ಬೆಳ್ತಂಗಡಿ: ದಯಾ ವಿಶೇಷ ಶಾಲೆಯಲ್ಲಿ 2026–27ನೇ ಶೈಕ್ಷಣಿಕ ವರ್ಷದ ಪ್ರಥಮ ಪೋಷಕರ ಸಭೆಯು ಶಾಲೆಯ ನಿರ್ದೇಶಕ ವಂ.ಫಾ.ವಿನೋದ್ ರವರ ಅಧ್ಯಕ್ಷತೆಯಲ್ಲಿ ಮುಖ್ಯ ಶಿಕ್ಷಕಿ ಹಾಗೂ ಪೋಷಕರ ನೇತೃತ್ವದಲ್ಲಿ ಯಶಸ್ವಿಯಾಗಿ ನಡೆಯಿತು.
ಸಭೆಯಲ್ಲಿ ವಿದ್ಯಾರ್ಥಿಗಳ ಶೈಕ್ಷಣಿಕ ಪ್ರಗತಿ, ಹಾಜರಾತಿ, ಸಮಯ ಪಾಲನೆ ಹಾಗೂ ಪೋಷಕರ ಸಹಭಾಗಿತ್ವದ ಕುರಿತು ಸಮಗ್ರವಾಗಿ ಚರ್ಚಿಸಲಾಯಿತು. ಶಾಲೆಯ ನಿಯಮಾವಳಿ, ಮಕ್ಕಳ ದೈನಂದಿನ ದಿನಚರಿ, ವೈಯಕ್ತಿಕ ಸ್ವಚ್ಛತೆ, ಸಮವಸ್ತ್ರ ಧಾರಣೆ ಹಾಗೂ ಶಾಲೆಗೆ ಅಗತ್ಯ ದಾಖಲೆಗಳನ್ನು ಸಮಯಕ್ಕೆ ಸರಿಯಾಗಿ ಸಲ್ಲಿಸುವಂತೆ ಪೋಷಕರಿಗೆ ತಿಳಿಸಲಾಯಿತು.
ಅನಾರೋಗ್ಯದ ಸಂದರ್ಭದಲ್ಲಿ ಮಕ್ಕಳನ್ನು ಶಾಲೆಗೆ ಕಳುಹಿಸದಂತೆ ಹಾಗೂ ವೈದ್ಯರ ಸಲಹೆಯಂತೆ ಚಿಕಿತ್ಸೆ ನೀಡುವಂತೆ ಸೂಚಿಸಲಾಯಿತು. ಶಾಲೆಯಲ್ಲಿ ಮಕ್ಕಳಿಗೆ ನೀಡಲಾಗುತ್ತಿರುವ ಸ್ಪೀಚ್ ಥೆರಪಿ, ಫಿಸಿಯೋಥೆರಪಿ, ಬಿಹೇವಿಯರಲ್ ಥೆರಪಿ, ಕೌನ್ಸೆಲಿಂಗ್, ದೈಹಿಕ ಶಿಕ್ಷಣ, ಕಂಪ್ಯೂಟರ್ ಶಿಕ್ಷಣ, ನೃತ್ಯ, ಸಂಗೀತ, ಕ್ರಾಫ್ಟ್ ತರಬೇತಿ ಹಾಗೂ ಬೆಳಗಿನ ಉಪಹಾರ ಮತ್ತು ಮಧ್ಯಾಹ್ನದ ಊಟದ ಸೌಲಭ್ಯಗಳ ಕುರಿತು ವಿವರಿಸಲಾಯಿತು.
ಮಕ್ಕಳ ವೈಯಕ್ತಿಕ ಸ್ವಚ್ಛತೆ, ಉಗುರು ಹಾಗೂ ಕೂದಲಿನ ಸ್ವಚ್ಛತೆ ಕಾಪಾಡುವುದು, ಶಾಲಾ ವಾಹನದ ನಿಯಮಗಳನ್ನು ಪಾಲಿಸುವುದು ಹಾಗೂ ಮಕ್ಕಳಿಗೆ ಅಗತ್ಯ ಔಷಧಿಗಳನ್ನು ಶಾಲೆಗೆ ನೀಡುವ ಬಗ್ಗೆ ಪೋಷಕರಿಗೆ ಮಾಹಿತಿ ನೀಡಲಾಯಿತು.
ಪೋಷಕರು ತಮ್ಮ ಅಭಿಪ್ರಾಯಗಳು ಹಾಗೂ ಸಲಹೆಗಳನ್ನು ಹಂಚಿಕೊಂಡು, ಮಕ್ಕಳ ಸಮಗ್ರ ಬೆಳವಣಿಗೆಗಾಗಿ ಶಾಲೆಯೊಂದಿಗೆ ಕೈಜೋಡಿಸುವ ಭರವಸೆ ವ್ಯಕ್ತಪಡಿಸಿದರು. ಕಾರ್ಯಕ್ರಮದ ನಿರೂಪಣೆಯನ್ನು ಶಾಲಾ ಮುಖ್ಯ ಶಿಕ್ಷಕಿ ದಿವ್ಯ ನೆರವೇರಿಸಿದರು.















