ಪತ್ರಿಕಾಗೋಷ್ಠಿ
ಬೆಳ್ತಂಗಡಿ : ಬೆಳ್ತಂಗಡಿ ಜನತೆಯ ಹಾಗೂ ವಕೀಲರ ಬಹು ವರ್ಷಗಳ ಬೇಡಿಕೆಯ ನೂತನ ನ್ಯಾಯಾಲಯ ಸಂಕೀರ್ಣಕ್ಕೆ ಜೂ. 14ರಂದು ಸಚಿವ ಯುಟಿ ಖಾದರ್, ನ್ಯಾಯವಾದಿಗಳು ಹಾಗೂ ವಿವಿಧ ಗಣ್ಯರ ಉಪಸ್ಥಿತಿಯಲ್ಲಿ ಭೂಮಿ ಪೂಜೆ ನೆರವೇರಲಿದೆ ಎಂದು ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ರಕ್ಷಿತ್ ಶಿವರಾಂ ತಿಳಿಸಿದ್ದಾರೆ.

ಈ ಬಗ್ಗೆ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಈ ನ್ಯಾಯಾಲಯದ ಕಟ್ಟಡ ಸೋರುತ್ತಿರುವ ಬಗ್ಗೆ ಪತ್ರಿಕೆಗಳಲ್ಲಿ ವರದಿ ಪ್ರಕಟಿಸಿದ ಕಾರಣದಿಂದಲೇ ಇಂದು ನೂತನ ನ್ಯಾಯಾಲಯದ ಕಟ್ಟಡ ಮಂಜೂರುಗೊಂಡಿದೆ. ಸುಮಾರು 09 ಕೋಟಿ ವೆಚ್ಚದಲ್ಲಿ ಮೊದಲ ಹಂತದ ನೂತನ ನ್ಯಾಯಾಲಯದ ಕಟ್ಟಡದ ಕಾಮಗಾರಿಗೆ ಅನುದಾನ ಮಂಜೂರುಗೊಂಡಿದೆ. ಒಟ್ಟು, 24 ಕೋಟಿ ವೆಚ್ಚದಲ್ಲಿ ನ್ಯಾಯಾಲಯದ ಕಟ್ಟಡ ನಿರ್ಮಾಣಗೊಳ್ಳಲಿದೆ ಎಂದರು.

ಸಿದ್ಧರಾಮಯ್ಯನವರು ಮುಖ್ಯಮಂತ್ರಿಯಾಗಿದ್ದ ಸಮಯದಲ್ಲಿ ಈ ನೂತನ ಕಟ್ಟಡಕ್ಕೆ 09 ಕೋಟಿ ಅನುದಾನ ಮಂಜೂರುಗೊಳಿಸಿದ್ದಾರೆ. ಮೊದಲ ಹಂತದ ಕಾಮಗಾರಿಯ ನೂತನ ಕಟ್ಟಡದಲ್ಲಿ ನೆಲಮಹಡಿಯ ಜೊತೆಗೆ ಬೋರ್ ವೆಲ್, ಸೆಪ್ಟಿಕ್ ಟ್ಯಾಂಕ್, ವಾಟರ್ ಸಪ್ಲೈ, ಎಲೆಕ್ಟ್ರಿಕಲ್ ವರ್ಕ್, ಫರ್ನೀಚರ್ ವ್ಯವಸ್ಥೆ ಒಳಗೊಂಡಿರುತ್ತದೆ. ಅಷ್ಟು ಮಾತ್ರವಲ್ಲದೆ, ಆಧುನಿಕ ಸೌಲಭ್ಯಗಳಾದ ಮಳೆಕೊಯ್ಲು, ಸೋಲಾರ್ ವ್ಯವಸ್ಥೆ, ಡಿಜಿಟಲ್ ನ್ಯಾಯಾಲಯದ ವ್ಯವಸ್ಥೆ, ಕೋರ್ಟ್ ಹಾಲ್ ಗಳು, ಮಿನಿ ಕೋರ್ಟ್ ಹಾಲ್, ನ್ಯಾಯಾಧೀಶರ ಕೊಠಡಿ, ಎಜಿಪಿ ಕಚೇರಿ, ಕಂಪ್ಯೂಟರ್ ವ್ಯವಸ್ಥೆ, ಕಕ್ಷಿದಾರರಿಗೆ ವ್ಯವಸ್ಥೆ, ವಿಶೇಷ ಚೇತನರಿಗೆ ಲಾಬಿ, ಪ್ರತ್ಯೇಕ ಶೌಚಾಲಯದ ವ್ಯವಸ್ಥೆ, ಸುಸಜ್ಜಿತ ರೆಕಾರ್ಡ್ ರೂಂ’ಗಳ ಸೌಲಭ್ಯಗಳಿರುತ್ತವೆ. ಎರಡನೇ ಹಂತದ ಕಾಮಗಾರಿಯಲ್ಲೂ ಕೂಡಾ ಸಾಕಷ್ಟು ಸೌಲಭ್ಯಗಳು ಇರಲಿದೆ ಎಂದು ಹೇಳಿದರು.
ಸುದ್ದಿಗೋಷ್ಠಿಯಲ್ಲಿ, ಗ್ರಾಮೀಣ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ನಾಗೇಶ್ ಕುಮಾರ್ ಗೌಡ, ನಗರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸತೀಶ್ ಕೆ. ಕಾಶಿಪಟ್ಣ, ಕೆಪಿಸಿಸಿ ಅಲ್ಪಸಂಖ್ಯಾತ ಘಟಕದ ಕಾರ್ಯದರ್ಶಿ ಪ್ರವೀಣ್ ಫೆರ್ನಾಂಡಿಸ್ ಹಳ್ಳಿಮನೆ, ತಾಲೂಕು ಜಿಲ್ಲಾ ಗ್ಯಾರಂಟಿ ಅನುಷ್ಠಾನ ಸಮಿತಿ ಉಪಾಧ್ಯಕ್ಷ ಶೇಖರ್ ಕುಕ್ಕೇಡಿ, ತಾಲೂಕು ಅಧ್ಯಕ್ಷ ಪದ್ಮನಾಭ ಸಾಲ್ಯಾನ್ ಮಾಲಾಡಿ, ಗ್ಯಾರಂಟಿ ಸಮಿತಿ ಸದಸ್ಯರಾದ ನೇಮಿರಾಜು, ನಗರ ಬ್ಲಾಕ್ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಶಾಫಿ, ಜಗದೀಶ್ ಡಿ. ಮತ್ತಿತ್ತರರು ಉಪಸ್ಥಿತರಿದ್ದರು.













