ಉಜಿರೆ : ವಿದ್ಯಾರ್ಥಿಗಳ ಗ್ರಹಿಕೆಯ ಸಾಮರ್ಥ್ಯ ವಿಸ್ತರಿಸುವಂತಹ ಮೌಲ್ಯಮಾಪನ ವಿಧಾನವನ್ನು ಹೊಸ ಕಾಲದ ಅಗತ್ಯಗಳಿಗೆ ತಕ್ಕಂತೆ ಮರುರೂಪಿಸಿಕೊಳ್ಳಬೇಕು ಎಂದು ಎಸ್.ಡಿ.ಎಂ ಕಾಲೇಜಿನ ಶೈಕ್ಷಣಿಕ ಸಂಯೋಜಕ ಎಸ್. ಎನ್. ಕಾಕತ್ಕರ್ ಅಭಿಪ್ರಾಯಪಟ್ಟರು.

ಎಸ್.ಡಿ.ಎಂ ಕಾಲೇಜಿನ ಇಂಟರ್ನಲ್ ಕ್ವಾಲಿಟಿ ಅಶ್ಯುರೆನ್ಸ್ ಸೆಲ್ ಮತ್ತು ರಿಸರ್ಚ್- ಡೆವಲಪ್ಮೆಂಟ್ ಘಟಕ ಜಂಟಿಯಾಗಿ ‘ಫಲಿತಾಂಶ ಆಧಾರಿತ ಬೋಧನಾ ವಿಧಾನದ ಮೂಲಕ ಉನ್ನತ ಶಿಕ್ಷಣದ ಮರುವ್ಯಾಖ್ಯಾನ’ ಕುರಿತು ಪದವಿ ಮತ್ತು ಸ್ನಾತಕೋತ್ತರ ಪದವಿ ಅಧ್ಯಾಪಕರಿಗಾಗಿ ಎಸ್.ಡಿ.ಎಂ ಸ್ನಾತಕೋತ್ತರ ಕೇಂದ್ರದಲ್ಲಿ ಜು.25ರಂದು ಆಯೋಜಿಸಿದ್ದ ಒಂದು ದಿನದ ಫ್ಯಾಕಲ್ಟಿ ಡೆವಲಪ್ಮೆಂಟ್ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.
ಚರ್ಚೆ, ಸಂವಾದ ಮತ್ತು ನಿರ್ದಿಷ್ಟ ವಿಷಯದ ಕುರಿತು ಈಗಾಗಲೇ ಇರುವ ಜ್ಞಾನ ವಿಸ್ತರಿಸಿದ ನಂತರ ನಿರೀಕ್ಷೆಗೆ ಅನುಗುಣವಾಗಿಯೇ ಫಲಿತಾಂಶ ವ್ಯಕ್ತವಾಗಬೇಕು. ವಿದ್ಯಾರ್ಥಿಗಳಲ್ಲಿ ಪರಿಪೂರ್ಣತೆ ರೂಪಿಸುವುದರ ಜೊತೆಜೊತೆಗೆ ಅದನ್ನು ಅಳೆಯುವ ಮೌಲ್ಯಮಾಪನದ ವಿಧಾನ ಕ್ರಮಗಳಲ್ಲೂ ಬದಲಾವಣೆ ತಂದುಕೊಳ್ಳಬೇಕು. ಈ ಕುರಿತ ಕಾರ್ಯತಾಂತ್ರಿಕ ಪರಿಣತಿ ಗಳಿಸಿ ಕಲಿಕೆಯ ಪ್ರಕ್ರಿಯೆಯನ್ನು ನಿರೀಕ್ಷಿತ ಫಲಿತಾಂಶ ಕೇಂದ್ರಿತ ಪ್ರಕ್ರಿಯೆಯನ್ನಾಗಿಸಬೇಕು ಎಂದು ಸಲಹೆ ನೀಡಿದರು.
ಬೆಂಗಳೂರಿನ ಚಾಣಕ್ಯ ವಿಶ್ವವಿದ್ಯಾನಿಲಯದ ಸ್ಕೂಲ್ ಆಫ್ ಮ್ಯಾನೇಜ್ಮೆಂಟ್ ಸೈನ್ಸಸ್ ಸಹಾಯಕ ಪ್ರಾಧ್ಯಾಪಕಿ ಡಾ.ಸಂಧ್ಯಾ ಆರ್ ಫಲಿತಾಂಶ ಕೇಂದ್ರಿತ ಬೋಧನಾ ವಿಧಾನಗಳ ಕುರಿತು ಮಾತನಾಡಿದರು. ಶೈಕ್ಷಣಿಕ ಕಲಿಕೆಯನ್ನು ಇನ್ನಷ್ಟು ನಿಖರವಾಗಿಸುವಂತಹ ವೈವಿಧ್ಯಮಯ ಬೋಧನಾ ವಿಧಾನಗಳ ಸ್ವರೂಪದ ಕುರಿತ ನಾಲ್ಕು ಗೋಷ್ಟಿಗಳನ್ನು ನಿರ್ವಹಿಸಿದರು.
ಎಸ್.ಡಿ.ಎಂ ಶಿಕ್ಷಣ ಸಂಸ್ಥೆಗಳ ಕಾರ್ಯದರ್ಶಿ ಡಾ.ಸತೀಶ್ಚಂದ್ರ ಎಸ್ ಉಪಸ್ಥಿತರಿದ್ದರು. ಇಂಟರ್ನಲ್ ಕ್ವಾಲಿಟಿ ಅಶ್ಯುರೆನ್ಸ್ ಸೆಲ್ ಸಂಯೋಜಕರಾದ ಜಿ.ಆರ್.ಭಟ್ ಸ್ವಾಗತಿಸಿ ಪ್ರಾಸ್ತಾವಿಕ ನುಡಿಗಳನ್ನಾಡಿದರು. ಎಸ್.ಡಿ.ಎಂ ಕಾಲೇಜಿನ ಪ್ರಾಂಶುಪಾಲರಾದ ಪ್ರೊ.ವಿಶ್ವನಾಥ ಪಿ ಅಧ್ಯಕ್ಷತೆ ವಹಿಸಿದ್ದರು. ಎಸ್.ಡಿ.ಎಂ ಸ್ನಾತಕೋತ್ತರ ಕೇಂದ್ರದ ಡೀನ್, ರಿಸರ್ಚ್-ಡೆವಲಪ್ಮೆಂಟ್ ಘಟಕದ ನಿರ್ದೇಶಕಿ ಡಾ.ಸೌಮ್ಯ ಬಿ.ಪಿ ವಂದಿಸಿದರು. ಸಹ ಪ್ರಾಧ್ಯಾಪಕಿ ಡಾ.ನೆಫಿಸತ್ ಪಿ ಕಾರ್ಯಕ್ರಮ ನಿರೂಪಿಸಿದರು.















