
ಬೆಳ್ತಂಗಡಿ: ಸರಕಾರಿ ಪದವಿಪೂರ್ವ ಕಾಲೇಜು ಬೆಳ್ತಂಗಡಿ ಇದರ 2026 -27ನೇ ಸಾಲಿನ ವಿದ್ಯಾರ್ಥಿ ಮಂತ್ರಿ ಮಂಡಲದ ಪ್ರತಿಜ್ಞಾವಿಧಿ ಸ್ವೀಕಾರ ಸಮಾರಂಭ ಹಾಗೂ ದ್ವಿತೀಯ ಪಿಯುಸಿ ವಾರ್ಷಿಕ ಪರೀಕ್ಷೆಯಲ್ಲಿ ಅದ್ವಿತೀಯ ಸಾಧನೆ ಮಾಡಿದ ವಿದ್ಯಾರ್ಥಿಗಳ ಪ್ರತಿಭಾ ಪುರಸ್ಕಾರ ಸಮಾರಂಭ ಜು.11ರಂದು ಶ್ರೀ ಮಂಜುನಾಥ ಸ್ವಾಮಿ ಕಲಾಭವನ ಬೆಳ್ತಂಗಡಿಯಲ್ಲಿ ನಡೆಯಿತು.

ಕಾರ್ಯಕ್ರಮದ ಉದ್ಘಾಟನೆಯನ್ನು ಶಾಸಕ ಹರೀಶ ಪೂಂಜ ದೀಪ ಬೆಳಗಿಸಿ ನೆರವೇರಿಸಿ, ವಿದ್ಯಾರ್ಥಿಗಳನ್ನು ಉದ್ದೇಶಿಸಿ ಪ್ರೋತ್ಸಾಹದಾಯಕ ಮಾತುಗಳನ್ನಾಡಿದರು.
ಪ್ರಾಂಶುಪಾಲರಾದ ಸುಕುಮಾರ್ ಇವರು ವಿದ್ಯಾರ್ಥಿ ಮಂತ್ರಿಮಂಡಲದ ಪದಾಧಿಕಾರಿಗಳಿಗೆ ಪ್ರತಿಜ್ಞಾವಿಧಿ ಬೋಧಿಸಿದರು. ದ್ವಿತೀಯ ಪಿಯುಸಿ ವಾರ್ಷಿಕ ಪರೀಕ್ಷೆಯಲ್ಲಿ ಕಲಾವಿಭಾಗದಲ್ಲಿ 22 ವಾಣಿಜ್ಯ ವಿಭಾಗದಲ್ಲಿ 37 ವಿಜ್ಞಾನ ವಿಭಾಗದಲ್ಲಿ 29 ಹೀಗೆ ಒಟ್ಟು 88 ವಿದ್ಯಾರ್ಥಿಗಳನ್ನು ಶಾಲು ಹಾಗೂ ಫಲಕ ನೀಡಿ ಸನ್ಮಾನಿಸಲಾಯಿತು. ಈ ವರ್ಷ ಕಾಲೇಜಿನ ಫಲಿತಾಂಶವು ಶೇ.100 ಬಂದಿರುವುದರಿಂದ ಫಲಿತಾಂಶಕ್ಕೆ ಬೆನ್ನೆಲುಬಾಗಿ ನಿಂತ ಎಲ್ಲಾ ಉಪನ್ಯಾಸಕರನ್ನು ಫಲಕ ನೀಡಿ ಗೌರವಿಸಲಾಯಿತು.

ಕನ್ನಡ ವಿಷಯದಲ್ಲಿ ನೂರಕ್ಕೆ ನೂರು ಅಂಕ ಪಡೆದ 23 ವಿದ್ಯಾರ್ಥಿಗಳನ್ನು, ಗಣಿತದಲ್ಲಿ ಇಬ್ಬರು ವಿದ್ಯಾರ್ಥಿಗಳನ್ನು ವ್ಯವಹಾರ ಅಧ್ಯಯನ ಹಾಗೂ ಅರ್ಥಶಾಸ್ತ್ರ ವಿಷಯದಲ್ಲಿ ತಲಾ ಒಬ್ಬ ವಿದ್ಯಾರ್ಥಿಯನ್ನು ಶತಕ ಸಾಧನೆಗಾಗಿ ಪುರಸ್ಕರಿಸಲಾಯಿತು. ಸಂಸ್ಥೆಯ ಶ್ರೇಯೋಭಿವೃದ್ಧಿಗೆ ಶ್ರಮಿಸುತ್ತಿರುವ ಪ್ರಾಂಶುಪಾಲರನ್ನು ಗೌರವಿಸಲಾಯಿತು. ಕಾಲೇಜಿಗೆ 5 ಲಕ್ಷಕ್ಕೂ ಅಧಿಕ ಮೊತ್ತದ ಕೊಡುಗೆಗಳು ಎರಡು ಸ್ಮಾರ್ಟ್ ಬೋರ್ಡ್ 2 ಸ್ಪೀಕರ್ ಎರಡು ವಾಟರ್ ಫಿಲ್ಟರ್ ಎರಡು ಪ್ರೊಜೆಕ್ಟರ್ ಗಳು ಕಾಲೇಜಿಗೆ ಬರುವಲ್ಲಿ ಪ್ರಮುಖ ಪಾತ್ರವಹಿಸಿದ ರೂಪಶ್ರೀ ರತ್ನಾಕರ ಸೀನಿಯರ್ ಮ್ಯಾನೇಜರ್ ಮಣಿಪಾಲ ಗ್ರೂಪ್ಸ್ ಇವರನ್ನು ಅಭಿನಂದಿಸಲಾಯಿತು.
ಮುಖ್ಯ ಅತಿಥಿಗಳಾಗಿ ಪೀತಾಂಬರ ಹೆರಾಜೆ ನಿವೃತ್ತ ಡಿ ವೈ ಎಸ್ ಪಿ ಬೆಳ್ತಂಗಡಿ, ಜಯಾನಂದ ಗೌಡ ನಿಕಟಪೂರ್ವ ಅಧ್ಯಕ್ಷರು ಪಟ್ಟಣ ಪಂಚಾಯತ್ ಬೆಳ್ತಂಗಡಿ, ರೂಪಶ್ರೀ ರತ್ನಾಕರ ಸೀನಿಯರ್ ಮ್ಯಾನೇಜರ್ ಮಣಿಪಾಲ ಗ್ರೂಪ್ಸ್ , ಶ್ರೀಧರ ಕೆ ವಿ ಅಧ್ಯಕ್ಷರು ರೋಟರಿ ಕ್ಲಬ್ ಬೆಳ್ತಂಗಡಿ, ಬಿ ಸಂತೋಷ್ ಕುಮಾರ್ ಜೈನ್ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಪ್ರಾಂಶುಪಾಲರಾದ ಸುಕುಮಾರ್ ವಹಿಸಿದ್ದರು. ವಿದ್ಯಾರ್ಥಿನಿ ಜೆನಿಶಾ ಪಿರೇರಾ ನಿರೂಪಿಸಿದ ಕಾರ್ಯಕ್ರಮದಲ್ಲಿ ಉಪನ್ಯಾಸಕ ಶೀನಾ ನಾಡೋಳಿ ಸ್ವಾಗತಿಸಿದರು. ಉಪನ್ಯಾಸಕ ಡಾ. ಗಣೇಶ್ ಭಟ್ ವಂದಿಸಿದರು.















