ಮಂಗಳೂರು : ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯ ತಾಲೂಕಿನ ಬೆಳ್ಳಾರೆ ಸಮೀಪದ ಹಿಂದೂ ಸಂಘಟನೆ ಕಾರ್ಯಕರ್ತ ಹಾಗೂ ಕೋಳಿ ಅಂಗಡಿ ವ್ಯವಹಾರ ನಡೆಸುತ್ತಿದ್ದ ಪ್ರವೀಣ್ ನೆಟ್ಟಾರು(32) ಎಂಬವರನ್ನು 26-07-2022 ರಂದು ರಾತ್ರಿ ಸುಮಾರು 8:30 ಕ್ಕೆ ಕೋಳಿ ಅಂಗಡಿಯನ್ನು ಮುಚ್ಚಿ ಮನೆಗೆ ಹೋಗುವ ಸಮಯದಲ್ಲಿ ಬೈಕ್ ನಲ್ಲಿ ಬಂದ ದುಷ್ಕರ್ಮಿಗಳ ತಂಡ ಮಾರಕಾಸ್ತ್ರಗಳಿಂದ ಕೊಚ್ಚಿ ಕೊಲೆ ಮಾಡಿದ ಪ್ರಕರಣ ಸಂಬಂಧ ಈವರೆಗೆ ರಾಷ್ಟ್ರೀಯ ತನಿಖಾ ದಳ(NIA) ಒಟ್ಟು 28 ಆರೋಪಿಗಳ ಪೈಕಿ 21 ಮಂದಿಯನ್ನು ಬಂಧಿಸಿದ್ದರು.
ಉಳಿದ ಆರೋಪಿಗಳ ಬಂಧನಕ್ಕೆ ಬಹುಮಾನ ಘೋಷಣೆ ಮಾಡಿ ಹುಡುಕಾಟ ನಡೆಸುತ್ತಿದ್ದರು.ಇದೀಗ 4 ವರ್ಷಗಳ ಬಳಿಕ ತಲೆಮರೆಸಿಕೊಂಡಿದ್ದ ಇಬ್ಬರು ಆರೋಪಿಗಳನ್ನು ಬಂಧಿಸುವಲ್ಲಿ ಬೆಂಗಳೂರು ಎನ್.ಐ.ಎ ಅಧಿಕಾರಿಗಳು ಯಶಸ್ವಿಯಾಗಿದ್ದಾರೆ.
ಬೆಂಗಳೂರು ಎನ್.ಐ.ಎ ಅಧಿಕಾರಿಗಳು ಪ್ರವೀಣ್ ನೆಟ್ಟಾರು ಕೊಲೆ ಬಳಿಕ ಆರೋಪಿಗಳನ್ನು ಕಾರಿನಲ್ಲಿ ಪರಾರಿಯಾಗಲು ಕಾರು ಚಾಲಕನಾಗಿ ಸಹಾಯ ಮಾಡಿದ್ದ ಬೆಳ್ತಂಗಡಿ ತಾಲೂಕಿನ ಪಡಂಗಡಿ ಗ್ರಾಮದ ಪೊಯ್ಯಗುಡ್ಡೆ ನಿವಾಸಿ ಹಮೀದ್ ಮಗ (ಆರೋಪಿ -23 ಆಗಿರುವ) ನೌಷದ್(32) ನನ್ನು ಬೆಂಗಳೂರು ಮತ್ತು ಕೊಡಗು ಜಿಲ್ಲೆಯ ಸೋಮವಾರಪೇಟೆ ಚೌವ್ಡ್ಲೀ ಕಾನ್ವೇಂಟ್ ರೋಡ್ ನಿವಾಸಿ ಇಬ್ರಾಹಿಂ ಮಗ (ಆರೋಪಿ 22 ಆಗಿರುವ) ಅಬ್ದುಲ್ ನಾಸೀರ್(41) ಎಂಬವನನ್ನು ಕೊಚ್ಚಿಯಿಂದ ಜು.11 ರಂದು ಬಂಧಿಸಿದ್ದಾರೆ.
ಇನ್ನೂ ಐದು ಮಂದಿಯ ಬಂಧನ ಬಾಕಿ ಇದ್ದು. ಬಂಧನಕ್ಕಾಗಿ ಎನ್.ಐ.ಎ ಹುಡುಕಾಟ ಮುಂದುವರಿಸಿದ್ದಾರೆ.ಆರೋಪಿಗಳಾದ ಬೆಳ್ತಂಗಡಿಯ ನೌಷದ್ ಮತ್ತು ಕೊಡಗಿನ ಅಬ್ದುಲ್ ನಾಸೀರ್ ತಲೆಮರೆಸಿಕೊಂಡಿದ್ದ ಬಗ್ಗೆ ರಾಷ್ಟ್ರೀಯ ತನಿಖಾ ದಳ (ಎನ್.ಐ.ಎ) ಪತ್ರಿಕಾ ಪ್ರಕಟಣೆ ಹೊರಡಿಸಿ ಪತ್ತೆಗೆ ಸಹಕರಿಸಿದ್ದಲ್ಲಿ ತಲಾ 2 ಲಕ್ಷ ಬಹುಮಾನ ನೀಡುವುದಾಗಿ ಘೋಷಣೆ ಮಾಡಿತ್ತು.















