ಉಜಿರೆ: ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಯೋಗ ಮತ್ತು ಪ್ರಕೃತಿ ಚಿಕಿತ್ಸೆಗಳ ಮಹಾವಿದ್ಯಾಲಯ ಹಾಗೂ ಕಾಲೇಜಿನ ರಾಷ್ಟ್ರೀಯ ಸೇವಾ ಯೋಜನೆ (NSS) ಘಟಕದ ಜಂಟಿ ಪ್ರಾಯೋಜಕತ್ವದಲ್ಲಿ ಪ್ರಾಂಶುಪಾಲರಾದ ಡಾ ಪ್ರಶಾಂತ್ ಶೆಟ್ಟಿ ಹಾಗೂ ರಾಷ್ಟ್ರೀಯ ಸೇವಾ ಸಂಘದ ಅಧಿಕಾರಿ ಡಾ. ಶಾಲ್ಮಲಿ ಸುನಿಲ್ ವರ ಮಾರ್ಗದರ್ಶನದಲ್ಲಿ ಜೂನ್ 15 ರಿಂದ 20, 2026ರವರೆಗೆ ಉಜಿರೆ ಹಾಗೂ ಸುತ್ತಮುತ್ತಲಿನ ವಿವಿಧ ಸಂಸ್ಥೆಗಳಲ್ಲಿ ಉಚಿತ ಯೋಗ ಶಿಬಿರವನ್ನು ಯಶಸ್ವಿಯಾಗಿ ಹಮ್ಮಿಕೊಳ್ಳಲಾಯಿತು.

ಶಿಬಿರದ ಪ್ರಯುಕ್ತ ನಿಡ್ಲೆ ಗ್ರಾಮಪಂಚಾಯತ್ ಹಾಗೂ ಎಸ್ ಡಿ ಎಂ ಪಿಯುಸಿ ಕಾಲೇಜಿನ ರಾಷ್ಟ್ರೀಯ ಸೇವಾ ಯೋಜನೆ ಘಟಕದ ಜಂಟಿ ಪ್ರಾಯೋಜಕತ್ವದಲ್ಲಿ ಡಾ ಹರ್ಷಿಣಿ ಅವರು ವೃದ್ಧಾಪ್ಯದಲ್ಲಿ ಯೋಗದ ಪಾತ್ರದ ಬಗ್ಗೆ ಉಪನ್ಯಾಸ ನೀಡಿರುತ್ತಾರೆ.

ಶಿಬಿರದ ಅಂಗವಾಗಿ ನಿಡ್ಲೆ ಗ್ರಾಮದ ಸಂಜೀವಿನಿ ಮಹಿಳಾ ಸಂಘದ ಸದಸ್ಯರಿಗೆ, ಬ್ಯಾಂಕ್ ಆಫ್ ಬರೋಡ, ಕರ್ನಾಟಕ ಬ್ಯಾಂಕ್, ಕೆನರಾ ಬ್ಯಾಂಕ್ ಹಾಗೂ ಬೆಳ್ತಂಗಡಿ ಮಹಿಳಾ ಕೋ-ಆಪರೇಟಿವ್ ಸೊಸೈಟಿಯ ಉದ್ಯೋಗಿಗಳಿಗೆ ಯೋಗ ತರಬೇತಿ ನೀಡಲಾಯಿತು. ಅಲ್ಲದೆ ಅಮೃತ್ ಸಿಲ್ಕ್, ಬೇಬಿ ಸ್ಕ್ವೇರ್ ಬಟ್ಟೆ ಮಳಿಗೆಗಳ ಸಿಬ್ಬಂದಿ, ಉಜಿರೆ ಪ್ರಾಥಮಿಕ ಆರೋಗ್ಯ ಕೇಂದ್ರದ ಸಿಬ್ಬಂದಿ ಹಾಗೂ ಎಸ್.ಡಿ.ಎಂ. ಮಲ್ಟಿ-ಸ್ಪೆಷಾಲಿಟಿ ಆಸ್ಪತ್ರೆಯ ಸಿಬ್ಬಂದಿಗೂ ಉಚಿತ ಯೋಗಾಭ್ಯಾಸವನ್ನು ಕಲಿಸಲಾಯಿತು.
ಯೋಗದ ಮೂಲಕ ದೈಹಿಕ ಮತ್ತು ಮಾನಸಿಕ ಆರೋಗ್ಯವನ್ನು ವೃದ್ಧಿಸುವ ಉದ್ದೇಶದಿಂದ ಆಯೋಜಿಸಲಾದ ಈ ಶಿಬಿರದಲ್ಲಿ ಸುಮಾರು 150 ಮಂದಿ ಭಾಗವಹಿಸಿ ಪ್ರಯೋಜನ ಪಡೆದರು. ಭಾಗವಹಿಸಿದವರು ಯೋಗಾಭ್ಯಾಸದ ಮಹತ್ವ ಹಾಗೂ ಆರೋಗ್ಯಕರ ಜೀವನಶೈಲಿಯ ಕುರಿತು ಅರಿವು ಪಡೆದರು.












