲ್ಲಿ ಊರವರ ಮನವಿಗೆ ಸ್ಪಂದಿಸಿ ಆಪದ್ಬಾಂಧವರಾಗಿ ಕೆಲಸ ಮಾಡಿದ ರಕ್ಷಿತ್ ಶಿವರಾಂರವರ ಮಾದರಿ ಕಾರ್ಯಕ್ಕೆ ಊರಿನ ಎಲ್ಲಾ ನಾಗರಿಕರು ಶ್ಲಾಘನೆ ವ್ಯಕ್ತಪಡಿಸುತ್ತಿದ್ದಾರೆ. ತಾತ್ಕಾಲಿಕ ಸೇತುವೆ ನಿರ್ಮಿಸುವಲ್ಲಿ ಸಹಕರಿಸಿದ ಲೋಕನಾಡು ಲೋಕನಾಥೇಶ್ವರ ದೇವಸ್ಥಾನದ ವ್ಯವಸ್ಥಾಪನ ಸಮಿತಿಯ ಅಧ್ಯಕ್ಷರಾದ ಗುರುರಾಜ್ ಗುರಿಪಳ್ಳ ಹಾಗೂ ಇತರರಿಗೆ ಊರವರು ಅಭಿನಂದನೆ ಸಲ್ಲಿಸುತ್ತಿದ್ದಾರೆ.













