ಬೆಳ್ತಂಗಡಿ: ಧಾರ್ಮಿಕ ಪ್ರವಚನಗಳು ನಮ್ಮ ದೇಹ,ಮನಸ್ಸು,ಆತ್ಮಕ್ಕೆ ಒಳ್ಳೆಯ ವಿಚಾರ ಕೊಡುವ ಕಾರ್ಯಕ್ರಮಗಳು. ಪಾರಮಾರ್ಥಿಕ ವಿಚಾರಗಳ ಧಾರ್ಮಿಕ ತಳಹದಿಯಲ್ಲಿ ದೇಶದ ಭದ್ರ ಬುನಾದಿ ಇದೆ . ನಮಗೆ ಮಾನಸಿಕ ಶಾಂತಿ,ನೆಮ್ಮದಿಯ ಜೀವನ ಸಾಗಿಸಲು ಧಾರ್ಮಿಕತೆ ಹಾಗು ಧರ್ಮದ ತಳಹದಿ ಅವಶ್ಯ ಎಂದು ಉಜಿರೆ ಎಸ್ ಡಿ ಎಂ ಶಿಕ್ಷಣ ಸಂಸ್ಥೆಯ ಕಾರ್ಯದರ್ಶಿ ಡಾ!ಸತೀಶ್ಚಂದ್ರ ಎಸ್ . ನುಡಿದರು.
ಅವರು ಜೂ 15 ರಂದು ಬೆಳ್ತಂಗಡಿ ಸಮಾಜ ಮಂದಿರದಲ್ಲಿ ಬೆಳ್ತಂಗಡಿ ತಾಲೂಕು ಸಾರ್ವಜನಿಕ ಶ್ರೀ ಗೌರಿ ಗಣೇಶೋತ್ಸವ ಸೇವಾ ಸಮಿತಿ ವತಿಯಿಂದ ನಡೆದ ಬನ್ನಂಜೆ 90 ರ ಸಂಭ್ರಮದಲ್ಲಿ ಖ್ಯಾತ ವಾಗ್ಮಿ ಡಾ!ವೀಣಾ ಬನ್ನಂಜೆ ಅವರ ಸಂಪೂರ್ಣ ರಾಮಾಯಣ ಪ್ರವಚನ ಸಪ್ತಾಹದ ಉದ್ಘಾಟನಾ ಸಮಾರಂಭದಲ್ಲಿ ಮುಖ್ಯ ಅ ಭ್ಯಾಗತರಾಗಿ ಭಾಗವಹಿಸಿ 3ನೇ ವರ್ಷ ಪ್ರವಚನ ಸಪ್ತಾಹವನ್ನು ಆಯೋಜಿಸಿದ ಸಂಘಟಕರನ್ನು ಅಭಿನಂದಿಸಿದರು. ಸಪ್ತಾಹವನ್ನು ದೀಪ ಪ್ರಜ್ವಲಿಸಿ ಉದ್ಘಾಟಿಸಿದ ನಿವೃತ್ತ ಮೇ !ಜ!ಎಂ.ವಿ.ಭಟ್ ಮರ್ಯಾದಾ ಪುರುಷೋತ್ತಮ ,ಆದರ್ಶ ಪುರುಷ ಶ್ರೀ ರಾಮನ ಕುರಿತಾದ ಪ್ರವಚನ ಸಪ್ತಾಹ ಮುಂದಿನ ಯುವ ಜನಾಂಗಕ್ಕೆ ಆದರ್ಶ ಪ್ರೇರಣೆಯಾಗಿ ಜನರಿಗೆ ಪರಿಣಾಮ ಬೀರುವಂತಾಗಲಿ ಎಂದು ಶುಭ ಹಾರೈಸಿದರು.
ಉಜಿರೆ ಬೆನಕ ಆಸ್ಪತ್ರೆಯ ಡಾ| ಭಾರತಿ ಗೋಪಾಲಕೃಷ್ಣ ಮಾತನಾಡಿ ರಾಮ ನಾಮವೊಂದಿದ್ದರೆ ಜೀವನದಲ್ಲಿ ಏನನ್ನೂ ಸಾಧಿಸಬಹುದು. ನಿತ್ಯ ರಾಮನಾಮ ಸ್ಮರಣೆಯಿಂದ ನಮ್ಮ ಬದುಕು ಸುಗಮವಾಗುವುದು ಎಂದರು. ಉಜಿರೆ ಎಸ್ ಡಿ ಎಂ ತಾಂತ್ರಿಕ ಕಾಲೇಜಿನ ಉಪನ್ಯಾಸಕ ,ದೈವ ನರ್ತಕ ಡಾ| ರವೀಶ್ ಪಡುಮಲೆ ಮಾತನಾಡಿ ರಾಮಾಯಣ, ಮಹಾಭಾರತ ಕೇವಲ ಕಥೆಯಲ್ಲ, ಅದು ನಮ್ಮ ಮಣ್ಣಿನ ಅವಿಭಾಜ್ಯ ಅಂಗವಾಗಿದೆ. ಸಮಾಜದಲ್ಲಿ ಧರ್ಮ ಉಳಿಯಲು ಶ್ರೀ ರಾಮನ ಆದರ್ಶವೇ ಕಾರಣ. ಶ್ರೀ ರಾಮನ ಬದುಕು ಸಂಸ್ಕಾರಕ್ಕೆ ಪೂರಕವಾಗಿದ್ದು ಸುಸಂಸ್ಕೃತ ಸಮಾಜ ನಿರ್ಮಾಣಕ್ಕೆ ರಾಮಾಯಣ ಸಪ್ತಾಹ ಅತ್ಯಂತ ಸೂಕ್ತವಾಗಿದೆ ಎಂದು ಶುಭ ಹಾರೈಸಿದರು.
ಸಾರ್ವಜನಿಕ ಶ್ರೀ ಗೌರಿ ಗಣೇಶೋತ್ಸವ ಸಮಿತಿ ಅಧ್ಯಕ್ಷ ಕೆ.ಹರೀಶ್ ಕುಮಾರ್ ಅಧ್ಯಕ್ಷತೆ ವಹಿಸಿದ್ದರು. ವಾಗ್ಮಿ ಡಾ!ವೀಣಾ ಬನ್ನಂಜೆ ಉಪಸ್ಥಿತರಿದ್ದರು. ಸಮಿತಿ ಕಾರ್ಯದರ್ಶಿ ಅರೆಕ್ಕಲ್ ರಾಮಚಂದ್ರ ಭಟ್ ಸ್ವಾಗತಿಸಿ, ಶ್ರೀಶಕುಮಾರ್ ಕಾರ್ಯಕ್ರಮ ನಿರೂಪಿಸಿ, ವಂದಿಸಿದರು.ತಾಲೂಕಿನ ಅಧ್ಯಾತ್ಮ ಚಿಂತಕರು, ವಿದ್ವಾಂಸರು, ಉಪನ್ಯಾಸಕರು ,ಮಹಿಳೆಯರು ಹಾಗು ಸಾರ್ವಜನಿಕರು ಭಾಗವಹಿಸಿದ್ದರು. ಡಾ!ವೀಣಾ ಬನ್ನಂಜೆ ಅವರಿಂದ ಜೂ 21ರವರೆಗೆ ಪ್ರತಿ ಸಂಜೆ 6 ರಿಂದ 8ರವರೆಗೆ ಸಂಪೂರ್ಣ ರಾಮಾಯಣ ಪ್ರವಚನ ಜ್ಞಾನ ಸತ್ರ ನಡೆಯಲಿದೆ.













