ಹತ್ಯಡ್ಕ: ಬಹುರಾಷ್ಟ್ರೀಯ ಕಂಪೆನಿ ಕನ್ಸೇರೋ (CONSERO) ದ ಬೆಂಗಳೂರಿನ ಉದ್ಯೋಗಿಗಳು ಬೆಳ್ತಂಗಡಿ ಹತ್ಯಡ್ಕ ಗ್ರಾಮದ ಕಾಲಕಾಮ ಪರಶುರಾಮ ದೇವಸ್ಥಾನದ ಬಳಿ ಇರುವ ಪರಶುರಾಮ ವನದಲ್ಲಿ ವನಮಹೋತ್ಸವ ಆಚರಿಸಿದರು.
ಕಂಪೆನಿಯ ಉದ್ಯೋಗಿ ಸ್ಥಳೀಯರಾದ ನವೀನ ದಾಮ್ಲೆಯವರು ನೇತೃತ್ವ ವಹಿಸಿದ್ದರು. ಸುಮಾರು 20 ಉದ್ಯೋಗಿಗಳು ಸಕ್ರಿಯವಾಗಿ ಪಾಲ್ಗೊಂಡಿದ್ದರು. ಸುಮಾರು 150 ಕ್ಕೂ ಮಿಕ್ಕಿದ ವಿವಿಧ ಪ್ರಭೇದಗಳ ಸಸ್ಯಗಳನ್ನು ನೆಟ್ಟರು.
ಪರಶುರಾಮ ವನದ ರೂವಾರಿ ಗೋವಿಂದ ದಾಮ್ಲೆ ಸ್ವಾಗತಿಸಿ, ಮಾರ್ಗದರ್ಶನ ನೀಡಿದರು. ವನ ನಿರ್ಮಾಣದ ಉದ್ದೇಶ ಕಲ್ಪನೆಗಳನ್ನು ಪ್ರಸ್ತಾಪಿಸಿದರು. ಉದ್ಯೋಗಿ ಡಾ. ರವಿ ಮಕ್ಕಂ ಇವರು ಕಳೆದ ವರ್ಷದಿಂದಲೂ ಪರಶುರಾಮ ವನದಲ್ಲಿ ವಹಿಸಿದ ಶ್ರಮದಿಂದ ಗಿಡಗಳ ಬದುಕುವಿಕೆಯ ಕುರಿತು ಮೆಚ್ಚುಗೆ ವ್ಯಕ್ತಪಡಿಸಿದರು. ರಾಶಿವನ, ನಕ್ಷತ್ರ ವನ, ನವಗ್ರಹ ವನಗಳ ಕಲ್ಪನೆಯನ್ನು ಸಾಕಾರಗೊಳಿಸಿದ ಬಗ್ಗೆಯೂ ಸಂತೋಷದ ಮಾತನ್ನಾಡಿದರು.
ಉದ್ಯೋಗಿ ವಿನಯ್ ಮಯ್ಯರವರು ಗೋವಿಂದ ದಾಮ್ಲೆಯವರ ಸ್ವಯಂ ಸ್ಫೂರ್ತಿಯ ಕಾರಣದಿಂದ ಒಂದು ಮಾದರಿ ವನ ರೂಪಿತವಾಗಿ ಮುಂದಿನ ಪೀಳಿಗೆಯವರಿಗೆ ಅನೇಕ ಗಿಡಗಳ ಪರಿಚಯ ಇಲ್ಲಿ ಸಿಗುವಂತೆ ಮಾಡಿದ್ದಾರೆ. ಅಭಿನಂದನೀಯ ಕಾರ್ಯ ನಡೆಸಿದ್ದಾರೆ ಎಂದರು. ನಂತರ ಶಿಶಿಲದ ನಾಗನಡ್ಕ ಅರ್ಬಿ ಗುಡ್ಡದಲ್ಲಿ ವಿವಿಧ ಜಾತಿಗಳ ಸಸ್ಯಗಳ ಬೀಜಗಳ ಬಿತ್ತನೆ ನಡೆಸಲಾಯಿತು.
ಇವರೊಂದಿಗೆ ಸ್ಥಳೀಯರಾದ ಆಸುಪಾಸಿನ ಹಿಮಾಂಶು ಕುಲಕರ್ಣಿ, ಅರವಿಂದ ತುಳುಪುಳೆ, ವೇಣುಗೋಪಾಲ ಗೋಖಲೆ, ಪ್ರಾಣೇಶ ಖರೆ, ಕಾರ್ತಿಕ ದಾಮ್ಲೆ ಪಾಲ್ಗೊಂಡಿದ್ದರು.
















