ಗುರುವಾಯನಕೆರೆ: ವಿದ್ಯಾರ್ಥಿಗಳು ದೇಶದ ಆಸ್ತಿ. ವಿದ್ಯಾರ್ಥಿಗಳನ್ನು ಶಿಕ್ಷಣ ಸಂಸ್ಥೆಗಳು ದೇಶದ ಆಸ್ತಿಗಳನ್ನಾಗಿ ರೂಪಿಸುತ್ತದೆ. ಇದೇ ಸಂದರ್ಭ ವಿದ್ಯಾರ್ಥಿಗಳು ನಾಯಕತ್ವದ ಗುಣಗಳನ್ನು ಬೆಳೆಸಿಕೊಳ್ಳಬೇಕು ಎಂದು ಬೆಳ್ತಂಗಡಿ ಡಿವೈಎಸ್ಪಿ ಸಿ.ಕೆ. ರೋಹಿಣಿ ಹೇಳಿದರು.
ಅವರು ಶನಿವಾರ ಗುರುವಾಯನಕೆರೆ ಎಕ್ಸೆಲ್ ಟೆಕ್ನೋ ಸ್ಕೂಲ್ ನಲ್ಲಿ ಆಯೋಜಿಸಲಾದ ವಿದ್ಯಾರ್ಥಿ ಸಂಘ ಮತ್ತು ವಿವಿಧ ಕ್ಲಬ್ ಗಳನ್ನು ಉದ್ಘಾಟಿಸಿ ಮಾತನಾಡಿದರು.

ಗುರುವಾಯನಕೆರೆಯ ಎಕ್ಸೆಲ್ ಶಿಕ್ಷಣ ಸಂಸ್ಥೆ ಗುಣಮಟ್ಟದ ಶಿಕ್ಷಣದ ಜತೆಗೆ ಉತ್ತಮ ಜೀವನಾಧಾರಿತ ಮೌಲ್ಯಗಳ ನೈತಿಕ ಶಿಕ್ಷಣವನ್ನು ನೀಡುತ್ತಿದೆ. ವಿದ್ಯಾರ್ಥಿಗಳಲ್ಲಿ ನಾಯಕತ್ವದ ಗುಣಗಳನ್ನು ರೂಪಿಸಿಕೊಳ್ಳಲು ವಿವಿಧ ವಿದ್ಯಾರ್ಥಿ ಕ್ಲಬ್ ಗಳನ್ನು ರಚಿಸಿ, ಮನೋಸ್ಥೈರ್ಯವನ್ನು ಗಟ್ಟಿಗೊಳಿಸುತ್ತಿದೆ. ವಿದ್ಯಾರ್ಥಿ ಜೀವನದಲ್ಲೇ ನಾಯಕತ್ವದ ಅವಕಾಶ ಜೊತೆಗೆ ಶಿಸ್ತು ಮತ್ತು ಸೃಜನಶೀಲತೆಬೆಳೆಸಿಕೊಂಡಾಗ ಅದು ಅವರ ಭವಿಷ್ಯದ ಜೀವನಕ್ಕೆ ಬುನಾದಿ ಆಗುತ್ತದೆ ಎಂದು ವಿದ್ಯಾರ್ಥಿಗಳಿಗೆ ಶುಭ ಹಾರೈಸಿದರು.
ಅಧ್ಯಕ್ಷತೆ ವಹಿಸಿದ್ದ ಎಕ್ಸೆಲ್ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಸುಮಂತ್ ಕುಮಾರ್ ಜೈನ್ ಬಿ. ಮಾತನಾಡಿ, ನಾಯಕತ್ವ ಅಂದರೆ ಬರೀ ಜವಾಬ್ದಾರಿ ಅಲ್ಲ. ಅದು ಮುಂದಿನ ಕಾರ್ಯ ತಾತ್ಪರತೆಗೆ ಸಿಕ್ಕ ಅವಕಾಶ. ನಾವು ಮಾಡುವ ಕೆಲಸದಲ್ಲಿದಿಟ್ಟ ನಿರ್ಧಾರ ಮತ್ತು ಗುರಿ ಇದ್ದರೆ ರಾಜ್ಯದಲ್ಲೇ ನಂಬರ್ ಒನ್ ಕರೆಸಿಕೊಳ್ಳಬಹುದಾದ ಸಂಸ್ಥೆ ಸ್ಥಾಪಿಸಿ ವಿದ್ಯಾರ್ಥಿಗಳನ್ನು ದೇಶದ ಅಸ್ತಿಯನ್ನಾಗಿ ಮಾಡಬಹುದು ಎಂದು ತನ್ನ ಜೀವನ ಸ್ಫೂರ್ತಿ ಮಾತುಗಳನ್ನು ಹೇಳಿದರು.ವೇದಿಕೆಯಲ್ಲಿ ಎಕ್ಸೆಲ್ ವಿದ್ಯಾಸಂಸ್ಥೆಯ ಟ್ರಸ್ಟಿ ಸದಸ್ಯೆ ಸಹನಾ ಜೈನ್ ಉಪಸ್ಥಿತರಿದ್ದರು.
ಎಕ್ಸೆಲ್ ಟೆಕ್ನೋ ಪ್ರಾಂಶುಪಾಲೆ ಸುಮಿತ್ರಾ ಗೌಡ ಅವರು, ವಿದ್ಯಾರ್ಥಿ ಸಂಘ, ವಿವಿಧ ಕ್ಲಬ್ ಗಳು ಹಾಗೂಎಕ್ಸೆಲ್ ಟೆಕ್ನೋ ಸ್ಕೂಲ್ ನ ಕುರಿತು ಪ್ರಸ್ತಾವಿಸಿ, ವಿದ್ಯಾರ್ಥಿಗಳಿಗೆ ಪ್ರಮಾಣವಚನ ಬೋಧಿಸಿ,ಸ್ವಾಗತಿಸಿದರು.ಶಿಕ್ಷಕಿ ದೀಪಶ್ರೀ ವಂದಿಸಿದರು. ಶಿಕ್ಷಕಿ ಸಿಂಧೂರ ಕಾರ್ಯಕ್ರಮ ನಿರೂಪಿಸಿದರು.ಈ ಸಂದರ್ಭ ವಿದ್ಯಾರ್ಥಿಗಳ ಪೋಷಕರು, ಶಿಕ್ಷಕ ವೃಂದದವರು ಉಪಸ್ಥಿತರಿದ್ದರು.















