ಕಳೆಂಜ: ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಕಾಯರ್ತಡ್ಕ ಇಲ್ಲಿಯ ವಿದ್ಯಾರ್ಥಿಗಳಿಗೆ ಯಕ್ಷಧ್ರುವ ಪಟ್ಲ ಫೌಂಡೇಶನ್ (ರಿ) ವತಿಯಿಂದ ಉಚಿತ ಯಕ್ಷ ಶಿಕ್ಷಣ ತರಬೇತಿಯನ್ನು ಜೂನ್ 11ರಂದು ಹಿರಿಯ ಯಕ್ಷಗಾನ ಕಲಾವಿದ ವಸಂತ ಗೌಡರು ದೀಪ ಪ್ರಜ್ವಲನೆ ಮಾಡಿ ಉದ್ಘಾಟಿಸುತ್ತಾ ವಿದ್ಯಾರ್ಥಿಗಳು ಯಕ್ಷಗಾನ ಕಲಿತು ಉತ್ತಮ ಜೀವನ ರೂಪಿಸಿಕೊಳ್ಳಬೇಕೆಂದು ಶುಭ ಹಾರೈಸಿದರು.
ಯಕ್ಷಗಾನ ಕಲಾವಿದ ಗಂಗಾಧರ ಕೆ ಇವರು ಪ್ರಾಸ್ತಾವಿಕವಾಗಿ ಮಾತನಾಡುತ್ತಾ ಯಕ್ಷ ನೃತ್ಯ ಕಲಿಯುವುದರಿಂದ ವಿದ್ಯಾರ್ಥಿಗಳ ಮಿದುಳು ಹೆಚ್ಚು ಚುರುಕು ಗೊಂಡು, ಕಲಿಕೆಯಲ್ಲಿ ಹೆಚ್ಚು ಅಂಕ ಪಡೆಯುತ್ತಾರೆ. ಯಕ್ಷಗಾನ ಕಲಿತವರಲ್ಲಿ ಮನೋಬಲ ಮತ್ತು ಧೈರ್ಯ ಹೆಚ್ಚಾಗುತ್ತದೆ. ಮಕ್ಕಳು ಸುಸಂಸ್ಕೃತರಾಗುತ್ತಾರೆ ಎಂದರು. ಯಕ್ಷ ಗುರುಗಳು ಸುಂದರ ಅರಸಿನಮಕ್ಕಿ ಇವರು ಪಟ್ಲ ಫೌಂಡೇಶನ್ ಯಕ್ಷ ಶಿಕ್ಷಣ ತರಬೇತಿಯ ಧ್ಯೇಯೋದ್ದೇಶ, ವಿದ್ಯಾರ್ಥಿಗಳಿಗೆ ಭವಿಷ್ಯದಲ್ಲಿ ಶಿಕ್ಷಣಕ್ಕೆ ಸಿಗುವ ಸವಲತ್ತುಗಳು ಮತ್ತು ವಿಶ್ವ ವಿದ್ಯಾಲಯಿಂದ ಯಕ್ಷ ಶಿಕ್ಷಣ ಪಡೆದ ವಿದ್ಯಾರ್ಥಿಗಳಿಗೆ ಉಚಿತವಾಗಿ ಪರೀಕ್ಷೆ ಬರೆಯುವ ಅವಕಾಶ ಮಾಡಿಕೊಡಲಾಗಿದೆ ಎಂದು ತಿಳಿಸಿದರು.

ಮುಖ್ಯ ಅತಿಥಿಗಳು ಹಾಗೂ ವಿದ್ಯಾ ಪೋಷಕರಾಗಿರುವ ಪಾಂಗಳ ಲಕ್ಷ್ಮಣ ಗೌಡರವರು ವಿದ್ಯಾರ್ಥಿಗಳನ್ನು ಉದ್ಧೇಶಿಸಿ ಯಕ್ಷ ಶಿಕ್ಷಣ ಪಡೆದವರಿಗೆ ಭವಿಷ್ಯದಲ್ಲಿ ಯಾವುದೇ ಹುದ್ದೆಯನ್ನು ನಿಭಾಯಿಸುವ ಆತ್ಮ ಸ್ಥೈರ್ಯ ಬರುತ್ತದೆ. ಮತ್ತು ಮನಃಶಾಂತಿ ದೊರಕುತ್ತದೆ ಎಂದು ಹೇಳಿದರು. ಸಭಾ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಶಾಲಾಭಿವೃದ್ಧಿ ಮತ್ತು ಮೇಲುಸ್ತುವಾರಿ ಸಮಿತಿಯ ಅಧ್ಯಕ್ಷರೂ ಆಗಿರುವ ವಿಜಯ್ ಕೆ ರವರು ಯಕ್ಷ ಶಿಕ್ಷಣ ತರಬೇತಿಗೆ ಶಾಲಾ ವತಿಯಿಂದ ಸಂಪೂರ್ಣ ಸಹಕಾರ ನೀಡುತ್ತೇವೆ ಎಂದರು ಮತ್ತು ಯಕ್ಷ ಶಿಕ್ಷಣ ತರಬೇತಿಗೆ ಪೋಷಕರ ಸಹಕಾರವನ್ನು ಕೋರಿದರು.
ಶಾಲಾ ವಿದ್ಯಾರ್ಥಿಗಳ ಪ್ರಾರ್ಥನೆಯೊಂದಿಗೆ ಆರಂಭಗೊಂಡ ಕಾರ್ಯಕ್ರಮದಲ್ಲಿ ಆರಂಭಗೊಂಡ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದ ಅತಿಥಿಗಳನ್ನು ಶಾಲಾ ಮುಖ್ಯೋಪಾಧ್ಯಾಯರಾದ ಕೃಷ್ಣಪ್ಪರವರು ಪ್ರೀತಿಪೂರ್ವಕವಾಗಿ ಸ್ವಾಗತಿಸಿದರು. ಶ್ರೀಮತಿ ಸುಮಲತಾ ಕೆ ಟಿ ಇವರು ಧನ್ಯವಾದ ಸಮರ್ಪಿಸಿದರು. ಶ್ರೀಮತಿ ಅಶ್ವಿನಿ ಇವರು ಕಾರ್ಯಕ್ರಮವನ್ನು ನಿರೂಪಿಸಿದರು. ಯಕ್ಷ ಗುರುಗಳು ಶ್ರೀ ಸುಂದರ ಗೌಡ ಅರಸಿನಮಕ್ಕಿ ಇವರು ವಿದ್ಯಾರ್ಥಿಗಳಿಗೆ ಯಕ್ಷಗಾನ ನಾಟ್ಯ ತರಬೇತಿಯನ್ನು ನೀಡಿದರು.













