ಕೊಯ್ಯೂರು : “ವಿದ್ಯಾರ್ಥಿಯು ತನ್ನ ವಿದ್ಯಾರ್ಥಿ ಜೀವನದಲ್ಲಿ ಸುಖವನ್ನು ತ್ಯಜಿಸಿದರೆ, ಭವಿಷ್ಯದ ಜೀವನದಲ್ಲಿ ಸುಖವನ್ನು ಪಡೆಯಲು ಸಾಧ್ಯವಾಗುತ್ತದೆ ” ಎಂದು ನಡ ಸರ್ಕಾರಿ ಪದವಿಪೂರ್ವ ಕಾಲೇಜ್ ನ ಅರ್ಥ ಶಾಸ್ತ್ರ ಉಪನ್ಯಾಸಕಿ ಶ್ರೀಮತಿ ವಸಂತಿ ಪಿ. ಅಭಿಪ್ರಾಯ ಪಟ್ಟರು.
ಅವರು ಕೊಯ್ಯೂರು ಸರ್ಕಾರಿ ಪದವಿಪೂರ್ವ ಕಾಲೇಜ್ ನ ಪ್ರಥಮ ಪಿ ಯು ಸಿ ವಿದ್ಯಾರ್ಥಿಗಳ ಸ್ವಾಗತ ಕಾರ್ಯಕ್ರಮ ಮತ್ತು ಶೇ. 100 ಫಲಿತಾಂಶ ಪಡೆದ ದ್ವಿತೀಯ ಪಿ. ಯು. ಸಿ.ವಿದ್ಯಾರ್ಥಿಗಳನ್ನು ಅಭಿನಂದಿಸುವ ಕಾರ್ಯಕ್ರಮದ ಉದ್ಘಾಟನೆಯನ್ನು ನೆರವೇರಿಸಿ ಮಾತನಾಡುತ್ತಾ ಭಗವಂತ ಕರುಣಿಸಿದ ಈ ಸುಂದರ ಜೀವನವನ್ನು ಹಾಳು ಮಾಡಿಕೊಳ್ಳಬಾರದು. ದುಶ್ಚಟಗಳನ್ನು ದೂರಮಾಡಿ ಜೀವನಕ್ಕೊಂದು ಸುಂದರ ಅರ್ಥವನ್ನು ಕಲ್ಪಿಸಬೇಕು ಎಂದು ತಿಳಿಸಿದರು .
ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದ ಎಸ್. ಡಿ. ಎಂ ಕಾಲೇಜ್ ನ ಸಹ-ಪ್ರಾಧ್ಯಾ ಪಕ ದಿವ ಕೊಕ್ಕಡ ರವರು “ವಿದ್ಯಾರ್ಥಿಯು ತನ್ನ ಜೀವನದಲ್ಲಿ ನಿರ್ದಿಷ್ಟ ಗುರಿಯನ್ನು ಹೊಂದಿರಬೇಕು. ಆತ್ಮ ವಿಶ್ವಾಸ ಮತ್ತು ಪ್ರಯತ್ನದೊಂದಿಗೆ ಯಶಸ್ಸನ್ನು ಸಾಕಾರಗೊಳಿಸಿಕೊಳ್ಳಬೇಕು “ಎಂದು ಅಭಿಪ್ರಾಯಪಟ್ಟರು.
ವೇದಿಕೆಯಲ್ಲಿ ಕಾಲೇಜು ಅಭಿವೃದ್ಧಿ ಸಮಿತಿ ಉಪಾಧ್ಯಕ್ಷ ದಾಮೋದರ ಗೌಡ ಬೆರ್ಕೆ, ಕೊಯ್ಯೂರು ಪ್ರೌಢ ಶಾಲಾ ಹಿರಿಯ ಸಹಶಿಕ್ಷಕಿ ಶ್ರೀಮತಿ ಬೇಬಿ, ಗ್ರಾಮಪಂಚಾಯತ್ ಮಾಜಿ ಸದಸ್ಯರಾದ ಲೋಕೇಶ್ ಗೌಡ ಪಾಂಬೇಲು ಉಪಸ್ಥಿತರಿದ್ದರು. ಸಂಸ್ಥೆಯ ಪ್ರಾಚಾರ್ಯರಾದ ಮೋಹನ ಗೌಡ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು.
ವಿದ್ಯಾರ್ಥಿನಿಯರಾದ ಪೂಜಾಶ್ರೀ, ಯಜ್ಞ ಶ್ರೀ , ಪ್ರಜ್ಞಾ, ದೀಪಶ್ರೀ, ಕೃಪಾ ರವರ ಪ್ರಾರ್ಥನೆ ಯೊಂದಿಗೆ ಪ್ರಾರಂಭವಾದ ಕಾರ್ಯಕ್ರಮದಲ್ಲಿ ಪ್ರೀತಿ ಸ್ವಾಗತಿಸಿ, ಗುರುಪ್ರಸಾದ್ ಧನ್ಯವಾದವಿತ್ತರು. ವಿದ್ಯಾರ್ಥಿಗಳಾದ ದರ್ಶಿತ್,ದಿವ್ಯ ಅಭಿನಂದಿತರ ಪಟ್ಟಿ ವಾಚಿಸಿದರು. ರಶ್ಮಿತಾ ಕಾರ್ಯಕ್ರಮ ನಿರ್ವಹಿಸಿದರು. ಉಪನ್ಯಾಸಕ ಸಂತೋಷ್ ಕುಮಾರ್ , ಲಕ್ಷ್ಮಣ ಗೌಡ, ರಶ್ಮಿ ದೇವಿ, ಭವ್ಯ, ಪವಿತ್ರ ಕಾರ್ಯಕ್ರಮದ ಯಶಸ್ಸಿಗೆ ಸಹಕರಿಸಿದರು.













