ಬೆಳ್ತಂಗಡಿ: ಇತ್ತೀಚೆಗೆ ನಿಧನರಾದ ಎಸ್ವೈಎಸ್ ಕಾರ್ಯಕರ್ತ ಶರೀಫ್ ಪರಪ್ಪು ರವರ ಕುಟುಂಬಕ್ಕೆ ಸುನ್ನೀ ಯುವಜನ ಸಂಘ (ಎಸ್ವೈಎಸ್) ಬೆಳ್ತಂಗಡಿ ಝೋನ್ ವತಿಯಿಂದ ಸಾಂತ್ವನ ಫಂಡ್ 1,17,313 ರೂ.ಗಳನ್ನು ಜೂ 14 ರಂದು ಅವರ ಕುಟುಂಬಕ್ಕೆ ಹಸ್ತಾoತರ ಮಾಡಲಾಯಿತು.
ಈ ಸಂದರ್ಭದಲ್ಲಿ ಎಸ್ವೈಎಸ್ ಝೋನ್ ಅಧ್ಯಕ್ಷ ಅಬ್ದುಲ್ ರಹ್ಮಾನ್ ಸಖಾಫಿ, ಪ್ರಧಾನ ಕಾರ್ಯದರ್ಶಿ ಸಲೀಂ ಕನ್ಯಾಡಿ, ಕೋಶಾಧಿಕಾರಿ ಅಬ್ದುಲ್ ರಝಾಕ್ ಸಖಾಫಿ, ಉಪಾಧ್ಯಕ್ಷ ಅಯ್ಯೂಬ್ ಮಹ್ಳರಿ, ಕೆ.ವೈ ಇಸ್ಮಾಯಿಲ್, ಕಾರ್ಯದರ್ಶಿ ಹಾರಿಸ್ ಕುಕ್ಕುಡಿ, ಸಿದ್ದೀಕ್ ಪರಪ್ಪು ಹಾಗೂ ಸರ್ಕಲ್, ಯುನಿಟ್ ಪ್ರತಿನಿಧಿಗಳು, ಪರಪ್ಪು ಜಮಾಅತ್ ನಾಯಕರು ಉಪಸ್ಥಿತರಿದ್ದರು.
ಸಣ್ಣ ವ್ಯಾಪಾರಿಯಾಗಿದ್ದ ಶರೀಫ್ ಪರಪ್ಪು ಅವರು ಕೆಲ ದಿನಗಳ ಹಿಂದೆ ಅಲ್ಪಕಾಲದ ಆನಾರೋಗ್ಯದಿಂದ ಕೊನೆಯುಸಿರೆಳೆದಿದ್ದರು. ಮನೆಯ ಯಜಮಾನನಾಗಿದ್ದ ಅವರ ಅಕಾಲಿಕ ಅಗಲುವಿಕೆಯಿಂದ ಅವರ ಪತ್ನಿ, ಮಕ್ಕಳು ಹಾಗೂ ಅವರ ಕುಟುಂಬ ಕಂಗಾಲಾಗಿದ್ದರು. ಸಂಘಟನೆಯಲ್ಲಿ ಸಕ್ರಿಯವಾಗಿ ಕಾರ್ಯನಿರ್ವಹಿಸುತ್ತಿದ್ದ ಅವರ ದಕ್ಷತೆಯನ್ನು ಪರಿಗಣಿಸಿ ಅವರ ಕುಟುಂಬದ ಸಂಕಷ್ಟ ಕಾಲದಲ್ಲಿ ಅವರಿಗೆ ಸಾಂತ್ವನ ನೀಡುವ ಮೂಲಕ ಎಸ್ವೈಎಸ್ ತನ್ನ ಜವಾಬ್ದಾರಿ ಮೆರೆದಿದೆ.













