ಬೆಳ್ತಂಗಡಿ: ಧರ್ಮಸ್ಥಳ ಗ್ರಾಮ ಪಂಚಾಯತ್ ಅಧ್ಯಕ್ಷರಾಗಿ,ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ಅಧ್ಯಕ್ಷರಾಗಿ, ಸದಸ್ಯರಾಗಿ, ಯಕ್ಷಭಾರತಿಯ ಉಪಾಧ್ಯಕ್ಷರಾಗಿ ನಿರಂತರ ಸಮಾಜಸೇವೆಯಲ್ಲಿ ತೊಡಗಿಸಿಕೊಂಡ ಯಕ್ಷಗಾನ ತಾಳಮದ್ದಳೆ ಅರ್ಥಧಾರಿ ಹರಿದಾಸ ಗಾಂಭೀರ ಧರ್ಮಸ್ಥಳ ಅವರು ನಿವೃತ್ತ ಕ್ರೀಡಾ ಶಿಕ್ಷಕ, ಕಲಾವಿದ ,ಕಲಾಪೋಷಕ ದಿ| ನರೇಂದ್ರಕುಮಾರ್ ಅವರ ಸಂಸ್ಮರಣಾ ಪ್ರಶಸ್ತಿಗೆ ಆಯ್ಕೆಯಾಗಿದ್ದಾರೆ.
ಆ 2 ರಂದು ಉಜಿರೆ ಶ್ರೀ ಜನಾರ್ದನ ದೇವಸ್ಥಾನದ ಆಶ್ರಯದಲ್ಲಿ ಯಕ್ಷಭಾರತಿ ಸಂಯೋಜನೆಯಲ್ಲಿ ನಡೆಯಲಿರುವ ಗೋವಿಂದ ನಮನ ಕಾರ್ಯಕ್ರಮದಲ್ಲಿ ಪ್ರಶಸ್ತಿ ಪ್ರದಾನ ನಡೆಯಲಿದೆ. ನರೇಂದ್ರ ಮಾಸ್ಟರ್ ಅವರ ಶಿಷ್ಯನಾಗಿ,ಬಾಲ್ಯದಲ್ಲಿ ಕ್ರಿಕೆಟ್,ಕೋಕೋ ,ಕಬಡ್ಡಿಯಲ್ಲಿ ಉತ್ತಮ ಆಟಗಾರರಾಗಿ ಹರಿದಾಸ ಗಾಂಭೀರ ಅವರು ಎಲ್ಲರ ಪ್ರೀತಿಗೆ ಪಾತ್ರರಾಗಿದ್ದರು. ಯಕ್ಷಗಾನ ತಾಳಮದ್ದಳೆಯ ಅರ್ಥಧಾರಿಯಾಗಿ ತಮ್ಮ ಮಾತಿನ ವೈಖರಿಯಿಂದ ಎಲ್ಲರ ಅಭಿಮಾನ, ಮೆಚ್ಚುಗೆ ಗಳಿಸಿದ್ದರು. ಪ್ರತಿ ವರ್ಷ ಶ್ರೀ ಕ್ಷೇತ್ರದಲ್ಲಿ ನಡೆಯುವ ಪುರಾಣ ವಾಚನ-ಪ್ರವಚನ ಕಾರ್ಯಕ್ರಮದಲ್ಲಿ ಕಳೆದ ಮೂರುವರೆ ದಶಕಕ್ಕಿಂತಲೂ ಹೆಚ್ಚು ಕಾಲ ಭಾಗವಹಿಸಿದ ಹಿರಿಯೆ ಅವರದು.
ರಾಜಕೀಯ ,ಸಹಕಾರ ಹಾಗೂ ಸೇವಾ ಕ್ಷೇತ್ರದಲ್ಲೂ ಅವರು ಸಮರ್ಪಣಾ ಭಾವದಿಂದ ತನ್ನನ್ನು ತೊಡಗಿಸಿಕೊಂಡವರು .ಯಕ್ಷಗಾನ ಕಲಾಪೋಷಕರಾಗಿ ಹಲವಾರು ಯಕ್ಷಗಾನ ಕಾರ್ಯಕ್ರಮಗಳಿಗೆ ಪೂ ರ್ಣ ಸಹಕಾರ ನೀಡುತ್ತಾ ಬಂದವರು. ನರೇಂದ್ರ ಮಾಸ್ಟರ್ ಅವರ ಆಪ್ತ ಶಿಷ್ಯರಲ್ಲಿ ಹರಿದಾಸ ಗಾಂಭೀರರೂ ಓರ್ವರಾಗಿ ನಿಕಟ ಸಂಪರ್ಕ ಹೊಂದಿದ್ದರು. ನರೇಂದ್ರಕುಮಾರ್ ಅವರ ಹೆಸರಿನ ಚೊಚ್ಚಲ ಪ್ರಶಸ್ತಿ ಗೆ ಹರಿದಾಸ ಗಾಂಭೀರ ಅವರ ಆಯ್ಕೆ ಅರ್ಥಪೂರ್ಣ ಹಾಗೂ ಸಮಯೋಚಿತವಾದುದು. .















