ಬೆಳ್ತಂಗಡಿ : ಬೆಳ್ತಂಗಡಿ ಪಟ್ಟಣ ಪಂಚಾಯತ್ ವ್ಯಾಪ್ತಿಯಲ್ಲಿ ಸಾಮಾಜಿಕ ಹಾಗೂ ಆರ್ಥಿಕವಾಗಿ ಹಿಂದುಳಿದ ಕುಟುಂಬಗಳ ಸಬಲೀಕರಣಕ್ಕಾಗಿ ಕಳೆದ ಎಂಟು ವರ್ಷಗಳಿಂದ ನಿರಂತರ ಸೇವೆ ಸಲ್ಲಿಸುತ್ತಿರುವ ಸಂಜಯ್ ಗ್ಲೋಬಲ್ ಫೌಂಡೇಶನ್ನ ಕಾರ್ಯಚಟುವಟಿಕೆಗಳು ಮಾದರಿಯಾಗಿದ್ದು, ಸಮಾಜಮುಖಿ ಸೇವೆಯಲ್ಲಿ ಸಂಸ್ಥೆ ತನ್ನದೇ ಆದ ಛಾಪು ಮೂಡಿಸಿದೆ ಎಂದು ಸಂಪನ್ಮೂಲ ವ್ಯಕ್ತಿ ಮುಸ್ತಾಫ ಜಿ.ಕೆ. ಹೇಳಿದರು.

ಸಂಜಯ್ ಗ್ಲೋಬಲ್ ಫೌಂಡೇಶನ್ನ 2026–27ನೇ ಸಾಲಿನ ವಾರ್ಷಿಕ ಸಭೆಯಲ್ಲಿ ಮುಖ್ಯ ಅತಿಥಿಯಾಗಿ ಮಾತನಾಡಿದ ಅವರು, ಯಾವುದೇ ಸಂಘಟನೆಯ ಬೆಳವಣಿಗೆಯಲ್ಲಿ ಉತ್ತಮ ನಾಯಕತ್ವದ ಪಾತ್ರ ಅತ್ಯಂತ ಮಹತ್ವದ್ದಾಗಿದೆ ಎಂದರು. ನಾಯಕತ್ವ ಎನ್ನುವುದು ಕೇವಲ ಹುದ್ದೆಯಲ್ಲ; ಅದು ಜವಾಬ್ದಾರಿ, ಪ್ರಾಮಾಣಿಕತೆ ಹಾಗೂ ಸೇವಾ ಮನೋಭಾವದ ಪ್ರತೀಕವಾಗಿದೆ. ಸಮಾಜದ ಒಳಿತಿಗಾಗಿ ತಂಡದೊಂದಿಗೆ ಕಾರ್ಯನಿರ್ವಹಿಸುವ ನಾಯಕರು ಸಂಘಟನೆಯನ್ನು ಮತ್ತಷ್ಟು ಎತ್ತರಕ್ಕೆ ಕೊಂಡೊಯ್ಯಬಲ್ಲರು ಎಂದು ಹೇಳಿದರು.

ಶಿಕ್ಷಣ, ಆರೋಗ್ಯ ಹಾಗೂ ಸಾಮಾಜಿಕ ಮತ್ತು ಆರ್ಥಿಕವಾಗಿ ಹಿಂದುಳಿದ ಕುಟುಂಬಗಳ ಸಬಲೀಕರಣಕ್ಕಾಗಿ ಫೌಂಡೇಶನ್ ಸಲ್ಲಿಸುತ್ತಿರುವ ಸೇವೆ ಶ್ಲಾಘನೀಯವಾಗಿದೆ. ಮುಂದಿನ ದಿನಗಳಲ್ಲಿ ಇನ್ನಷ್ಟು ಜನಪರ ಕಾರ್ಯಕ್ರಮಗಳನ್ನು ರೂಪಿಸಿ ಸಮಾಜದ ಅಭಿವೃದ್ಧಿಗೆ ಹೆಚ್ಚಿನ ಕೊಡುಗೆ ನೀಡುವಂತೆ ಅವರು ಕರೆ ನೀಡಿದರು.
ಬೆಳ್ತಂಗಡಿಯ ಜಮೀಯತುಲ್ ಫಲಾಹ್ ಸಭಾಭವನದಲ್ಲಿ ನಡೆದ ಸಭೆಯ ಅಧ್ಯಕ್ಷತೆಯನ್ನು ಅಕ್ಬರ್ ಬೆಳ್ತಂಗಡಿ ವಹಿಸಿದ್ದರು. ಕಳೆದ ಸಾಲಿನ ವಾರ್ಷಿಕ ವರದಿಯನ್ನು ಪ್ರಧಾನ ಕಾರ್ಯದರ್ಶಿ ಹನೀಫ್ ವರ್ಷಾ ಮಂಡಿಸಿದರು.
ನೂತನ ಸಮಿತಿ ರಚನೆ:
2026–27ನೇ ಸಾಲಿನ ನೂತನ ಸಮಿತಿಯನ್ನು ಸರ್ವಾನುಮತದಿಂದ ಆಯ್ಕೆ ಮಾಡಲಾಯಿತು. ಅಧ್ಯಕ್ಷರಾಗಿ ರಿಯಾಝ್ ಐ.ಬಿ., ಪ್ರಧಾನ ಕಾರ್ಯದರ್ಶಿಯಾಗಿ ಶಬೀರ್ ಸಂಜಯನಗರ, ಉಪಾಧ್ಯಕ್ಷರಾಗಿ ಶೈರೊಝ್ ಉದಯನಗರ, ಜೊತೆ ಕಾರ್ಯದರ್ಶಿಯಾಗಿ ಅಶ್ರಫ್ ಕಟ್ಟೆ, ಕೋಶಾಧಿಕಾರಿಯಾಗಿ ರಿಝ್ವಾನ್ ಬಿ.ಕೆ. ಹಾಗೂ ಕಾರ್ಯಕಾರಿ ಸಮಿತಿ ಸದಸ್ಯರಾಗಿ ಅಬ್ಬಾಸ್ ಸಂಜಯನಗರ, ಖಾದರ್ ಕುದ್ರಡ್ಕ, ಶರೀಫ್ ವೆಲ್ಕಮ್ ಮತ್ತು ಹಕೀಮ್ ಸುದೆಮುಗೇರು ಆಯ್ಕೆಯಾದರು.
ಗಲ್ಫ್ ಸಮಿತಿ ಸದಸ್ಯರಾಗಿ ಇರ್ಫಾನ್ ಹಂಝ (ಸೌದಿ ಅರೇಬಿಯಾ), ಅನಸ್ (ಕತಾರ್) ಹಾಗೂ ಇರ್ಫಾನ್ (ಅಬುಧಾಬಿ) ಅವರನ್ನು ಆಯ್ಕೆ ಮಾಡಲಾಯಿತು.
ಸಲಹೆಗಾರರಾಗಿ ಅಕ್ಬರ್ ಬೆಳ್ತಂಗಡಿ, ಹನೀಫ್ ವರ್ಷಾ ಹಾಗೂ ಇಸ್ಮಾಯಿಲ್ ಐ.ಬಿ. ಅವರನ್ನು ನೇಮಕ ಮಾಡಲಾಯಿತು.
ಸಭೆಯಲ್ಲಿ ಸಂಜಯ್ ಗ್ಲೋಬಲ್ ಫೌಂಡೇಶನ್ನ ಸದಸ್ಯರು ಉಪಸ್ಥಿತರಿದ್ದರು. ರಶೀದ್ ಬೆಳ್ತಂಗಡಿ ಸ್ವಾಗತಿಸಿದರು. ಶೈರೊಝ್ ಉದಯನಗರ ವಂದಿಸಿದರು.
















