ಉಜಿರೆ : ಉಜಿರೆಯ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಎಜುಕೇಷನಲ್ ಸೊಸೈಟಿ (ರಿ) ಇದರ ಆಶ್ರಯದಲ್ಲಿ ಉಜಿರೆಯ ಎಸ್.ಡಿ.ಎಂ ಸ್ವಾಯತ್ತ ಕಾಲೇಜಿನ ಎನ್.ಎಸ್.ಎಸ್., ಎನ್.ಸಿ.ಸಿ., ರೋವರ್ಸ್ & ರೇಂಜರ್ಸ್ ಘಟಕಗಳು ಮತ್ತು ದಕ್ಷಿಣ ಕನ್ನಡ ಜಿಲ್ಲಾ ಪೊಲೀಸ್, ಬೆಳ್ತಂಗಡಿ ಉಪವಿಭಾಗ ಇವುಗಳ ಸಹಭಾಗಿತ್ವದಲ್ಲಿ ಮಾದಕ ದ್ರವ್ಯ ದುರುಪಯೋಗ ಮತ್ತು ಅಕ್ರಮ ಸಾಗಾಣೆ ವಿರೋಧಿ ಅಂತಾರಾಷ್ಟ್ರೀಯ ದಿನದ ಅಂಗವಾಗಿ ಬೃಹತ್ ಜಾಗೃತಿ ಕಾರ್ಯಕ್ರಮ ನಡೆಯಿತು.
ಕಾಲೇಜಿನ ಇಂದ್ರಪ್ರಸ್ಥ ಸಭಾಂಗಣದಲ್ಲಿ ನಡೆದ ಸಭಾ ಕಾರ್ಯಕ್ರಮದಲ್ಲಿ ಗೌರವ ಉಪಸ್ಥಿತರಿದ್ದ ಎಸ್.ಡಿ.ಎಂ ಶಿಕ್ಷಣ ಸಂಸ್ಥೆಗಳ ಕಾರ್ಯದರ್ಶಿ ಡಾ. ಸತೀಶ್ಚಂದ್ರ ಎಸ್ ಮಾತನಾಡಿ, ಯುವಕರು ಆರೋಗ್ಯ ಪೂರ್ಣ ಜೀವನವನ್ನು ಕಟ್ಟಿಕೊಳ್ಳುವ ನಿರ್ಧಾರವನ್ನು ಮಾಡಬೇಕು. ಆರಂಭದಿಂದಲೇ ಹಿರಿಯರು ಮತ್ತು ಪೋಷಕರ ಮಾರ್ಗದರ್ಶನ ಪಡೆದು ಯುವ ಸಮುದಾಯ ಈ ಸಮಾಜ ಮತ್ತು ದೇಶದ ಆಸ್ತಿಗಳಾಗಬೇಕು. ನಕಾರಾತ್ಮಕ ಚಿಂತನೆಗಳಿಗೆ ತಲೆದೂಗದೆ ಸಕಾರಾತ್ಮಕ ಯೋಚನೆಯೊಂದಿಗೆ ಮುಂದೆ ಸಾಗಿದಾಗ ನಶಾ ಮುಕ್ತ ಭಾರತ ನಿರ್ಮಾಣವಾಗಲು ಸಾಧ್ಯವಾಗುತ್ತದೆ ಎಂದರು.

ಮುಖ್ಯ ಅತಿಥಿಗಳಾಗಿದ್ದ ಮಂಗಳೂರು ವಿಭಾಗದ ಹೆಚ್ಚುವರಿ ಪೊಲೀಸ್ ಅಧೀಕ್ಷಕ (Adni. SP) ಅನಿಲ್ ಕುಮಾರ್ ಭೂಮ ರೆಡ್ಡಿ ಮಾತನಾಡಿ, ಮಾದಕ ವಸ್ತುಗಳು ವ್ಯಕ್ತಿಗೆ ಮಾತ್ರವಲ್ಲದೇ ಈ ಸಮಾಜ ಹಾಗು ದೇಶಕ್ಕೆ ಮಾರಕ. ಭಾರತ ಅತ್ಯಂತ ಹೆಚ್ಚಿನ ತರುಣ ತರುಣಿಯರನ್ನು ಹೊಂದಿರುವ ದೇಶ. ದಿನೇ ದಿನೇ ಯುವ ಸಮುದಾಯ ಇಂತಹ ಮಾದಕ ವ್ಯಸನಗಳಿಗೆ ಬಲಿಯಾಗುತ್ತಿರುವುದು ಆತಂಕಕಾರಿ ಸಂಗತಿ. ಸರಿಯಾದ ಮಾರ್ಗದರ್ಶನ ಮತ್ತು ಸಕಾರಾತ್ಮಕ ಮಾರ್ಗದಲ್ಲಿ ನಡೆದಾಗ ಇಂತಹ ದುಸ್ಸಾಹಸಗಳಿಂದ ದೂರ ಸರಿದು, ಯುವ ಸಮುದಾಯ ಈ ಸಮಾಜದ ಪ್ರಭಲ ಶಕ್ತಿಯಾಗಿ ಬೆಳೆಯಬಹುದು.. ಮಾದಕ ವಸ್ತುಗಳು ನಮ್ಮೊಂದಿಗೆ ನಮ್ಮ ಕನಸು ಮತ್ತು ಶಕ್ತಿಯನ್ನು ಕುಂಠಿತಗೊಳಿಸುತ್ತದೆ. ಪೊಷಕರು ಹಾಗು ಮಾರ್ಗದರ್ಶಕರು ಇದರ ವಿರುದ್ಧ ಸರಿಯಾದ ಕ್ರಮ ಕೈಗೊಳ್ಳಬೇಕು ಎಂದು ಜಾಗೃತಿ ಮೂಡಿಸಿದರು.
ಬೆಳ್ತಂಗಡಿ ಗ್ರಾಮಾಂತರ ವಿಭಾಗದ ಪೊಲೀಸ್ ವೃತ್ತ ನಿರೀಕ್ಷಕ ರವಿ ಬಿ. ಎಸ್ ಮಾತನಾಡಿ, ಯುವ ಸಮುದಾಯಕ್ಕೆ ದೈಹಿಕ ಆರೋಗ್ಯದ ಜೊತೆಗೆ ಮಾನಸಿಕ ಆರೋಗ್ಯವು ಬಹುಮುಖ್ಯ. ನಕಾರಾತ್ಮಕ ಯೋಚನೆ ಮತ್ತು ಯೋಜನೆಗಳಿಗೆ ತುತ್ತಾಗದೆ ಸಮಾಜಮುಖಿಗಳಾಗಿ ಬೆಳೆಯೋಣ. ದೇಶದ ಪ್ರಗತಿಯಲ್ಲಿ ಪಾಲುದಾರರಾಗೋಣ ಎಂದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ಕಾಲೇಜಿನ ಪ್ರಾಚಾರ್ಯರಾದ ಪ್ರೋ ವಿಶ್ವನಾಥ್ ಪಿ ಮಾತನಾಡಿ, ಉತ್ತಮ ಸಮಾಜದ ನಿರ್ಮಾಣಕ್ಕಾಗಿ ಯುವ ಸಮುದಾಯದ ಕೊಡುಗೆ ಅವಶ್ಯಕವಿದೆ. ಈ ಕಾರಣಕ್ಕಾಗಿ ಎಸ್.ಡಿ.ಎಂ ಸ್ವಾಯತ್ತ ಕಾಲೇಜಿನಲ್ಲಿ ವ್ಯಕ್ತಿತ್ವ ವಿಕಸನ ದಂತಹ ಕಾರ್ಯಕ್ರಮಗಳಲ್ಲಿ ವಿದ್ಯಾರ್ಥಿಗಳ ಆರಂಭದಿನದಿಂದಲೇ ಮಾರ್ಗದರ್ಶನ ಮಾಡಲಾಗುತ್ತದೆ ಎಂದರು.
ಕಾರ್ಯಕ್ರಮದ ವೇದಿಕೆಯಲ್ಲಿ ಬೆಳ್ತಂಗಡಿ ಉಪ ವಿಭಾಗ ಪೊಲೀಸ್ ಉಪ ಅಧೀಕ್ಷಕರು ರೋಹಿಣಿ ಸಿ. ಕೆ.,ಬೆಳ್ತಂಗಡಿ ಪೊಲೀಸ್ ಠಾಣೆ ಪೊಲೀಸ್ ಉಪ ನಿರೀಕ್ಷಕರು ಆನಂದ್ ಎಂ., (ಕಾ.ಸು.), ಪೊಲೀಸ್ ಉಪ ನಿರೀಕ್ಷಕರು (ತನಿಖೆ) ಸಿಕಂದರ್ ಪಾಷ ಉಪಸ್ಥಿತರಿದ್ದರು. ಕಾರ್ಯಕ್ರಮದಲ್ಲಿ ಉಜಿರೆಯ ಎಸ್.ಡಿ.ಎಂ ನ ವಿವಿಧ ಶಿಕ್ಷಣ ಸಂಸ್ಥೆಗಳ ಪ್ರಾಂಶುಪಾಲರು, ಮುಖ್ಯಸ್ಥರು, ಉಪನ್ಯಾಸಕರು, ಸಿಬ್ಬಂದಿಗಳು ಹಾಗು ವಿದ್ಯಾರ್ಥಿಗಳು ಭಾಗಿಯಾಗಿದ್ದರು. ವಿದ್ಯಾರ್ಥಿನಿಯರು ಪ್ರಾರ್ಥಿಸಿದರು. ಕಾಲೇಜಿನ ರಾಷ್ಟ್ರೀಯ ಸೇವಾ ಯೋಜನೆಯ ಯೋಜನಾಧಿಕಾರಿ ಡಾ. ಮಹೇಶ್ ಕುಮಾರ್ ಶೆಟ್ಟಿ ಹೆಚ್ ಸಂಯೋಜಿಸಿ ನಿರೂಪಿಸಿದರು. ಎನ್ ಸಿ ಸಿ ನೌಕಾ ವಿಭಾಗದ ಸಬ್ ಲೆಫ್ಟಿನೆಂಟ್ ಹರೀಶ ಶೆಟ್ಟಿ ಕಾರ್ಯಕ್ರಮವನ್ನು ಸಂಯೋಜಿಸಿ ವಂದಿಸಿದರು.
ಸಾವಿರಾರು ವಿದ್ಯಾರ್ಥಿಗಳಿಂದ ಪ್ರತಿಜ್ಞಾ ವಿಧಿ ಸ್ವೀಕಾರ :
ಇಂದ್ರಪ್ರಸ್ಥ ಸಭಾಂಗಣದಲ್ಲಿ ಸೇರಿದ್ದ ಉಪನ್ಯಾಸಕರು ಸೇರಿದಂತೆ ಸಾವಿರಾರು ವಿದ್ಯಾರ್ಥಿಗಳು ಮಾದಕ ವಸ್ತುಗಳು ವಿರುದ್ಧ ಪ್ರತಿಜ್ಞಾ ವಿಧಿ ಸ್ವೀಕಾರ ಮಾಡಿದರು.
ಮಂಗಳೂರು ವಿಭಾಗದ ಹೆಚ್ಚುವರಿ ಪೊಲೀಸ್ ಅಧೀಕ್ಷಕ (Adni. SP) ಅನಿಲ್ ಕುಮಾರ್ ಭೂಮ ರೆಡ್ಡಿ ಪ್ರತಿಜ್ಞಾ ವಿಧಿ ಬೋಧಿಸಿದರು.
ನಾನ ಸಂದೇಶಗಳೊಂದಿಗೆ ಉಜಿರೆಯಲ್ಲಿ ಬೃಹತ್ ಜಾಥಾ :
ಎಸ್.ಡಿ.ಎಂ ಸ್ವಾಯತ್ತ ಕಾಲೇಜಿನ ಎನ್.ಎಸ್.ಎಸ್., ಎನ್.ಸಿ.ಸಿ., ರೋವರ್ಸ್ & ರೇಂಜರ್ಸ್ ಘಟಕಗಳು ಮತ್ತು ದಕ್ಷಿಣ ಕನ್ನಡ ಜಿಲ್ಲಾ ಪೊಲೀಸ್, ಬೆಳ್ತಂಗಡಿ ಉಪವಿಭಾಗ ಇವುಗಳ ಸಹಭಾಗಿತ್ವದಲ್ಲಿ ಮಾದಕ ದ್ರವ್ಯ ದುರುಪಯೋಗ ಮತ್ತು ಅಕ್ರಮ ಸಾಗಾಣೆ ವಿರೋಧಿ ಅಂತಾರಾಷ್ಟ್ರೀಯ ದಿನದ ಅಂಗವಾಗಿ ನಾನ ಜಾಗೃತಿ ಸಂದೇಶಗಳೊಂದಿಗೆ ಉಜಿರೆಯಲ್ಲಿ ಬೃಹತ್ ಜಾಥಾ ನಡೆಯಿತು. ಜಾತಾ ಕಾರ್ಯಕ್ರಮವು ಕಾಲೇಜಿನ ಕಾಲಾ ಕೇಂದ್ರದಿಂದ ಆರಂಭಗೊಂಡು, ಉಜಿರೆ ವೃತ್ತದ ವರೆಗೆ ಮತ್ತು ಉಜಿರೆ ವೃತ್ತದಿಂದ ಕಾಲೇಜಿನವರೆಗೆ ಸಾಗಿತು. ಜಾಥಾಕ್ಕೆ ಎಸ್.ಡಿ.ಎಂ ಶಿಕ್ಷಣ ಸಂಸ್ಥೆಗಳ ಕಾರ್ಯದರ್ಶಿ ಡಾ. ಸತೀಶ್ಚಂದ್ರ ಎಸ್ ಹಸಿರು ನಿಶಾನೆ ತೋರಿಸುವ ಮೂಲಕ ಚಾಲನೆ ನೀಡಿದರು. ಸಂಸ್ಥೆಯ ಸಿಬ್ಬಂದಿಗಳು ಸೇರಿದಂತೆ ವಿದ್ಯಾರ್ಥಿಗಳು ಭಾಗಿಯಾಗಿದ್ದರು.,












