ಧರ್ಮಸ್ಥಳ : ಶ್ರೀ ಮಂಜುನಾಥೇಶ್ವರ ಅನುದಾನಿತ ಪ್ರೌಢಶಾಲೆ ಧರ್ಮಸ್ಥಳ ಹಾಗೂ ರೋಟರಿ ಕ್ಲಬ್ ಬೆಳ್ತಂಗಡಿ ಇದರ ಜಂಟಿ ಆಶ್ರಯದಲ್ಲಿ ಜು.22 ರಂದು ಸ್ವಾಸ್ಥ್ಯ ಸಂಕಲ್ಪ ಕಾರ್ಯಕ್ರಮ ನಡೆಯಿತು.

ರೋಟರಿಕ್ಲಬ್ ಅಧ್ಯಕ್ಷ ಶ್ರೀಧರ ಕೆ.ವಿ. ಕಾರ್ಯಕ್ರಮವನ್ನು ಉದ್ಘಾಟಿಸಿ ವಿದ್ಯಾರ್ಥಿ ಜೀವನವೆಂಬುದು ಸುವರ್ಣ ಕಾಲ. ಈ ಸಮಯದಲ್ಲಿ ಒಳ್ಳೆಯ ಹವ್ಯಾಸಗಳಿಂದ ಭವಿಷ್ಯತ್ತನ್ನು ರೂಪಿಸಿಕೊಳ್ಳಬೇಕು ಎಂದು ತಿಳಿಸಿದರು.
ಕಾರ್ಯಕ್ರಮದ ಸಂಪನ್ಮೂಲ ವ್ಯಕ್ತಿಗಳಾದ ಧರ್ಮಸ್ಥಳ ಶ್ರೀ ಮಂಜುನಾಥ ಸ್ವಾಮಿ ಅನುದಾನಿತ ಹಿ ಪ್ರಾ ಶಾಲೆಯ ರಾಜ್ಯಪ್ರಶಸ್ತಿ ಪುರಸ್ಕೃತ ನಿವೃತ್ತ ಮುಖ್ಯ ಶಿಕ್ಷಕ ಬಿ.ಸೋಮಶೇಖರ ಶೆಟ್ಟಿ ಮಾತನಾಡಿ ಶ್ರದ್ಧೆ ಮತ್ತು ಏಕಾಗ್ರತೆ ಎರಡು ಕಣ್ಣುಗಳಿದ್ದಂತೆ ದಿಕ್ಕುಗಳು ನಮ್ಮ ಸುತ್ತಲೂ ಇದೆ. ನಾವು ಯಾವ ದಿಕ್ಕಿನ ಮೂಲಕ ಸಾಗಿ ಯಾವ ದಾರಿ ಗುರಿ ಸೇರುತ್ತೇವೆ ಎಂಬುದು ಮುಖ್ಯ. ವಿದ್ಯಾರ್ಥಿ ಜೀವನದಲ್ಲಿ ಗುರಿಯಷ್ಟೇ, ಅದನ್ನು ತಲುಪುವ ದಾರಿಯೂ ಮುಖ್ಯ. ವಿದ್ಯಾರ್ಥಿಗಳು ದುಶ್ಚಟಗಳಿಗೆ ಬಲಿ ಬೀಳದೆ ಶ್ರದ್ಧೆ ಮತ್ತು ಏಕಾಗ್ರತೆಯಿಂದ ಕಲಿತು ಸಾಧನೆ ಮಾಡಿ ಎಂದು ತಿಳಿಸಿದರು. ಜೀವನದಲ್ಲಿ ದೊರೆತ ಅವಕಾಶಗಳನ್ನು ಸದುಪಯೋಗಪಡಿಸಿಕೊಳ್ಳಿ. ದೇವರು ವರವನ್ನು ಕೊಡುವುದಿಲ್ಲ. ಶಾಪವನ್ನೂ ಕೊಡುವುದಿಲ್ಲ ಕೇವಲ ಅವಕಾಶಗಳನ್ನಷ್ಟೇ ಕೊಡುತ್ತಾನೆ. ಅವುಗಳನ್ನು ಹೇಗೆ ಬಳಸುತ್ತೇವೆ ಎಂಬುದು ಮುಖ್ಯ ಎಂದು ವಿವರಿಸಿ ತಿಳಿಸಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಮುಖ್ಯ ಶಿಕ್ಷಕಿ ಶ್ರೀಮತಿ ಜಯಶ್ರೀ ಜೈನ್ ವಹಿಸಿ ಕಾರ್ಯಕ್ರಮದ ಪ್ರಾಮುಖ್ಯತೆಯ ಬಗ್ಗೆ ವಿದ್ಯಾರ್ಥಿಗಳಿಗೆ ತಿಳಿಸಿದರು. ಶಿಕ್ಷಕ ಯುವರಾಜ್ ಸ್ವಾಗತಿಸಿ, ಪ್ರಜ್ವಲ್ ವಂದಿಸಿದರು. ವಿದ್ಯಾರ್ಥಿನಿ ಕುಮಾರಿ ಆರಾಧ್ಯ ನಿರೂಪಿಸಿ,ಶಿಕ್ಷಕಿಯರಾದ ಭವ್ಯ ಹಾಗೂ ತುಷಾರಾ ಕಾರ್ಯಕ್ರಮ ಸಂಯೋಜಿಸಿದರು.















