ಧರ್ಮಸ್ಥಳ : ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ, ದಕ್ಷಿಣ ಕನ್ನಡ ಜಿಲ್ಲಾ ಪಂಚಾಯತ್ ಮಂಗಳೂರು, ತಾಲೂಕು ಪಂಚಾಯತ್ ಬೆಳ್ತಂಗಡಿ, ಧರ್ಮಸ್ಥಳ ಗ್ರಾಮ ಪಂಚಾಯತ್, ಸ್ವಚ್ಛ ಭಾರತ ಮಿಷನ್ (ಗ್ರಾ) ದ.ಕ., ಶ್ರೀ ಕ್ಷೇತ್ರ ಧರ್ಮಸ್ಥಳ, ರೋಟರಿ ಕ್ಲಬ್ ಬೆಳ್ತಂಗಡಿ, ಲಯನ್ಸ್ ಕ್ಲಬ್ ಬೆಳ್ತಂಗಡಿ, ಶೌರ್ಯ ವಿಪತ್ತು ನಿರ್ವಹಣಾ ಘಟಕ ಧರ್ಮಸ್ಥಳ, ಮಾನ್ವಿಶ್ರೀ ಸಂಜೀವಿನಿ ಮಹಿಳಾ ಒಕ್ಕೂಟ, ಕನ್ಯಾಕುಮಾರಿ ಯುವತಿ ಮಂಡಲ, ಶ್ರೀ ಶಕ್ತಿ ಗುಂಪುಗಳು, ಸ್ವ ಸಹಾಯ ಸಂಘಗಳು, ಇವುಗಳ ಆಶ್ರಯದಲ್ಲಿ ನೇತ್ರಾವತಿ ಸ್ನಾನಘಟ್ಟ ನದಿಕಿನಾರೆಯಲ್ಲಿ ಸ್ವಚ್ಛ ನೇತ್ರಾವತಿ ವಿಶೇಷ ಬೃಹತ್ ಸ್ವಚ್ಛತಾ ಅಭಿಯಾನವನ್ನು ಜೂ.25 ರಂದು ಮಾಡಲಾಯಿತು.

ಸ್ವಚ್ಛ ನೇತ್ರಾವತಿ ಸ್ನಾನಘಟ್ಟದ ಪಾವಿತ್ರ್ಯತೆ ಸ್ವಚ್ಛತಾ ಸೂಚನಾ ಫಲಕವನ್ನು ಶ್ರೀ ಕ್ಷೇತ್ರ ಧರ್ಮಸ್ಥಳದ ವೀರು ಶೆಟ್ಟಿ ಯವರು ಅನಾವರಣಗೊಳಿಸಿ ಮಾತನಾಡಿ, ಸರಕಾರದ ಸಂಸ್ಥೆಗಳ ವತಿಯಿಂದ ನೇತ್ರಾವತಿ ನದಿ ಸ್ವಚ್ಛತೆ ಕಾರ್ಯಕ್ರಮ ಹಮ್ಮಿಕೊಂಡಿರುವುದು ತುಂಬಾ ಶ್ಲಾಘನೀಯವಾದ ವಿಚಾರ, ಸಂಘ ಸಂಸ್ಥೆಗಳೊಂದಿಗೆ ಸ್ವಚ್ಛತೆ ಮಾಡುವ ಮೂಲಕ ಸಾರ್ವಜನಿಕರಿಗೆ ಜಾಗೃತಿ ಮೂಡಿಸಿದಂತಾಗಿದೆ, ಭಾಗವಹಿಸಿದ ಎಲ್ಲರಿಗೂ ಕೃತಜ್ಞತೆ ಸಲ್ಲಿಸಿದರು. ಪಂಚಾಯತ್ ಅಭಿವೃದ್ಧಿ ಅಧಿಕಾರಿ ಗಾಯತ್ರಿ ಸ್ವಾಗತಿಸಿ ಮಾತನಾಡಿ ಸ್ವಚ್ಛತೆಯಲ್ಲಿ ಸರಕಾರ ಕೈಗೊಳ್ಳುತ್ತಿರುವ ಕಾರ್ಯಕ್ರಮಗಳು, ಮುಂಜಾಗ್ರತಾ ಕ್ರಮಗಳ ಬಗ್ಗೆ ತಿಳಿಸಿದರು. ಅನೇಕ ದೇಶ ವಿದೇಶಗಳಿಂದ ಲಕ್ಷಾಂತರ ಭಕ್ತಾದಿಗಳ ಬರುವಂತಹ ಪ್ರದೇಶವಾಗಿದ್ದು ಸ್ವಚ್ಛತೆಯನ್ನು ಮಾಡುವುದು, ಹಾಗೂ ಸ್ವಚ್ಛತೆಯ ನಿರಂತರತೆಯ ಸುಸ್ಥಿರತೆಯನ್ನು ಕಾಪಾಡುವುದು ಸಾರ್ವಜನಿಕರಾದ ನಮ್ಮೆಲ್ಲರ ಜವಾಬ್ದಾರಿಯಾಗಿದೆ, ಎಲ್ಲಾ ಸಾರ್ವಜನಿಕರು ಸಹಕರಿಸುವಂತೆ ತಿಳಿಸಲಾಯಿತು.

ಬೆಳ್ತಂಗಡಿ ರೋಟರಿ ಕ್ಲಬ್ ಅಧ್ಯಕ್ಷ ರೋ. ಶ್ರೀಧರ ರವರು ಮಾತನಾಡಿ ಇಂತಹ ಕಾರ್ಯಕ್ರಮಗಳಿಂದ ಜನಜಾಗೃತಿಯನ್ನು ಮೂಡಿಸಿ, ನಿರಂತರವಾಗಿ ಸಾರ್ವಜನಿಕ ಸ್ಥಳದಲ್ಲಿ ಸ್ವಚ್ಛತೆಯನ್ನು ಕಾಪಾಡಬಹುದು, ನಮ್ಮ ಸಂಸ್ಥೆಯಿಂದ ಸಂಪೂರ್ಣ ಸಹಕಾರ ನೀಡುವುದಾಗಿ ತಿಳಿಸಿದರು. ಬೆಳ್ತಂಗಡಿ ತಾಲೂಕು ಪಂಚಾಯತ್ ವ್ಯವಸ್ಥಾಪಕಿ ನಿಶಾ ಹಾಗೂ ಶ್ರೀ ಕ್ಷೇತ್ರ ಧರ್ಮಸ್ಥಳ ವ್ಯವಸ್ಥಾಪಕ ಪಾರ್ಶ್ವನಾಥ ಜೈನ್ ಇವರು ಸಾಂಕೇತಿಕವಾಗಿ ಕಸಗುಡಿಸುವ ಮೂಲಕ ಸ್ವಚ್ಛ ನೇತ್ರಾವತಿಗೆ ಚಾಲನೆ ನೀಡಿದರು. ಅಭಿಯಾನದ ಪ್ರಮುಖ ಉದ್ದೇಶ ಹಾಗೂ ಚಟುವಟಿಕೆಗಳು ನದಿಯ ಸಂರಕ್ಷಣೆ ಪವಿತ್ರ ನೇತ್ರಾವತಿ ನದಿಯ ಸ್ನಾನಘಟ್ಟ ಹಾಗೂ ನದಿ ಕಿನಾರೆಯನ್ನು ಕಸಮುಕ್ತ ಹಾಗೂ ಪ್ಲಾಸ್ಟಿಕ್ ಮುಕ್ತ ಮಾಡುವುದು ಈ ಅಭಿಯಾನದ ಮುಖ್ಯ ಉದ್ದೇಶವಾಗಿತ್ತು.
ಸಾರ್ವಜನಿಕ ಜಾಗೃತಿ “ಸ್ವಚ್ಛ ಮೇವ ಜಯತೇ” ಹಾಗೂ “ಸ್ವಚ್ಛ ಭಾರತ – ಒಂದು ಹೆಜ್ಜೆ ಸ್ವಚ್ಛತೆಯ ಕಡೆಗೆ” ಎಂಬ ಧ್ಯೇಯವಾಕ್ಯದೊಂದಿಗೆ ಸಾರ್ವಜನಿಕರಲ್ಲಿ ನದಿ ಮೂಲಗಳ ಸ್ವಚ್ಛತೆ ಬಗ್ಗೆ ಜಾಗೃತಿ ಮೂಡಿಸಲಾಯಿತು.
ನೂರಾರು ಸ್ವಯಂಸೇವಕರು, ಸಂಘ-ಸಂಸ್ಥೆಗಳ ಪದಾಧಿಕಾರಿಗಳು ಮತ್ತು ಸ್ಥಳೀಯರು ಸಕ್ರಿಯವಾಗಿ ಪಾಲ್ಗೊಂಡು ನದಿ ದಂಡೆಯಲ್ಲಿದ್ದ ಪ್ಲಾಸ್ಟಿಕ್, ತ್ಯಾಜ್ಯಗಳನ್ನು ಸಂಗ್ರಹಿಸಿ ಯೋಗ್ಯ ವಿಲೇವಾರಿಗೆ ಕ್ರಮ ಕೈಗೊಂಡರು.
ಧರ್ಮಸ್ಥಳಕ್ಕೆ ಬರುವ ಭಕ್ತಾದಿಗಳಿಗೆ ಮತ್ತು ಸ್ಥಳೀಯರಿಗೆ ಪರಿಸರ ಪ್ರಜ್ಞೆ ಮೂಡಿಸುವಲ್ಲಿ ಹಾಗೂ ನೇತ್ರಾವತಿ ನದಿಯ ಪಾವಿತ್ರ್ಯತೆಯನ್ನು ಕಾಯ್ದುಕೊಳ್ಳುವಲ್ಲಿ ಈ “ಸ್ವಚ್ಛ ನೇತ್ರಾವತಿ” ಬೃಹತ್ ಅಭಿಯಾನವು ಅತ್ಯಂತ ಯಶಸ್ವಿಯಾಗಿ ನಡೆಸಲಾಯಿತು.
ಈ ಸಂದರ್ಭದಲ್ಲಿ ತಾಲೂಕು ಪಂಚಾಯತ್ ವಿಷಯ ನಿರ್ವಾಹಕರಾದ ಮಂಜು, ಪ್ರಿಯಾ ಹೆಗ್ಡೆ, ಕು. ಸುಕನ್ಯಾ, ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷೆ ವಿಮಲಾ, ಶೌರ್ಯ ವಿಪತ್ತು ನಿರ್ವಹಣಾ ತಂಡದ ಯೋಜನಾಧಿಕಾರಿ ಜೈವಂತ್, ಧರ್ಮಸ್ಥಳ ಗ್ರಾಮ ಪಂಚಾಯಿತಿ ಕಾರ್ಯದರ್ಶಿ ಪ್ರಮೀಳಾ, ಮಾಹಿತಿ ಕಚೇರಿ ವ್ಯವಸ್ಥಾಪಕ ನಿತಿನ್, ಸಂಜೀವಿನಿ ಮಹಿಳಾ ಒಕ್ಕೂಟದ ಸದಸ್ಯರು, ಅಂಗನವಾಡಿ ಕಾರ್ಯಕರ್ತೆಯರು , ಆಶಾ ಕಾರ್ಯಕರ್ತೆಯರು, ಗ್ರಾಮ ಪಂಚಾಯಿತಿ ಸಿಬ್ಬಂದಿ ವರ್ಗ, ವಾಹನ ಚಾಲಕ ಮಾಲಕರು, ಗ್ರಾಮ ಪಂಚಾಯತಿ ಸ್ವಚ್ಛತಾ ಸಿಬ್ಬಂದಿಗಳು, ಕನ್ಯಾಕುಮಾರಿ ಯುವತಿ ಮಂಡಲದ ಸದಸ್ಯರು, ಶ್ರೀ ಶಕ್ತಿ ಹಾಗೂ ಸ್ವಸಹಾಯ ಸಂಘದ ಸದಸ್ಯರುಗಳು, ಧರ್ಮಸ್ಥಳ ಹಾಗೂ ಉಜಿರೆಯ ಶೌರ್ಯ ವಿಪತ್ತು ನಿರ್ವಹಣೆ ತಂಡದ ಸದಸ್ಯರುಗಳು, ಗ್ರಾಮಸ್ಥರು, ಶ್ರೀ ಕ್ಷೇತ್ರ ಧರ್ಮಸ್ಥಳ ಸಿಬ್ಬಂದಿ ವರ್ಗ, ವ್ಯಾಪಾರಸ್ಥರು, ಗ್ರಾಮಸ್ಥರು ಉಪಸ್ಥಿತರಿದ್ದರು. ದೇವಿಪ್ರಸಾದ್ ಬೊಲ್ಮ ಕಾರ್ಯಕ್ರಮ ನಿರ್ವಹಿಸಿದರು. ಕಾರ್ಯದರ್ಶಿ ಪ್ರಮೀಳಾ ಧನ್ಯವಾದ ನೀಡಿದರು.












