ಇಂದಬೆಟ್ಟು: ನವಭಾರತ್ ಗೆಳೆಯರ ಬಳಗ ಕಲ್ಲಾಜೆ ಇಂದಬೆಟ್ಟು ಇದರ ವತಿಯಿಂದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ದೇವನಾರಿ ಇಂದಬೆಟ್ಟುವಿನಲ್ಲಿ ಪೊಲೀಸ್ ಕಾನ್ಸ್ಟೇಬಲ್ ಪರೀಕ್ಷೆಯ ಮಾಹಿತಿ ಕಾರ್ಯಾಗಾರವನ್ನು ಬೆಳ್ತಂಗಡಿ ಶಾಸಕ ಹರೀಶ್ ಪೂಂಜಾ ದೀಪ ಬೆಳಗಿಸಿ ಉದ್ಘಾಟಿಸಿದರು.


ಬಳಿಕ ಮಾತನಾಡಿದ ಶಾಸಕರು ನವಭಾರತ್ ಗೆಳೆಯರ ಬಳಗದ ಯುವಕರ ಕಾರ್ಯಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದರು. ತನ್ನ ಬಿಡುವಿಲ್ಲದ ಕಾರ್ಯಕ್ರಮದಿಂದಾಗಿ ಬೆಂಗಳೂರಿನಿಂದ ನೇರವಾಗಿ ಈ ವಿಶೇಷ ಕಾರ್ಯಕ್ರಮಕ್ಕಾಗಿ ಶಾಸಕರು ಆಗಮಿಸಿ ಜನೋಪಯೋಗಿ ಕಾರ್ಯಕ್ರಮದ ಆಯೋಜನೆಗೆ ನವಭಾರತ್ ಗೆಳೆಯರ ಬಳಗದ ಸದಸ್ಯರಿಗೆ ಅಭಿನಂದನೆ ಸಲ್ಲಿಸುವುದರ ಜೊತೆಗೆ ಈ ಕಾರ್ಯಕ್ರಮಕ್ಕೆ ಆರ್ಥಿಕ ಸಹಕಾರ ನೀಡಿದರು. ಮಾಹಿತಿ ಕಾರ್ಯಾಗಾರದಲ್ಲಿ ಭಾಗವಹಿಸಿದ ಎಲ್ಲರಿಗೂ ಶುಭ ಹಾರೈಸಿದರು.

ಕಾರ್ಯಕ್ರಮದಲ್ಲಿ ಬೆಳ್ತಂಗಡಿ ಸಂಚಾರಿ ಪೊಲೀಸ್ ಉಪ ನಿರೀಕ್ಷಕರಾದ ಕಿಶೋರ್ , ಸಿಬ್ಬಂದಿ ಉಮಾಪತಿ , ಬೆಳ್ತಂಗಡಿ ಪೊಲೀಸ್ ಠಾಣೆಯ ಎ.ಎಸ್.ಐ ನಾರಾಯಣ , ಬೀಟ್ ಪೊಲೀಸ್ ಸಂತೋಷ್ , ತಮ್ಮ ವೃತ್ತಿ ಅನುಭವ ಹಂಚಿಕೊಂಡು ಪರೀಕ್ಷೆಯ ಬಗ್ಗೆ ಮಾಹಿತಿ ನೀಡಿದರು. ಸಂಪನ್ಮೂಲ ವ್ಯಕ್ತಿಯಾಗಿ ಮುಡಾಯಿಬೆಟ್ಟು ಸ.ಹಿ.ಪ್ರಾ ಶಾಲೆಯ ಮುಖ್ಯಶಿಕ್ಷಕ ಕಿಶೋರ್ ಕುಮಾರ್ ಎಚ್.ಕೆ ರವರು ಕಾರ್ಯಾಗಾರವನ್ನು ನಡೆಸಿಕೊಟ್ಟರು.
ಕಾರ್ಯಕ್ರಮದಲ್ಲಿ ಸಂಘದ ಅಧ್ಯಕ್ಷ ಸಂತೋಷ್ ಕುಮಾರ್ ಉಂಬೆಜೆ ರವರು ಅಧ್ಯಕ್ಷತೆ ವಹಿಸಿದ್ದರು. ಗೌರವಾಧ್ಯಕ್ಷ ಅರುಣ್ ಕುಮಾರ್ ಕೆಳಗಿನ ಕಲ್ಲಾಜೆ, ಕಾರ್ಯದರ್ಶಿ ನಾಗೇಶ್ ಆಚಾರ್ಯ ಮುಂಡ್ರಬೆಟ್ಟು, ಉಪಾಧ್ಯಕ್ಷರಾದ ರಾಜೇಶ್ ಹೆಬ್ಬಾರಪಲ್ಕೆ, ಸಂಘದ ಪದಾಧಿಕಾರಿಗಳು ಹಾಗೂ ಸದಸ್ಯರು ಉಪಸ್ಥಿತರಿದ್ದರು. ವಿನೋದ್ ಪ್ರಸಾದ್ ಕಲ್ಲಾಜೆ ಕಾರ್ಯಕ್ರಮ ನಿರೂಪಿಸಿದರು. ಬೆಳ್ತಂಗಡಿ ತಾಲೂಕಿನ ವಿವಿಧ ಗ್ರಾಮಗಳಿಂದ ಪರೀಕ್ಷಾಕಾಂಶಿ ಯುವಕ ಯುವತಿಯರು ಭಾಗವಹಿಸಿ ಕಾರ್ಯಾಗಾರದ ಸದುಪಯೋಗ ಪಡೆದುಕೊಂಡರು. ಮುಂದಿನ ದಿನಗಳಲ್ಲಿ ಪರೀಕ್ಷಾರ್ಥಿಗಳಿಗೆ ಅನ್ ಲೈನ್ ಅಪ್ಲಿಕೇಷನ್, ದೈಹಿಕ ಪರೀಕ್ಷೆ ಇದರ ಬಗ್ಗೆ ನವಭಾರತ್ ಗೆಳೆಯರ ಬಳಗ (ರಿ) ಕಲ್ಲಾಜೆ, ಇಂದಬೆಟ್ಟು ಸಹಕಾರ ನೀಡಲಿದೆ.













