ಬೆಳ್ತಂಗಡಿ: ಸಮಾಜ ಕಲ್ಯಾಣ ಇಲಾಖೆಯಿಂದ ನಡೆಸಲ್ಪಡುವ ಹೊಸಂಗಡಿಯ ಇಂದಿರಾಗಾಂಧಿ ವಸತಿ ಶಾಲೆಯಲ್ಲಿ ಯಕ್ಷಧ್ರುವ ಪಟ್ಲ ಫೌಂಡೇಶನ್ ವತಿಯಿಂದ ಹಮ್ಮಿಕೊಂಡಿರುವ ಯಕ್ಷಧ್ರುವ ಯಕ್ಷ ಶಿಕ್ಷಣ ತರಬೇತಿ ತರಗತಿಗೆ ಜು. 11ರಂದು ಚಾಲನೆ ನೀಡಲಾಯಿತು.
ಯಕ್ಷ ಶಿಕ್ಷಣ ತರಗತಿ, ಶಾಲಾ ಸಂಸತ್ ಮತ್ತು ವಿವಿಧ ಸಂಘಗಳನ್ನು ಉದ್ಘಾಟಿಸಿ ಮಾತನಾಡಿದ ಯಕ್ಷಧ್ರುವ ಪಟ್ಲ ಫೌಂಡೇಶನ್ ಮೂಡುಬಿದಿರೆ ಘಟಕದ ಗೌರವಾಧ್ಯಕ್ಷ ಕೆ. ಶ್ರೀಪತಿ ಭಟ್ ಮಾತನಾಡಿ ವಿದ್ಯಾರ್ಥಿಗಳು ತ್ರಿಕರಣ ಪೂರ್ವಕವಾಗಿ ತಮ್ಮನ್ನು ತೊಡಗಿಸಿಕೊಂಡಾಗ ಶ್ರೇಷ್ಠ ವ್ಯಕ್ತಿಗಳಾಗಿ ಸಮಾಜದಲ್ಲಿ ಗುರುತಿಸಿಕೊಳ್ಳಲು ಸಾಧ್ಯ ಎಂದರು.

ಯಕ್ಷಧ್ರುವ ಯಕ್ಷ ಶಿಕ್ಷಣ ಯೋಜನೆಯ ಸಂಚಾಲಕ ಮಹಾವೀರ ಪಾಂಡಿಯವರು ಪ್ರಾಸ್ತಾವಿಕವಾಗಿ ಮಾತನಾಡುತ್ತಾ ದ. ಕ. ಜಿಲ್ಲೆಯ 12 ವಸತಿ ಶಾಲೆಗಳಲ್ಲಿ ಯಕ್ಷ ಧ್ರುವ ಯಕ್ಷ ಶಿಕ್ಷಣ ತರಗತಿಗಳು ನಡೆಯುತ್ತಿದ್ದು ಡಿಸೆಂಬರ್ ತಿಂಗಳವರೆಗೆ ವಾರಕ್ಕೆ ಎರಡರಂತೆ ಪ್ರತಿ ತಿಂಗಳು 8 ತರಗತಿ ನಡೆಯಲಿದೆ ಎಂದರು.
ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದ ಯಕ್ಷಧ್ರುವ ಪಟ್ಲ ಫೌಂಡೇಶನ್ ಮೂಡುಬಿದಿರೆ ಘಟಕದ ಸಂಚಾಲಕ ರವಿಪ್ರಸಾದ್ ಕೆ. ಶೆಟ್ಟಿಯವರು ಮಾತನಾಡಿ ಯಕ್ಷ ಶಿಕ್ಷಣವು ವಿದ್ಯಾರ್ಥಿಗಳ ಶೈಕ್ಷಣಿಕ ಚಟುವಟಿಕೆಗಳಿಗೆ ಪೂರಕವಾಗಿರುತ್ತದಯೇ ಹೊರತು ಯಾವತ್ತೂ ಮಾರಕವಾಗಿರುವುದಿಲ್ಲ ಎಂದರಲ್ಲದೆ ಯಕ್ಷ ಶಿಕ್ಷಣ ಎಂಬುದು ಮುಂದಿನ ಜೀವನದಲ್ಲಿ ಪ್ರಮುಖ ಘಟ್ಟವಾಗಿ ಮಾರ್ಪಡಲಿದೆ ಎಂದರು.

ಶಾಲಾ ಪ್ರಾಂಶುಪಾಲರು ಶ್ರೀಧರ ಶೆಟ್ಟಿಯವರ ಅಧ್ಯಕ್ಷತೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಯಕ್ಷಧ್ರುವ ಪಟ್ಲ ಫೌಂಡೇಶನ್ ಮೂಡುಬಿದಿರೆ ಘಟಕದ ಅಧ್ಯಕ್ಷ ಕಂಡಿಗ ರತ್ನಾಕರ ಶೆಟ್ಟಿ, ಶಾಲಾ ಉಪ ಪ್ರಾಂಶುಪಾಲೆ ವಿದ್ಯಾಲತಾ, ಯಕ್ಷ ಶಿಕ್ಷಕ ಪ್ರಜ್ವಲ್ ಶೆಟ್ಟಿ ಮತ್ತಿತರರು ಉಪಸ್ಥಿತರಿದ್ದರು.
ಸಹ ಶಿಕ್ಷಕಿ ಕಾವ್ಯ ಮತ್ತು ರಕ್ಷಿತಾ ನಿರೂಪಿಸಿ, ಚಿತ್ರಕಲಾ ಶಿಕ್ಷಕ ಸುಧೀರ್ ಬಾಳೆಪುಣಿ ಸ್ವಾಗತಿಸಿ, ಅನಿತಾ ವಂದಿಸಿದರು.
















