ಕಕ್ಯಪದವು : ಪಾದೆಗುತ್ತು ಲಿಂಗಪ್ಪ ಮಾಸ್ಟರ್ ಮೆಮೋರಿಯಲ್ ಎಜುಕೇಶನ್ ಟ್ರಸ್ಟ್ ನಿಂದ ನಡೆಸಲ್ಪಡುವ ಎಲ್. ಸಿ.ಆರ್. ಇಂಡಿಯನ್ ವಿದ್ಯಾ ಸಂಸ್ಥೆಯ ಪ್ರಾಥಮಿಕ ಹಾಗೂ ಪ್ರೌಢ ವಿಭಾಗದ ವಿದ್ಯಾರ್ಥಿನಿಯರ ಸುರಕ್ಷತೆಯ ನಿಟ್ಟಿನಲ್ಲಿ ಶಾಲಾ ಮಟ್ಟದ ಮಹಿಳಾ ಸಂಘ ರಚನೆ ಮತ್ತು ಮಹಿಳಾ ಸುರಕ್ಷತೆ ಕುರಿತ ಜಾಗೃತಿ ಕಾರ್ಯಕ್ರಮವನ್ನು ಜೂ.27ರಂದು ಶಾಲಾ ಆವರಣದಲ್ಲಿ ಹಮ್ಮಿಕೊಳ್ಳಲಾಯಿತು.
ಶಾಲಾ ವಿದ್ಯಾರ್ಥಿನಿಯರಲ್ಲಿ ಆತ್ಮವಿಶ್ವಾಸ, ನಾಯಕತ್ವದ ಗುಣ, ಸಾಮಾಜಿಕ ಜವಾಬ್ದಾರಿ ಹಾಗೂ ಮಹಿಳಾ ಸಬಲೀಕರಣದ ಬಗ್ಗೆ ಅರಿವು ಮೂಡಿಸುವ ಉದ್ದೇಶದಿಂದ ಮಹಿಳಾ ಶಕ್ತಿ ಸಂಘವನ್ನು ರಚಿಸಲಾಯಿತು. ಮುಖ್ಯ ಶಿಕ್ಷಕರು ಹಾಗೂ ಶಿಕ್ಷಕ ವೃಂದದ ಸಮ್ಮುಖದಲ್ಲಿ ಸಂಘದ ಸದಸ್ಯರನ್ನು ಆಯ್ಕೆ ಮಾಡಿ, ಶಾಲಾ ಮಹಿಳಾ ನಾಯಕಿ ಮತ್ತು ತರಗತಿವಾರು ಮಹಿಳಾ ನಾಯಕಿಯನ್ನು ನೇಮಕ ಮಾಡಲಾಯಿತು. ಈ ಆಯ್ಕೆ ಪ್ರಕ್ರಿಯೆಯು ಎಲ್ಲಾ ಮಹಿಳಾ ವಿದ್ಯಾರ್ಥಿನಿಯರ ಮತದಾನದ ಮುಲಕ ಆಯ್ಕೆ ಮಾಡಲಾಯಿತು. ಮಹಿಳಾ ನಾಯಕಿಯಾಗಿ ಸಾತ್ವಿಕ ಕೆ ಆಯ್ಕೆಯಾದರು. ಮುಖ್ಯಶಿಕ್ಷಕಿ ವಿಜಯ ಕೆ ವಿದ್ಯಾರ್ಥಿನಿಯರಿಗೆ ಕಿರೀಟ ಇಡುವುದರ ಮುಲಕ ಅಭಿನಂದಿಸಿದರು.
ಸಹಶಿಕ್ಷಕಿ ಸಂಗೀತಾ ಹೆಚ್. ಮಹಿಳೆಯರ ಶಿಕ್ಷಣ, ಸ್ವಾವಲಂಬನೆ, ಸಮಾನತೆ ಮತ್ತು ನಾಯಕತ್ವದ ಮಹತ್ವದ ಕುರಿತು ವಿದ್ಯಾರ್ಥಿನಿಯರಿಗೆ ಪ್ರೇರಣಾದಾಯಕ ಸಂದೇಶ ನೀಡಿದರು. ಸಂಘದ ಮೂಲಕ ಶಾಲೆಯಲ್ಲಿ ವಿವಿಧ ಜಾಗೃತಿ ಕಾರ್ಯಕ್ರಮಗಳು, ಸ್ವಚ್ಛತಾ ಅಭಿಯಾನಗಳು, ಆರೋಗ್ಯ ಅರಿವು ಮತ್ತು ನಾಯಕತ್ವ ಚಟುವಟಿಕೆಗಳನ್ನು ನಡೆಸುವ ಕುರಿತು ತಿಳಿಸಲಾಯಿತು. ವಿದ್ಯಾರ್ಥಿನಿಯರು ಸಂಘದ ಚಟುವಟಿಕೆಗಳಲ್ಲಿ ಸಕ್ರೀಯವಾಗಿ ಭಾಗವಹಿಸುವ ಪ್ರತಿಜ್ಞೆ ಕೈಗೊಂಡರು.
ದೈಹಿಕ ಶಿಕ್ಷಕಿ ಹರಿಣಾಕ್ಷಿ ಆರೋಗ್ಯ ಮತ್ತು ಸ್ವಚ್ಛತಾ ಜಾಗೃತಿ ಹಾಗೂ ವಿದ್ಯಾರ್ಥಿನಿಯರ ದೈಹಿಕ ಮತ್ತು ಮಾನಸಿಕ ಆರೋಗ್ಯದ ಕಡೆ ಗಮನಹರಿಸಿ, ಋತುಚಕ್ರದ ನೈರ್ಮಲ್ಯ ಮತ್ತು ಆರೋಗ್ಯಕರ ಜೀವನಶೈಲಿಯ ಕುರಿತು ಮಾರ್ಗದರ್ಶನ ನೀಡಿದರು.
ಕಾರ್ಯಕ್ರಮದಲ್ಲಿ ಭಾಗವಹಿಸಿದ ಎಲ್ಲರೂ ಮಹಿಳಾ ಸುರಕ್ಷತೆ ಮತ್ತು ಗೌರವವನ್ನು ಕಾಪಾಡುವ ಸಂಕಲ್ಪ ಮಾಡಿದರು. ಸಹಶಿಕ್ಷಕಿ ಸಂಗೀತಾ ಹೆಚ್. ಸ್ವಾಗತಿಸಿ, ವಂದಿಸಿ ಕಾರ್ಯಕ್ರಮ ನಿರೂಪಿಸಿದರು. ಭೋದಕ ಭೋದಕೇತರ ಸಿಬ್ಬಂದಿಗಳು ಉಪಸ್ಥಿತರಿದ್ದರು.













