ಬೆಳ್ತಂಗಡಿ: ಮೇಲಂತಬೆಟ್ಟು ಗ್ರಾಮವು ನಗರಕ್ಕೆ ಸಮೀಪವಿದ್ದರೂ ಸರಕಾರಿ ಮೂಲಭೂತ ಸೌಲಭ್ಯಗಳು ಕಡಿಮೆ ದೊರೆತ ಪ್ರದೇಶ. ಆದರೆ ಸೌಹಾರ್ದತೆಯ ಪರಂಪರೆಗೆ ಗಟ್ಟಿಯಾದ ತಳಪಾಯ ಹಾಕಿಕೊಟ್ಟಿದೆ. ಈ ಮೊಸರು ಕುಡಿಕೆ ಉತ್ಸವದ ಮೂಲಕ ಕೃಷಿಕ ಯುವಕ ಮಂಡಲ ಒಗ್ಗಟ್ಟಿಗೆ ನಾಂದಿ ಹಾಡಿದ್ದು, ಇಲ್ಲಿ ಯುವತಿ ಮಂಡಲ ಕೂಡ ಗಟ್ಟಿಗೊಳ್ಳುವಂತಾಗಲಿ ಎಂದು ಗ್ರಾ. ಯೋಜನೆಯ ಚಿತ್ರದುರ್ಗದ ಜಿಲ್ಲಾ ನಿರ್ದೇಶಕ ಪ್ರವೀಣ್ ಕುಮಾರ್ ಬಟ್ಯರಡ್ಡ ಹೇಳಿದರು.
ಕೃಷಿಕ ಯುವಕ ಮಂಡಲ ಮೇಲಂತಬೆಟ್ಟು ಇದರ ವತಿಯಿಂದ ಮೇಲಂತಬೆಟ್ಟು, ಮುಂಡೂರು, ಸವಣಾಲು, ಮತ್ತು ಲಾಯಿಲ ಗ್ರಾಮಸ್ತರಿಗೆ ಶ್ರೀ ಕೃಷ್ಣ ಜನ್ಮಾಷ್ಟಮಿ ಪ್ರಯುಕ್ತ 4 ನೇ ವರ್ಷದ ಮೊಸರು ಕುಡಿಕೆ ಉತ್ಸವ ಹಮ್ಮಿಕೊಂಡಿದ್ದು ಅದರ ಸಮಾರೋಪ ಸಮಾರಂಭದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಮುಖ್ಯ ಅತಿಥಿಯಾಗಿದ್ದ ಹಿರಿಯ ಪತ್ರಕರ್ತ ಅಶ್ರಫ್ ಆಲಿಕುಂಞಿ ಮುಂಡಾಜೆ ಮಾತನಾಡಿ, ಗ್ರಾಮೀಣ ಕ್ರೀಡೆಯ ಮೂಲಕ ಸಂಸ್ಕೃತಿ ಪೋಷಕ ಕಾರ್ಯ ಇಲ್ಲಿ ನಡೆದಿದೆ. ಎಲ್ಲ ಜಾತಿಯವರೂ ಸೇರಿ ಕಾರ್ಯಕ್ರಮ ಆಯೋಜಿಸಿದ್ದು ಮಾದರಿ ಎಂದರು. ಇನ್ನೋರ್ವ ಮುಖ್ಯ ಅತಿಥಿ ಉಜಿರೆ ಎಸ್ಡಿಎಂ ಕಾಲೇಜು ಉಪನ್ಯಾಸಕ ಅಶ್ವಿನ್ ಕುಮಾರ್ ಮಂಜುಶ್ರೀ ನಗರ ಮಾತನಾಡಿ, ದೈಹಿಕ ವ್ಯಾಯಾಮ ನೀಡುವ ಮಣ್ಣಿನ ಆಟವೇ ಕ್ರೀಡೆ ಹೊರತು ಮೊಬೈಲ್ ಗೇಮ್ಗಳಲ್ಲ ಎಂದರು.
ಮಿಲ್ಕ್ ಸೊಸೈಟಿ ಅಧ್ಯಕ್ಷ ಜೋನ್ ಪಿಂಟೋ ಮಾತನಾಡಿ, ವೇದಿಕೆಯಲ್ಲಿ ಸರ್ವ ಧರ್ಮೀಯರೂ ಜೊತೆಯಾಗಿದ್ದು ಊರಿನ ಘನತೆ ಎತ್ತಿಹಿಡಿದಿದೆ ಎಂದರು.
ಸಂಸ್ಥೆಯ ಅಧ್ಯಕ್ಷ ಜಗದೀಶ್ ಬರಮೇಲು ಪ್ರಾಸ್ತಾವಿಕವಾಗಿ ಮಾತನಾಡಿ, ನಮ್ಮ ಸಂಘಟನೆ ಕ್ರೀಡೆ ಮಾತ್ರವಲ್ಲದೆ ಅಶಕ್ತರಿಗೆ ನೆರವು, ಶಾಲೆ ಹಾಗೂ ಸಮಾಜಕ್ಕೆ ಕೊಡುಗೆಗಳನ್ನು ನೀಡುತ್ತಾ ಬರುತ್ತಿದೆ. ಮುಂದಕ್ಕೆ ಸಂಘಕ್ಕೆ ಸ್ವಂತ ನಿವೇಶನ ಹಾಗೂ ಕಟ್ಟಡದ ಗುರಿ ಇದೆ ಎಂದರು.
ವೇದಿಕೆಯಲ್ಲಿ ಕೃಷಿಕ ಯುವಕ ಮಂಡಲದ ಗೌರವಾಧ್ಯಕ್ಷ ಧರ್ಣಪ್ಪ ಸಪಲ್ಯ ನೂಜೇಲು, ಗ್ರಾ. ಯೋಜನೆಯ ಕೃಷಿ ವಿಭಾಗದ ಮೇಲ್ವಿಚಾರಕ ರಾಮ್ ಕುಮಾರ್, ಲಾಯಿಲ ಬಂಟರ ಸಂಘದ ಅಧ್ಯಕ್ಷ ಜಗನ್ನಾಥ ಶೆಟ್ಟಿ ಕರ್ನೋಡಿ, ಶ್ರೀ ಮಂಜುನಾಥೇಶ್ವರ ಭಜನಾ ಮಂಡಳಿ ಅಧ್ಯಕ್ಷ ವೇಣುಗೋಪಾಲ ಶೆಟ್ಟಿ ಅತ್ತೋಡಿ, ನವೋದಯ ಯುವಕ ಮಂಡಲದ ಅಧ್ಯಕ್ಷ ಸಂತೋಷ್ ಆಚಾರ್ಯ, ಜೈಭೀಮ್ ಫ್ರೆಂಡ್ಸ್ ಗೋಳಿದಪಲ್ಕೆ ಅಧ್ಯಕ್ಷ ವಿಶಾಲ್ ಗೋಳಿದಪಲ್ಕೆ ಗೌರವ ಉಪಸ್ಥಿತರಿದ್ದರು.
ಸ್ಪರ್ಧಾ ವಿಜೇತರಿಗೆ ಬಹುಮಾನ ವಿತರಣೆ, ಸಹಕರಿಸಿದವರಿಗೆ ಗೌರವಾರ್ಪಣೆ ನಡೆಯಿತು. ಮೇಲಂತಬೆಟ್ಟು ಸರಕಾರಿ ಶಾಲೆಯ ಎಲ್ಲಾ ಮಕ್ಕಳಿಗೆ ಸ್ಟೀಲ್ ವಾಟರ್ ಬಾಟಲ್, ಟೈ, ಬೆಲ್ಟ್, ಐಡಿ ಕಾರ್ಡ್ ವಿತರಿಸಲಾಯಿತು. ಎಸ್.ಡಿ.ಎಂ.ಸಿ ಅಧ್ಯಕ್ಷ ಬಶೀರ್ ಸ್ವೀಕರಿಸಿದರು. ಇದೇ ಪ್ರಥಮ ಬಾರಿಗೆ ಹೊರಾಂಗಣದಲ್ಲಿ ಅಯೋಜಿಸಿದ್ದ ಕೇರಳ ಶೈಲಿಯ ನೃತ್ಯ ಪ್ರದರ್ಶನ ಜನರ ಮನರಂಜಿಸಿತು.
ಕೋಶಾಧಿಕಾರಿ ಹರ್ಷ ಹೆಚ್ ಆರ್ ಧನ್ಯವಾದ ಸಲ್ಲಿಸಿದರು. ಕಾರ್ಯದರ್ಶಿ ಸೂರಜ್ ಸಹಿತ ಎಲ್ಲರೂ ಸಹಕರಿಸಿದರು. ಗಿರೀಶ್ ಮಾಪಲಾಡಿ ವಂದಿಸಿದರು.












