
ಬೆಳ್ತಂಗಡಿ: ಕರ್ನಾಟಕದ ಅಡಿಕೆ ತುಂಬಿದ ಲಾರಿಗಳನ್ನು ಮಹಾರಾಷ್ಟ್ರದಲ್ಲಿ ಜಪ್ತಿ ಮಾಡಲಾಗತ್ತಿದ್ದು, ಆರ್ಥಿಕ ನಷ್ಟ ಮತ್ತು ಕಾನೂನು ಪ್ರಕ್ರಿಯೆಗೆ ಹೆದರಿ ವರ್ತಕರು ಅಡಿಕೆ ಸಾಗಣೆಯನ್ನು ಗಣನೀಯವಾಗಿ ಕಡಿಮೆ ಮಾಡಿದ್ದಾರೆ. ಇದರಿಂದ ಸ್ಥಳೀಯ ಮಾರುಕಟ್ಟೆಗಳಲ್ಲಿಅಡಿಕೆ ಧಾರಣೆ ಕುಸಿಯುವ ಆತಂಕ ಬೆಳೆಗಾರರನ್ನು ಕಾಡುತ್ತಿದೆ.

ಕೆಲವು ತಿಂಗಳುಗಳಿಂದ ಕ್ಯಾಂಪ್ಕೊ, ಆಪ್ಕೋಸ್ ಮತ್ತು ಶಿರಸಿ ಭಾಗದ ಖಾಸಗಿ ವರ್ತಕರಿಂದ ಮಹಾರಾಷ್ಟ್ರದ ಪ್ರಮುಖ ನಗರಗಳಿಗೆ ಅಡಿಕೆ ಸಾಗಣೆ ಮಾಡುತ್ತಿದ್ದ ಲಾರಿಗಳನ್ನು ಅಲ್ಲಿನ ಆಹಾರ ಮತ್ತು ಔಷಧ ಆಡಳಿತ (ಎಫ್ಡಿಎ) ಅಧಿಕಾರಿಗಳು ತಡೆದು ಜಪ್ತಿ ಮಾಡುವ ಕ್ರಿಯೆಯಲ್ಲಿ ತೊಡಗಿದ್ದಾರೆ. ಅಡಿಕೆಯಲ್ಲಿ ತೇವಾಂಶ ನಿಗದಿತ ಪ್ರಮಾಣದಲ್ಲಿ ಇಲ್ಲ ಮತ್ತು ರೆಡ್ ಆಕ್ಸೈಡ್ ಮಿಶ್ರಣವಿದೆ. ಇದು ಆರೋಗ್ಯಕ್ಕೆ ಹಾನಿಕರ ಮತ್ತು ಆಹಾರ ಸುರಕ್ಷತೆ ಕಾಯ್ದೆಯ ಸ್ಪಷ್ಟ ಉಲ್ಲಂಘನೆ. ವಿದೇಶಿ ಕಳಪೆ ಅಡಿಕೆ ಮಿಶ್ರಣದ ಶಂಕೆಯೂ ಇದೆ’ ಎಂಬುದು ಅಲ್ಲಿನ ಅಧಿಕಾರಿಗಳ ವಾದ.
‘ಲಾರಿಗಳನ್ನು ತಡೆಯುವ ಅಧಿಕಾರಿಗಳು, ಅಡಿಕೆಯನ್ನು ಪ್ರಯೋಗಾಲಯಕ್ಕೆ ಕಳುಹಿಸುತ್ತಾರೆ. ಅದರ ವರದಿ ಬರಲು ಒಂದು ವಾರ ಬೇಕು. ಇದರಿಂದ ಲಾರಿ ಚಾಲಕರು ರಸ್ತೆಯಲ್ಲೇ ಉಳಿಯುವಂತಾಗಿ, ವ್ಯಾಪಾರಿಗಳು ತೊಡಗಿಸುವ ಕೋಟ್ಯಂತರ ರೂಪಾಯಿ ಬಂಡವಾಳಕ್ಕೆ ಸಮಸ್ಯೆ ಆಗಿದೆ. ಅಂದಾಜು ₹1.10 ಕೋಟಿಯಿಂದ ₹1.70 ಕೋಟಿ ಮೌಲ್ಯದ, 24 ಟನ್ನಿಂದ 30 ಟನ್ ತೂಕದ ಅಡಿಕೆ ಲಾರಿಗಳನ್ನು ಹೆಚ್ಚು ಜಪ್ತು ಮಾಡಲಾಗುತ್ತಿದೆ. ಕೆಲವು ಪ್ರಕರಣಗಳು ಈಗಾಗಲೇ ಕೋರ್ಟ್ ಮೆಟ್ಟಿಲೇರಿವೆ. ಕಾನೂನು ಪ್ರಕ್ರಿಯೆ ಮುಗಿಯುವವರೆಗೂ ವಾಹನದ ಜತೆ ಅಡಿಕೆಯೂ ಕೈಸೇರದ ಪರಿಸ್ಥಿತಿಯಿದೆ’ ಎಂದು ವರ್ತಕರೊಬ್ಬರು ತಿಳಿಸಿದರು. ಒಂದು ವಾರದಿಂದ ಈ ಕ್ರಮ ಜಾರಿಯಲ್ಲಿದ್ದು, ವ್ಯಾಪಾರಸ್ಥರು ಮತ್ತು ಬೆಳೆಗಾರರು ದಿಗ್ಬ್ರಾಂತರಾಗಿದ್ದಾರೆ.
ಇತ್ತೀಚಿನ ದಿನಗಳಲ್ಲಿ ಅಡಕೆ ಬೆಳೆಗಾರರಿಗೆ ಸಂಕಷ್ಟ ತಪ್ಪಿದ್ದಲ್ಲ. ಒಂದಲ್ಲ ಒಂದು ರೀತಿಯ ಸಮಸ್ಯೆ ಎದುರಾಗುತ್ತಲೇ ಇದೆ. ರೋಗ-ಬಾಧೆಗಳಿಂದ ಹೈರಾಣಾಗಿರುವ ಕರಾವಳಿ ಹಾಗೂ ಮಲೆನಾಡಿನ ಅಡಕೆಗೀಗ ಮಹಾರಾಷ್ಟ್ರ ಅಧಿಕಾರಿಗಳ ಈ ಕಿರುಕುಳ ಹೊಸ ಸಂಕಷ್ಟವನ್ನು ತಂದೊಡ್ಡಿದೆ. ಈ ಸಂಕಷ್ಟ ವರ್ತಕರಷ್ಟೇ ಅಲ್ಲ, ಬೆಳೆಗಾರರೂ ಆತಂಕಪಡುವಂತೆ ಮಾಡಿದೆ. ಮಹಾರಾಷ್ಟ್ರದ ಅಧಿಕಾರಿಗಳ ಕೆಲಸದಿಂದ ಅಡಕೆ ಖರೀದಿಯೇ ಸ್ಥಗಿತಗೊಳ್ಳುವ ಆತಂಕ ಎದುರಾಗಿದೆ.
ಜೂನ್ 22 ರ ಸಂಜೆಯೊಳಗೆ ಈ ಸಮಸ್ಯೆ ಬಗೆಹರಿಯದಿದ್ದರೆ, ಜೂನ್ 23 ರಂದು ಪತ್ರಿಕಾಗೋಷ್ಟಿ ನಡೆಸಿ ಜೂನ್ 24 ರಿಂದ ಎಲ್ಲಾ ಅಡಿಕೆ ವ್ಯವಹಾರವನ್ನು ನಿಲ್ಲಿಸಲಾಗುತ್ತದೆ ಎಂದು ಜಿಲ್ಲಾ ಅಡಿಕೆ ವರ್ತಕರ ಸಂಘದ ಅಧ್ಯಕ್ಷ ಪ್ರಶಾಂತ್ ಶೆಟ್ಟಿ ಮೂಡಾಯೂರು ತಿಳಿಸಿದ್ದಾರೆ.












