ಬೆಳ್ತಂಗಡಿ : ಸ್ನೇಹ ಜ್ಯೋತಿ ಮಹಿಳಾ ತಾಲೂಕು ಒಕ್ಕೂಟ ನೇತೃತ್ವದಲ್ಲಿ ಮಹಾಸಭೆ ಹಾಗೂ ನೂತನ ಪದಾಧಿಕಾರಿಗಳ ಆಯ್ಕೆ ಹಾಗೂ ಒಕ್ಕೂಟ ಬಲವರ್ಧನೆ ತರಬೇತಿಯನ್ನು ಜೂ. 16 ರಂದು ಸಾಥೋಮ್ ಟವರ್ ಬೆಳ್ತಂಗಡಿ ಇಲ್ಲಿ ಆಯೋಜಿಸಲಾಗಿತ್ತು.
ಒಕ್ಕೂಟದ ಅಧ್ಯಕ್ಷೆ ಮಂಜುಳಾ ಜೋನ್ ಸಭೆಯ ಅಧ್ಯಕ್ಷತೆಯನ್ನು ವಹಿಸಿದ್ದರು. ಸಂಪನ್ಮೂಲ ವ್ಯಕ್ತಿಯಾಗಿ ನಿಕಟಪೂರ್ವ ನಿರ್ದೇಶಕರಾದ ವಂ. ಫಾದರ್ ಬಿನೋಯ್ ಎಜೆ ರವರು ಒಕ್ಕೂಟಗಳು ಬಲವರ್ಧನೆಗೊಂಡು ಸಾಮಾಜಿಕ, ರಾಜಕೀಯ, ಆರ್ಥಿಕ, ಪರಿಸರ ಕ್ಷೇತ್ರದಲ್ಲಿ ಅಭಿವೃದ್ಧಿ ಸಾಧಿಸಲು ಮುಂದಾಗಬೇಕು ಹಾಗೂ ಪದಾಧಿಕಾರಿಗಳ ಪಾತ್ರ ಮತ್ತು ಜವಾಬ್ದಾರಿಗಳ ಬಗ್ಗೆ ಮಾಹಿತಿ ನೀಡಿದರು. 2026 ರಿಂದ 2029 ವರೆಗಿನ ಒಕ್ಕೂಟದ ನೂತನ ಪದಾಧಿಕಾರಿಗಳು ಹಾಗೂ ಸಮಿತಿ ಸದಸ್ಯರನ್ನು ಆಯ್ಕೆ ಮಾಡಲಾಯಿತು.

ಅಧ್ಯಕ್ಷರಾಗಿ ಫಿಲೋಮಿನಾ ಸಿಜೆ, ಉಪಾಧ್ಯಕ್ಷರಾಗಿ ಉಷಾ, ಕಾರ್ಯದರ್ಶಿಯಾಗಿ ವೈಶಾಲಿ, ಜೊತೆ ಕಾರ್ಯದರ್ಶಿಯಾಗಿ ರೋಶನಿ, ಕೋಶಾಧಿಕಾರಿಯಾಗಿ ಶುಭ ಇವರನ್ನು ಆಯ್ಕೆ ಮಾಡಲಾಯಿತು. ಸಮಿತಿ ಸದಸ್ಯರಾಗಿ ಸಂಧ್ಯಾ ಉಮೇಶ್, ಪ್ರಭಾವತಿ, ಮಂಜುಳಾ ಜೋನ್, ಮಿನಿ ತೋಮಸ್ ಹಾಗೂ ಎಲಿಯಮ್ಮ ತೋಮಸ್ ಇವರನ್ನು ಆಯ್ಕೆ ಮಾಡಲಾಯಿತು. ಡಿ.ಕೆ.ಆರ್. ಡಿ.ಎಸ್ ಸಂಸ್ಥೆಯ ನಿರ್ದೇಶಕರಾದ ವಂ.ಫಾದರ್ ಆದರ್ಶ್ ಪಿ.ಎಸ್ ರವರು ಎಸ್.ಐ.ಆರ್ ಬಗ್ಗೆ ಮಾಹಿತಿ ನೀಡಿದರು. ಹಿಂದಿನ ಸಮಿತಿ ಸದಸ್ಯರು 3 ವರ್ಷ ಉತ್ತಮ ರೀತಿಯಲ್ಲಿ ಕೆಲಸ ಮಾಡಿದ್ದು ಅವರನ್ನು ಅಭಿನಂದಿಸಲಾಯಿತು. ನೂತನ ಪದಾಧಿಕಾರಿಗಳಿಗೆ ಅಧಿಕಾರ ಹಸ್ತಾಂತರಿಸಲಾಯಿತು. ಎಲಿಯಮ್ಮ ತೋಮಸ್ ಸ್ವಾಗತಿಸಿದರು. ವೈಶಾಲಿ ವಂದಿಸಿದರು. ಸ್ನೇಹ ಜ್ಯೋತಿ ಒಕ್ಕೂಟದ 50 ಸದಸ್ಯರು ಭಾಗವಹಿಸಿದ್ದರು.













