ಬೆಳ್ತಂಗಡಿ: ಧರ್ಮಸ್ಥಳ ಗ್ರಾಮದ ನೇತ್ರಾವತಿ ಸ್ನಾನಘಟ್ಟದಿಂದ ಅಜಿಕುರಿ ಹೋಗುವ ರಸ್ತೆ ಸಂಪೂರ್ಣವಾಗಿ ಹದಗೆಟ್ಟು ಹೋಗಿದ್ದು ವಾಹನಗಳ ಹಾಗೂ ಜನರ ಸಂಚಾರ ಅಸಾಧ್ಯವಾಗಿದೆ. ರಸ್ತೆಯಲ್ಲಿ ದೊಡ್ಡ ಹೊಂಡಗಳೇ ಬಿದ್ದಿದ್ದು ಕನಿಷ್ಟ ದುರಸ್ತಿಗೂ ಮುಂದಾಗದ ಹಿನ್ನಲೆಯಲ್ಲಿ ಸ್ಥಳೀಯ ನಿವಾಸಿಗಳು ರಿಕ್ಷಾ ಚಾಲಕರು ಸೇರಿ ರಸ್ತೆ ತಡೆ ನಡೆಸಿ ಪ್ರತಿಭಟನೆ ನಡೆಸುತಿದ್ದಾರೆ. ರಸ್ತೆ ಸರಿಪಡಿಸದಿದ್ದಲ್ಲಿ ಚುನಾವಣಾ ಬಹಿಷ್ಕಾರದ ಎಚ್ಚರಿಕೆಯನ್ನು ನೀಡಿದ್ದಾರೆ.
ನೇತ್ರಾವತಿ ಸ್ನಾನಘಟ್ಟದಿಂದ ಅಜಿಕುರಿ ಮಾರ್ಗವಾಗಿ ದಿಡುಪೆ- ಪೈಚಾರು ರಾಜ್ಯಹೆದ್ದಾರಿಗೆ ಸಂಪರ್ಕ ಕಲ್ಪಿಸುವ ಈ ರಸ್ತೆ
ಕಳೆದ 5 ವರ್ಷಗಳಿಂದ ಸಂಪೂರ್ಣ ಹದಗೆಟ್ಟ ರೀತಿಯಲ್ಲಿದ್ದು ವರ್ಷದ ಹಿಂದೆಯೂ ಸ್ಥಳೀಯರು ಪ್ರತಿಭಟನೆ ನಡೆಸಿದ್ದರು. ಆಗ ಸ್ಥಳೀಯ ಜನಪ್ರತಿನಿಧಿಗಳು ದುರಸ್ತಿ ಮಾಡುವ ಭರವಸೆ ನೀಡಿದ್ದರೂ ಯಾವುದೂ ಈಡೇರಿಲ್ಲ. ರಸ್ತೆಯನ್ನು ದುರಸ್ತಿಮಾಡುವಂತೆ ಸಲ್ಲಿಸಿದ ಮನವಿಗಳು ಯಾವುದೇ ಪ್ರಯೋಜನ ನೀಡಿಲ್ಲ. ಪ್ರತಿನಿತ್ಯ ನೂರಾರು ಮಂದಿ ವಿದ್ಯಾರ್ಥಿಗಳು ಸಾರ್ವಜನಿಕರು ನಡೆದುಕೊಂಡು, ವಾಹನಗಳು ಓಡಾಟ ನಡೆಸುವ ರಸ್ತೆ ಇದಾಗಿದೆ. ನಡೆದುಕೊಂಡು ಹೋಗುವವರು ರಸ್ತೆಯಲ್ಲಿ ಸೃಷ್ಟಿಯಾಗಿರುವ ಹೊಂಡಗಳಿಂದಾಗಿ ಓಡಾಡಲು ಅಸಾದ್ಯವಾಗಿದೆ. ಇಲ್ಲಿ ರಸ್ತೆಯ ಹೊಂಡಗಳಿಗೆ ಬಿದ್ದು ವಾಹನ ಅಪಘಾತಗಳೂ ಸಂಭವಿಸುತ್ತಿದೆ. ಇದೀಗ ಸ್ಥಳೀಯರು ಕನಿಷ್ಠ ಓಡಾಟಕ್ಕೆ ಅನುಕೂಲವಾಗುವ ರೀತಿಯಲ್ಲಾದರೂ ರಸ್ತೆಯನ್ನು ದುರಸ್ತಿಮಾಡಿಕೊಡುವಂತೆ ಆಗ್ರಹಿಸಿ ಪ್ರತಿಭಟನೆ ನಡೆಸುತಿದ್ದು ದುರಸ್ತಿಯ ಭರವಸೆ ನೀಡದೇ ಹೋದಲ್ಲಿ ಮುಂದೆ ಚುನಾವಣಾ ಬಹಿಷ್ಕಾರ ನಡೆಸುವ ಎಚ್ಚರಿಕೆಯನ್ನು ನೀಡಿದ್ದಾರೆ.














