ಗುರುವಾಯನಕೆರೆ: ಕಳೆದ ವರ್ಷ ವಿಜಯವಾಣಿ ದಿನಪತ್ರಿಕೆಯು ಎಕ್ಸೆಲ್ ಸಮೂಹ ಸಂಸ್ಥೆಗಳ ಸಂಸ್ಥಾಪಕರಾದ ಸುಮಂತ್ ಕುಮಾರ್ ಜೈನ್ ಅವರಿಗೆ ವಿಜಯ ರತ್ನ ಪ್ರಶಸ್ತಿಯನ್ನು ನೀಡಿ ಗೌರವಿಸಿದ ನೆನಪುಗಳು ಇನ್ನು ಹಸಿರಾಗಿರುವಾಗಲೇ ಮತ್ತೊಂದು ಪ್ರಶಸ್ತಿಯ ಗರಿ ಮೂಡಿರುವುದು ಎಲ್ಲೆಡೆ ಸಂತಸಕ್ಕೆ ಕಾರಣವಾಗಿದೆ.
ಮಂಗಳೂರಿನ ವಿದ್ಯಾರ್ಥಿ ಸೋಶಿಯಲ್ ಎಜುಕೇಶನ್ ಸೊಸೈಟಿಯು ಸುಮಂತ್ ಕುಮಾರ್ ಜೈನ್ ಇವರ ಶೈಕ್ಷಣಿಕ ಸಾಧನೆಯನ್ನು ಗುರುತಿಸಿ 2026 ನೇ ಸಾಲಿನ ವಿದ್ಯಾ ಸಿರಿ ಪ್ರಶಸ್ತಿಯನ್ನು ನೀಡಿ ಗೌರವಿಸಿತು.
ವಿದ್ಯಾರ್ಥಿ ಸೋಶಿಯಲ್ ಎಜುಕೇಶನ್ ಸೊಸೈಟಿಯ ಅಧ್ಯಕ್ಷ ಶ್ರೀನಿವಾಸರವರು ಎಕ್ಸೆಲ್ ಸಂಸ್ಥೆಗೆ ಬಂದು ಸುಮಂತ್ ಕುಮಾರ್ ಜೈನ್ ಅವರಿಗೆ ಪ್ರಶಸ್ತಿಯನ್ನು ಪ್ರಧಾನ ಮಾಡಿದರು.
“ಕರ್ನಾಟಕದಲ್ಲಿ ಕೇವಲ ಇಬ್ಬರು ವ್ಯಕ್ತಿಗಳಿಗೆ ಈ ಪ್ರಶಸ್ತಿಯನ್ನು ನೀಡಿ ಗೌರವಿಸಲಾಗಿದ್ದು ಅದರಲ್ಲಿ ಒಬ್ಬರು ಸುಮಂತ್ ಕುಮಾರ್ ಜೈನ್ ಎಂಬುದು ಅತ್ಯಂತ ವಿಶೇಷ. ಶೈಕ್ಷಣಿಕ ಸಾಧಕರಿಗೆ ಈ ಪ್ರಶಸ್ತಿಯನ್ನು ನೀಡುತ್ತಿರುವುದು ನಮ್ಮ ಸಂಸ್ಥೆಗೆ ಹೆಮ್ಮೆಯ ವಿಚಾರ” ಎಂದು ಶ್ರೀನಿವಾಸ್ ರವರು ಹೇಳಿದರು.
“ಪ್ರಶಸ್ತಿಗಳು ತಮ್ಮೆಲ್ಲರ ಜವಾಬ್ದಾರಿಯನ್ನು ಹೆಚ್ಚಿಸುತ್ತವೆ. ನನ್ನ ಕನಸುಗಳಿಗೆ ಬೆಂಬಲವಾಗಿ ನಿಂತಿರುವವರು ಪ್ರಾಚಾರ್ಯರು, ಬೋಧಕ ಸಿಬ್ಬಂದಿ ಮತ್ತು ಬೋಧಕೇತನ ಸಿಬ್ಬಂದಿಯವರು. ಎಲ್ಲರ ಸಹಕಾರದಿಂದ ನಾನು ಮತ್ತಷ್ಟು ನಿಸ್ವಾರ್ಥ ಸೇವೆಯನ್ನು ಮಾಡುತ್ತೇನೆ” ಎಂದು ಪ್ರಶಸ್ತಿಯನ್ನು ಸ್ವೀಕರಿಸಿದ ಸುಮಂತ್ ಕುಮಾರ್ ಜೈನ್ ಭರವಸೆಯ ಮಾತುಗಳನ್ನಾಡಿದರು.
ಈ ಕಾರ್ಯಕ್ರಮದಲ್ಲಿ ಖ್ಯಾತ ವಾಗ್ಮಿ ರಾಜೇಂದ್ರ ಭಟ್, ಪ್ರಾಚಾರ್ಯರಾದ ಡಾ. ನವೀನ್ ಕುಮಾರ್ ಮರಿಕೆ, ಡಾ. ಪ್ರಜ್ವಲ್ ಉಪಪ್ರಾಚಾರ್ಯರ ರೋಹಿತ್ ಕುಮಾರ್ ಮತ್ತು ಹರೀಶ್,ಕೀರ್ತಿನಿಧಿ ಜೈನ್, ಸಂಯೋಜಕರಾದ ನಿಶಾ ಪೂಜಾರಿ, ಶ್ರೀನಿಧಿ, ನಿಲಯ ಮೇಲ್ವಿಚಾರಕರಾದ ಮಲ್ಲೇಶ್ ಜೈನ್, ವಿಭಾಗದ ಮುಖ್ಯಸ್ಥರು, ಉಪನ್ಯಾಸಕ ವರ್ಗ, ವಿದ್ಯಾರ್ಥಿಗಳು, ಪೋಷಕರು ಮತ್ತು ಬೋಧಕೇತರ ಸಿಬ್ಬಂದಿಯವರು ಭಾಗವಹಿಸಿದ್ದರು.














