ನಡ : “ನೀವು ಸಂಪಾದಿಸುವ ವಿದ್ಯೆಯು ಸರ್ವಧನಗಳಲ್ಲಿಯೂ ಅತ್ಯಂತ ಪ್ರಧಾನವಾದದ್ದು. ಇದನ್ನು ಏಕಾಗ್ರತೆಯಿಂದ ನೀವು ಸಾಧಿಸಬೇಕು. ವಿದ್ಯಾರ್ಥಿಯಾದವನು ಸುಖವನ್ನು ತ್ಯಜಿಸಬೇಕು. ನಿರಂತರ ಕ್ರಿಯಾಶೀಲರಾಗಿರಬೇಕು”ಎಂದು ವಿಶ್ರಾಂತ ಪ್ರಾಂಶುಪಾಲರಾದ ಗಣಪತಿ ಭಟ್ ಕುಳಮರ್ವ ಇವರು ನುಡಿದರು.
ನಡ ಸರಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ನಡೆದ ಪ್ರಥಮ ಪಿಯುಸಿ ವಿದ್ಯಾರ್ಥಿಗಳ ಸ್ವಾಗತ ಕಾರ್ಯಕ್ರಮದ ಉದ್ಘಾಟನೆಯನ್ನು ನೆರವೇರಿಸಿ ಮಾತನಾಡಿದರು. ಸಂಸ್ಥೆಯ ಪ್ರಾಂಶುಪಾಲರಾದ ಲಿಲ್ಲಿ ಪಿವಿ ಸಮಾರಂಭದ ಅಧ್ಯಕ್ಷತೆಯನ್ನು ವಹಿಸಿ, ಕಾಲೇಜಿನ ನೀತಿ ನಿಯಮಾವಳಿಗಳ ಬಗ್ಗೆ ಮಾಹಿತಿ ನೀಡಿದರು.
ಕಾಲೇಜು ಅಭಿವೃದ್ಧಿ ಸಮಿತಿಯ ಉಪಾಧ್ಯಕ್ಷ ಅಜಿತ್ ಆರಿಗ, ಅರ್ಥಶಾಸ್ತ್ರ ಉಪನ್ಯಾಸಕಿ ಶ್ರೀಮತಿ ವಸಂತಿ ಪಿ, ರಾಜ್ಯಶಾಸ್ತ್ರ ಉಪನ್ಯಾಸಕ ಶಿಲ್ಪಾ ಡಿ ವೇದಿಕೆಯಲ್ಲಿ ಉಪಸ್ಥಿತರಿದ್ದು ಶುಭ ಹಾರೈಸಿದರು. ಎಲ್ಲಾ ಅತಿಥಿ ಉಪನ್ಯಾಸಕರು ಉಪಸ್ಥಿತರಿದ್ದು ಕಾರ್ಯಕ್ರಮದ ಯಶಸ್ವಿಗೆ ಸಹಕರಿಸಿದರು.ದ್ವಿತೀಯ ಪಿಯುಸಿ ಪಬ್ಲಿಕ್ ಪರೀಕ್ಷೆಯಲ್ಲಿ ವಿಷಯವಾರು ಅತ್ಯಂತ ಹೆಚ್ಚು ಅಂಕಗಳನ್ನು ಗಳಿಸಿದ ವಿದ್ಯಾರ್ಥಿಗಳಿಗೆ ನಗದು ಬಹುಮಾನವನ್ನು ವಿತರಿಸಲಾಯಿತು.
ವಿದ್ಯಾರ್ಥಿನಿಯರಾದ ಶಬ್ನಂ ಮತ್ತು ಸ್ಪೂರ್ತಿ ನಿರೂಪಿಸಿದ ಕಾರ್ಯಕ್ರಮದಲ್ಲಿ ಗಾಯತ್ರಿ ಸ್ವಾಗತಿಸಿ, ಶೇಕ್ ಅದಿಲ್ ವಂದಿಸಿದರು.













