ಬೆಳ್ತಂಗಡಿ: ಜೆಇಇ ಹಾಗೂ ನೀಟ್ ಎಂಬುದು ಕೇವಲ ಒಂದು ಪ್ರವೇಶ ಪರೀಕ್ಷೆಯಲ್ಲ. ಅದು ಶಿಸ್ತು, ಪರಿಶ್ರಮ, ಸಮಯ ನಿರ್ವಹಣೆ ಹಾಗೂ ನಿರಂತರ ಅಭ್ಯಾಸದ ಪಯಣವಾಗಿದೆ. ಈ ಪಯಣದಲ್ಲಿ ಸೂಕ್ತ ಮಾರ್ಗದರ್ಶನ ಅತ್ಯಂತ ಮುಖ್ಯ ಎಂದು ಗುರುವಾಯನಕೆರೆ ವಿದ್ವತ್ ಪಿಯು ಕಾಲೇಜಿನ ಶೈಕ್ಷಣಿಕ ನಿರ್ದೇಶಕರಾದ ಗಂಗಾಧರ್ ಈ.ಎಂ. ಹೇಳಿದರು.
ಗುರುವಾಯನಕೆರೆ ವಿದ್ವತ್ ಪಿಯು ಕಾಲೇಜಿನಲ್ಲಿ ದ್ವಿತೀಯ ಪಿಯುಸಿ ವಿದ್ಯಾರ್ಥಿಗಳು ಹಾಗೂ ಪೋಷಕರಿಗಾಗಿ ಜೂ.27 ಮತ್ತು 28 ರಂದು ಹಮ್ಮಿಕೊಂಡ ಮಾಹಿತಿ ಕಾರ್ಯಾಗಾರ ಉದ್ಘಾಟಿಸಿ ಮಾತನಾಡಿದರು.
ಓದಿನಲ್ಲಿ ಗಾಂಭೀರ್ಯತೆ ಇದ್ದ ವಿದ್ಯಾರ್ಥಿಗಳಿಗಷ್ಟೆ ಸಾಧನೆಯ ಹಸಿವಿರುತ್ತದೆ. ಇಂತವರಿಗೆ ವಿದ್ವತ್ ಕಾಲೇಜು ಸೂಕ್ತ ವೇದಿಕೆಯಾಗಿದೆ. ಚಿಂತೆ ಮತ್ತು ಒತ್ತಡ ಮನುಷ್ಯನನ್ನು ಒಳಗೊಳಗೆ ಸುಡುತ್ತದೆ. ಚಿಂತೆ ಮನಸ್ಸಿನ ಅಂತರಾಳದಲ್ಲಿ ಸುಟ್ಟರೆ, ಒತ್ತಡ ಶಾರೀರಿಕವಾಗಿ ದಹಿಸುತ್ತದೆ. ಇವರೆಡಕ್ಕೂ ಆಸ್ಪದ ನೀಡದೆ ಕಠಿಣ ಪರಿಶ್ರಮ ನಡೆಸಿ, ಸೂಕ್ತ ಮಾರ್ಗದರ್ಶನ ಪಡೆದು ಅಭ್ಯಾಸ ನಡೆಸಿದಲ್ಲಿ ನಿಮ್ಮ ಗುರಿ ತಲುಪಬಹುದಾಗಿದೆ ಎಂದು ಸಲಹೆ ನೀಡಿದರು.

ಕಾರ್ಯಾಗಾರದ ಅಧ್ಯಕ್ಷತೆ ವಹಿಸಿದ್ದ ಕಾಲೇಜಿನ ಅಧ್ಯಕ್ಷರಾದ ಸುಭಾಶ್ಚಂದ್ರ ಶೆಟ್ಟಿ ಮಾತನಾಡಿ, ದ.ಕ. ಜಿಲ್ಲೆಯಲ್ಲಿ ಇಷ್ಟು ಪ್ರತಿಷ್ಠಿತ ಕಾಲೇಜು ಇದ್ದರೂ, ತನ್ನ ಶಿಕ್ಷಣ ಗುಣಮಟ್ಟದ ಮೂಲಕ ವಿದ್ವತ್ ಪಿಯು ಕಾಲೇಜು ಎಲ್ಲೆಡೆ ಮನೆ ಮಾತಾಗಿದೆ. ದೇಶದಲ್ಲಿ ಈ ಬಾರಿ ಒಟ್ಟು 18 ಲಕ್ಷದಷ್ಟು ಮಂದಿ ಜೆಇಇ ಪರೀಕ್ಷೆ ಬರೆದಿದ್ದಾರೆ. ಈ ಪೈಕಿ ಕೇವಲ 19 ಸಾವಿರ ಮಂದಿಗಷ್ಟೆ ಅರ್ಹತೆ ದೊರೆಯುತ್ತದೆ. ದೇಶದಲ್ಲಿ 31 ಎನ್.ಐ.ಟಿ. ಕಾಲೇಜು ಹಾಗೂ 23 ಐಐಟಿ ಕಾಲೇಜುಗಳಿವೆ. ಅಂದರೆ ಒಟ್ಟಾರೆಯಾಗಿ ಪರೀಕ್ಷೆ ಬರೆದ 5% ಮಂದಿಗಷ್ಟೆ ಸೀಟ್ ಖಾತರಿಯಾಗುತ್ತದೆ. ಹಾಗಾಗಿ ಪಿಯುಸಿಯಲ್ಲಿ ಎರಡು ವರ್ಷ ನಿಮ್ಮ ಎಲ್ಲಾ ಆಸೆ ಆಕಾಂಕ್ಷೆಗಳನ್ನು ಬದಿಗಿರಿಸಿ ಕಠಿಣ ಪರಿಶ್ರಮ ನಡೆಸಿದರೆ ಜೀವನದುದ್ದಕ್ಕೂ ಸಂತೋಷವಾಗಿರಬಹುದು. ನಿಮ್ಮ ಮಕ್ಕಳ ಸಾಧನೆ ನಮ್ಮ ಕಾಲೇಜಿನ ಸಾಧನೆಯೂ ಆಗಿದೆ ಎಂದು ವಿದ್ಯಾರ್ಥಿಗಳಿಗೆ ಹಾಗೂ ಪೋಷಕರಿಗೆ ಸಲಹೆ ನೀಡಿದರು.
ಈ ವೇಳೆ ಕಾಲೇಜಿನ ಕಾರ್ಯದರ್ಶಿ ಪ್ರಜ್ವಲ್ ರೈ, ಆಡಳಿತಾಧಿಕಾರಿ ಅಶೋಕ್ ಶೆಟ್ಟಿ, ಪ್ರಾಂಶುಪಾಲರಾದ ಬಾಲಕೃಷ್ಣ ನಾಯ್ಕ್, ರಸಾಯನಶಾಸ್ತ್ರ ವಿಭಾಗದ ಮುಖ್ಯಸ್ಥ ಪ್ರತಾಪ್ ಡಿ.ಎಂ., ಗಣಕಶಾಸ್ತ್ರ ವಿಭಾಗ ಮುಖ್ಯಸ್ಥ ರಂಘನಾಥ್ ಉಪಸ್ಥಿತರಿದ್ದರು.
ಎರಡು ದಿನದ ಕಾರ್ಯಾಗಾರದಲ್ಲಿ ದ್ವಿತೀಯ ಪಿಯುಸಿ ಜೆಇಇ ಹಾಗೂ ನೀಟ್ ವಿಭಾಗದ ವಿದ್ಯಾರ್ಥಿಗಳ ಶೈಕ್ಷಣಿಕ ಅಧ್ಯಯನದ ವರದಿಯನ್ನು ಪೋಷಕರಿಗೆ, ಕಾಲೇಜಿನ ವಿಭಾಗ ಮುಖ್ಯಸ್ಥರು ಹಾಗೂ ಉಪನ್ಯಾಸಕರ ಸಮ್ಮುಖದಲ್ಲಿ ಸಮಾಲೋಚನೆ ನಡೆಸಿ ವರದಿ ನೀಡಲಾಯಿತು.
ಕನ್ನಡ ವಿಭಾಗ ಮುಖ್ಯಸ್ಥರಾದ ನೀಲಕಂಠ ಕಾರ್ಯಕ್ರಮ ನಿರೂಪಿಸಿದರು.













