ಉಜಿರೆ: ಶ್ರೀ ಧರ್ಮಸ್ಠಳ ಮಂಜುನಾಥೇಶ್ವರ ಬಿ.ಎಡ್. ಹಾಗೂ ಡಿ.ಎಡ್. ಕಾಲೇಜಿನಲ್ಲಿ ಸಾಂಕ್ರಮಿಕ ರೋಗಗಳ ಜಾಗೃತಿ ಕಾರ್ಯಕ್ರಮ ಜೂ.24 ರಂದು ನಡೆಯಿತು.
ಕಾರ್ಯಕ್ರಮದ ಸಂಪನ್ಮೂಲ ವ್ಯಕ್ತಿಯಾಗಿ ಆಗಮಿಸಿದ ಬೆಳ್ತಂಗಡಿ ಕ್ಷೇತ್ರ ಆರೋಗ್ಯ ಶಿಕ್ಷಣ ಅಧಿಕಾರಿ ಶ್ರೀಮತಿ ಪುಷ್ಪ ಮಾತನಾಡುತ್ತಾ ಸಾಂಕ್ರಮಿಕ ರೋಗಗಳು ಒಬ್ಬ ವ್ಯಕ್ತಿಯಿಂದ ಮತ್ತೊಬ್ಬರಿಗೆ ಹರಡುವ ರೋಗಗಳಾಗಿವೆ. ಡೆಂಗ್ಯೂ, ಮಲೇರಿಯಾ, ಚಿಕನ್ಪಾಕ್ಸ್ ಇನ್ನಿತರ ಸಾಂಕ್ರಮಿಕ ರೋಗಗಳು ಮನುಷ್ಯನ ಆರೋಗ್ಯವನ್ನು ಕುಂಠಿತ ಮಾಡುತ್ತವೆ. ಹಾಗಾಗಿ ಈ ರೋಗ ಬರದ ಹಾಗೆ ಮುನ್ನೆಚ್ಚರಿಕೆ ಕ್ರಮವನ್ನು ತೆಗೆದುಕೊಳ್ಳಬೇಕು ಎಂದು ಹೇಳಿದರು.

ಇನ್ನೋರ್ವ ಸಂಪನ್ಮೂಲ ವ್ಯಕ್ತಿಯಾದ ಬೆಳ್ತಂಗಡಿಯ ಆರೋಗ್ಯ ನಿರೀಕ್ಷಣಾ ಅಧಿಕಾರಿ ರಕ್ಷಿತ್ ಮಾತನಾಡುತ್ತಾ ಸಾಂಕ್ರಮಿಕ ರೋಗಗಳು ಮನುಷ್ಯನ ಅಸ್ತಿತ್ವವನ್ನೇ ನಾಶ ಮಾಡಿಬಿಡುತ್ತವೆ. ಆದುದರಿಂದ ವೈಯಕ್ತಿಕ ಮತ್ತು ಸಾರ್ವಜನಿಕ ಸ್ವಚ್ಛತೆ ಮುಖ್ಯ. ಸೊಳ್ಳೆಗಳ ಬೆಳವಣಿಗೆಯನ್ನು ತಡೆಯುವುದರೊಂದಿಗೆ ಸುತ್ತಲಿನ ಪರಿಸರವನ್ನು ಸ್ವಚ್ಛವಾಗಿಡಬೇಕು. ಅನಾರೋಗ್ಯ ಕಂಡು ಬಂದ ತಕ್ಷಣ ವೈದ್ಯರನ್ನು ಸಂಪರ್ಕಿಸಿ ಸೂಕ್ತವಾದ ಚಿಕಿತ್ಸೆಯನ್ನು ಪಡೆದುಕೊಳ್ಳಿ. ನಮ್ಮ ಸರ್ಕಾರಿ ಆಸ್ಪತ್ರೆಗಳಲ್ಲಿ ಸಾಂಕ್ರಮಿಕ ರೋಗಕ್ಕೆ ಪೂರಕವಾದ ಔಷಧಿಗಳಿವೆ ಅದರ ಸದುಪಯೋಗ ಪಡೆದು ತಮ್ಮ ಆರೋಗ್ಯವನ್ನು ಕಾಪಾಡಿಕೊಳ್ಳಿ ಎಂದು ಹೇಳುತ್ತಾ ಪ್ರಾಯೋಗಿಕವಾಗಿ ಗಪ್ಪಿ ಮೀನು, ಕೀಟ ಜೀವನದ ಚಕ್ರವನ್ನು ಪ್ರದರ್ಶಿಸಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕಾಲೇಜಿನ ಪ್ರಾಂಶುಪಾಲ ಡಾ. ಸಂತೋಷ್ ಆಲ್ಬರ್ಟ್ ಸಲ್ಡಾನ ವಹಿಸಿ ಸಾಂಕ್ರಮಿಕ ರೋಗಗಳು ಬ್ಯಾಕ್ಟೀರಿಯಾ ವೈರಸ್ಗಳಿಂದ ಉಂಟಾಗುತ್ತದೆ. ಈ ಸೂಕ್ಷ್ಮೂಜೀವಿಗಳು ನಮ್ಮ ದೇಹವನ್ನು ಪ್ರವೇಶಿಸಿ ರೋಗವನ್ನು ಉಲ್ಬಣಗೊಳಿಸುತ್ತವೆ. ಹಾಗಾಗಿ ಸುತ್ತಮುತ್ತಲಿನ ಪರಿಸರವನ್ನು ಸ್ವಚ್ಛವಾಗಿಡುವುದು, ಸಂಜೆಯ ವೇಳೆ ಕಿಟಕಿ ಬಾಗಿಲುಗಳನ್ನು ಮುಚ್ಚಿ ಮೈತುಂಬಾ ಬಟ್ಟೆಯನ್ನು ಧರಿಸಬೇಕು. ಮಲಗುವಾಗ ಸೊಳ್ಳೆ ಪರದೆಗಳನ್ನು ಬಳಸಿ ಸೊಳ್ಳೆಗಳಿಂದ ರಕ್ಷಣೆ ಮಾಡಿಕೊಳ್ಳಬೇಕೆಂದು ಹೇಳಿದರು.
ಕಾರ್ಯಕ್ರಮದ ವೇದಿಕೆಯಲ್ಲಿ ಬೆಳ್ತಂಗಡಿಯ ಹಿರಿಯ ಆರೋಗ್ಯ ನಿರೀಕ್ಷಣಾ ಅಧಿಕಾರಿ ಸೋಮನಾಥ್ ಹಾಗೂ ಬಿ.ಎಡ್. ಕಾಲೇಜಿನ ವಿದ್ಯಾರ್ಥಿ ನಾಯಕಿ ಶ್ರವಣ ಮಹಾಪುರುಷರವರು ಉಪಸ್ಥಿತರಿದ್ದರು.
ಕಾರ್ಯಕ್ರಮದಲ್ಲಿ ಕಾಲೇಜಿನ ಎಲ್ಲಾ ಸಹಪ್ರಾಧ್ಯಾಪಕರು, ಸಿಬ್ಬಂದಿ ವರ್ಗದವರು ಮತ್ತು ಬಿ.ಎಡ್. ಮತ್ತು ಡಿ.ಎಡ್. ಪ್ರಶಿಕ್ಷಣಾರ್ಥಿಗಳು ಭಾಗವಶಿಸಿದ್ದರು.
ದ್ವಿತೀಯ ಬಿ.ಇಡಿ. ಪ್ರಶಿಕ್ಷಣಾರ್ಥಿ ಸಾಯಿಧೃತಿ ಮತ್ತು ಬಳಗದವರು ಪ್ರಾರ್ಥಿಸಿ, ಪ್ರಿಯಾ ರಾಮಪ್ಪ ಸ್ವಾಗತಿಸಿ, ಪಲ್ಲವಿ ವಂದಿಸಿ, ಪ್ರಶ್ವಿತ್ ಕಾರ್ಯಕ್ರಮವನ್ನು ನಿರೂಪಿಸಿದರು.












