ತಣ್ಣೀರುಪಂಥ : ಬ್ಯಾಂಕ್ ಆಫ್ ಬರೋಡ ಪ್ರವರ್ತಿತ ವಿಜಯ ಗ್ರಾಮೀಣ ಅಭಿವೃದ್ಧಿ ಪ್ರತಿಷ್ಠಾನ ಮಂಗಳೂರು ಹಾಗೂ ಭಾರತೀಯ ವಿಕಾಸ ಟ್ರಸ್ಟ್, ಮಣಿಪಾಲ ಇವರ ಜಂಟಿ ಆಶ್ರಯದಲ್ಲಿ ನಡೆದ 15 ದಿನಗಳ ಆರಿ ಕೌಶಲ್ಯ ತರಬೇತಿಯ ಸಮಾರೋಪ ಸಮಾರಂಭ ತಣ್ಣೀರುಪಂಥ ಹಾಲು ಉತ್ಪಾದಕರ ಸಂಘದ ಸಭಾಂಗಣ ಕಲ್ಲೇರಿಯಲ್ಲಿ ನಡೆಯಿತು.
ಭಾರತೀಯ ವಿಕಾಸ ಟ್ರಸ್ಟ್ ಮಣಿಪಾಲ ಇದರ ಕಾರ್ಯಕ್ರಮ ವ್ಯವಸ್ಥಾಪಕ ಜೀವನ್ ಕೊಲ್ಯ ಮಾತಾಡುತ್ತ ಮಹಿಳೆಯರು ಕಾಲಕ್ಕೆ ತಕ್ಕಂತ ಬೇಡಿಕೆಗೆ ಅನುಗುಣವಾಗಿ ಕೌಶಲ್ಯ ತರಬೇತಿ ಕಲಿತು ಸ್ವ ಉದ್ಯೋಗ ಮಾಡಬೇಕು.ಬೇಡಿಕೆ ಇರುವಾಗ ಮನೆಯಲ್ಲಿ ಉದ್ಯೋಗ ಮಾಡಿ ಉತ್ತಮ ಆದಾಯ ಗಳಿಸಲು ಸಾಧ್ಯವಿದೆ” ಎಂದರು. ವಿಜಯ ಗ್ರಾಮೀಣ ಅಭಿವೃದ್ಧಿ ಪ್ರತಿಷ್ಠಾನ ಮಂಗಳೂರು ಇದರ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಜ್ಯೋತಿ ರಾಜ್ ತರಬೇತಿಯಲ್ಲಿ ಭಾಗವಹಿಸಿದ ಮಹಿಳೆಯರ ಕೌಶಲ್ಯದ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿ, ಮಹಿಳೆಯರ ಸ್ವ ಉದ್ಯೋಗ ಮಾಡಲು ನಮ್ಮ ಸಂಸ್ಥೆ ಸದಾ ನೆರವು ನೀಡಲಿದೆ ಎಂದರು.
ಬೆಳ್ತಂಗಡಿ ತಾಲೂಕು ಅಮೂಲ್ಯ ಸಾಕ್ಷರತಾ ಸಮಾಲೋಚಕಿ ಉಷಾ ಕಾಮತ್ ತರಬೇತಿಯ ನಂತರದ ಅವಕಾಶಗಳ ಬಗ್ಗೆ , ಬ್ಯಾಂಕ್ ನಿಂದ ಸಿಗುವ ಬ್ಯಾಂಕ್ ಸಾಲ ಸೌಲಭ್ಯ ಬಗ್ಗೆ ವಿವರಿಸಿದರು. ತರಬೇತಿಯ ಸಂಪನ್ಮೂಲ ವ್ಯಕ್ತಿಗಳಾದ ದೀಕ್ಷಾ ಇವರು ತರಬೇತಿ ನೀಡಿದ ಅನುಭವ ಹಂಚಿಕೊಂಡರು. ಹೊಲಿಗೆ ತರಬೇತಿ ಕೇಂದ್ರದ ಶಿಕ್ಷಕಿ ಮೀನಾಕ್ಷಿ, ತರಬೇತುದಾರರಾದ ಅಕ್ಷಿತಾ, ತಣ್ಣೀರುಪಂಥ ಹಾಲು ಸೊಸೈಟಿ ಕಾರ್ಯದರ್ಶಿ ಜಯರಾಜ್ ವೇದಿಕೆಯಲ್ಲಿ ಉಪಸ್ಥಿತರಿದ್ದರು.
ತರಬೇತಿಯಲ್ಲಿ ಭಾಗವಹಿಸಿದ ಮಹಿಳೆಯರು ತರಬೇತಿ ಬಗ್ಗೆ ತಮ್ಮ ಅನಿಸಿಕೆ ವ್ಯಕ್ತಪಡಿಸಿದರು. ಯಶಸ್ವಿಯಾಗಿ ತರಬೇತಿ ಪೂರೈಸಿದ ಮಹಿಳೆಯರಿಗೆ ಪ್ರಮಾಣಪತ್ರ ವಿತರಿಸಲಾಯಿತು .ಗುಣವತಿ ಕಾರ್ಯಕ್ರಮ ನಿರೂಪಿಸಿ, ಮಲ್ಲಿಕಾ ಸ್ವಾಗತಿಸಿ, ವಿನೋದಾ ವಂದಿಸಿದರು.













