ಬೆಳ್ತಂಗಡಿ : ವಾಣಿ ಪದವಿ ಪೂರ್ವ ಕಾಲೇಜಿನ ರಾಷ್ಟ್ರೀಯ ಸೇವಾ ಯೋಜನೆ (ಎನ್ಎಸ್ಎಸ್) ಘಟಕದ ವತಿಯಿಂದ ಎನ್ಎಸ್ಎಸ್ ಸ್ವಯಂಸೇವಕರಿಗಾಗಿ “ಎನ್ಎಸ್ಎಸ್ನ ಉದ್ದೇಶ, ಧ್ಯೇಯ ಹಾಗೂ ಸ್ವಯಂಸೇವಕರ ಜವಾಬ್ದಾರಿಗಳು” ಕುರಿತು ಪ್ರಶಿಕ್ಷಣ ಕಾರ್ಯಗಾರವನ್ನು ಆಯೋಜಿಸಲಾಯಿತು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕಾಲೇಜಿನ ಪ್ರಾಂಶುಪಾಲರಾದ ವಿಷ್ಣು ಪ್ರಕಾಶ್ ಎಂ. ವಹಿಸಿದ್ದರು. ಸಂಪನ್ಮೂಲ ವ್ಯಕ್ತಿಯಾಗಿ ಕಾಲೇಜಿನ ಕನ್ನಡ ಉಪನ್ಯಾಸಕರೂ ಹಾಗೂ ಹಿರಿಯ ಎನ್ಎಸ್ಎಸ್ ಸ್ವಯಂಸೇವಕರೂ ಆದ ಶ್ರೀ ಬೆಳಿಯಪ್ಪ ಕೆ. ಅವರು ಭಾಗವಹಿಸಿ, ಎನ್ಎಸ್ಎಸ್ನ ಧ್ಯೇಯ, ಸೇವಾ ಮನೋಭಾವ, ವ್ಯಕ್ತಿತ್ವ ವಿಕಸನ, ನಾಯಕತ್ವ ಗುಣಗಳು, ಸಮಾಜಮುಖಿ ಚಟುವಟಿಕೆಗಳು ಹಾಗೂ ಶಿಸ್ತು-ಬದ್ಧತೆಯ ಮಹತ್ವವನ್ನು ವಿವರಿಸಿದರು.
ವಿದ್ಯಾರ್ಥಿಗಳು ಸಮಾಜ ಸೇವೆಯ ಮೂಲಕ ಉತ್ತಮ ಪ್ರಜೆಗಳಾಗಿ ರೂಪುಗೊಳ್ಳಬೇಕೆಂದು ಅವರು ಕರೆ ನೀಡಿದರು.
ಕಾರ್ಯಕ್ರಮದಲ್ಲಿ ಎನ್ಎಸ್ಎಸ್ ಕಾರ್ಯಕ್ರಮ ಅಧಿಕಾರಿ ಶ್ರೀ ದಿನೇಶ್ ಗೌಡ ಯು. ಅವರು ಸಂಪನ್ಮೂಲ ವ್ಯಕ್ತಿಯನ್ನು ಪರಿಚಯಿಸಿದರು. ಸಹ ಕಾರ್ಯಕ್ರಮ ಅಧಿಕಾರಿ ಕುಮಾರಿ ಶ್ರಾವ್ಯ ಎಸ್. ಉಪಸ್ಥಿತರಿದ್ದರು.
ಕಾರ್ಯಕ್ರಮದಲ್ಲಿ ಸ್ವಯಂಸೇವಕ ನಿಶಿತ್ ಸ್ವಾಗತಿಸಿದರು. ಸ್ವಯಂಸೇವಕಿ ಚೈತನ್ಯ ಕಾರ್ಯಕ್ರಮವನ್ನು ನಿರೂಪಿಸಿದರು. ಸ್ವಯಂಸೇವಕಿ ಸೌಂದರ್ಯ ವಂದನಾರ್ಪಣೆ ಸಲ್ಲಿಸಿದರು.
ಈ ಪ್ರಶಿಕ್ಷಣ ಕಾರ್ಯಗಾರದಲ್ಲಿ ಎನ್ಎಸ್ಎಸ್ನ ಅನೇಕ ಸ್ವಯಂಸೇವಕರು ಭಾಗವಹಿಸಿ ಕಾರ್ಯಕ್ರಮದ ಪ್ರಯೋಜನ ಪಡೆದುಕೊಂಡರು.















