
ಬಳಂಜ: ನಾಲ್ಕೂರು ಗ್ರಾಮದ ಐತನಡ್ಕ ಪಲ್ಗುಣಿ ನದಿಯ ಸೇತುವೆಯ ಎರಡೂ ಬದಿಗಳಲ್ಲಿ ಪೊದೆಗಳು ಬೆಳೆದು ನಿಂತ ಪರಿಣಾಮ ಸಾರ್ವಜನಿಕರು ನಡೆದುಕೊಂಡು ಹೋಗಲು ಹಾಗೂ ವಾಹನ ಸವಾರರು ಸಂಚರಿಸಲು ತೊಂದರೆ ಅನುಭವಿಸುತ್ತಿದ್ದರು.
ಈ ಸಮಸ್ಯೆಯನ್ನು ಮನಗಂಡ ನಾಲ್ಕೂರು ಹಾಗೂ ಗರ್ಡಾಡಿ ಗ್ರಾಮದ ಯುವಕರು ಮತ್ತು ಗ್ರಾಮಸ್ಥರು ಶ್ರಮದಾನದ ಮೂಲಕ ಸೇತುವೆಯ ಎರಡೂ ಬದಿಯ ಪೊದೆಗಳನ್ನು ತೆರವುಗೊಳಿಸಿ ಸ್ವಚ್ಛತಾ ಕಾರ್ಯ ಕೈಗೊಂಡರು.
ಈ ಕಾರ್ಯದಲ್ಲಿ ಐತನಡ್ಕ ವಿಠ್ಠಲ, ದೈಹಿಕ ಶಿಕ್ಷಕ ರಾಜು, ಸಂದೇಶ್ ಶೆಟ್ಟಿ, ಸತೀಶ್ ಶೆಟ್ಟಿ ಪೊನ್ನೆದಕಲ, ಸಂತೋಷ್ ಶೆಟ್ಟಿ ಗುತ್ತು, ಮುಕೇಶ್, ಹರೀಶ್ ಮುದೆಲ್ತ್ಯಾರ್, ಡೆಂಜೋಳಿ ರಮೇಶ್ ಹಾಗೂ ಮರೆಕ್ಕಿನ ಅಂಝ ಸೇರಿದಂತೆ ಹಲವರು ಪಾಲ್ಗೊಂಡು ಸೇವಾ ಮನೋಭಾವ ಮೆರೆದರು.
ಗ್ರಾಮಸ್ಥರ ಈ ಸ್ವಯಂಪ್ರೇರಿತ ಶ್ರಮದಾನದಿಂದ ಸೇತುವೆ ಪರಿಸರ ಸ್ವಚ್ಛಗೊಂಡಿದ್ದು, ಇದೀಗ ಸಾರ್ವಜನಿಕರು ಹಾಗೂ ವಾಹನ ಸವಾರರು ಸುಗಮವಾಗಿ ಸಂಚರಿಸುವಂತಾಗಿದೆ. ಗ್ರಾಮಸ್ಥರ ಈ ಸಾಮಾಜಿಕ ಕಾಳಜಿ ಮತ್ತು ಸೇವಾ ಕಾರ್ಯಕ್ಕೆ ಸ್ಥಳೀಯರಿಂದ ಮೆಚ್ಚುಗೆ ವ್ಯಕ್ತವಾಗಿದೆ.
















