ಬೆಳ್ತಂಗಡಿ : ಸ್ಕೂಟಿಗೆ ಆಟೋ ಚಾಲಕ ದುಡುಕುತನದಿಂದ ಡಿಕ್ಕಿ ಹೊಡೆದ ಪ್ರಕರಣ ಸಂಬಂಧ ಆಟೋ ಚಾಲಕನಿಗೆ ಬೆಳ್ತಂಗಡಿ ನ್ಯಾಯಾಲಯಕ್ಕೆ ಕಾರಾಗೃಹ ಶಿಕ್ಷೆ ಮತ್ತು ದಂಡ ವಿಧಿಸಿ ಆದೇಶ ಮಾಡಿದೆ.
ಪ್ರಕರಣದ ಸಾರಾಂಶ: ದಿನಾಂಕ 12-04-2022 ರಂದು KA-51-HQ-5458 ಸಂಖ್ಯೆಯ ಸ್ಕೂಟಿಯಲ್ಲಿ ಶ್ರೀನಿವಾಸ ಅವರು ಸಹ ಸವಾರರಾದ ಗಿರಿಜಾ ಹಾಗೂ ಗಣೇಶ್ ಅವರನ್ನು ಕೂರಿಸಿಕೊಂಡು ಉಜಿರೆ ಕಡೆಯಿಂದ ಧರ್ಮಸ್ಥಳ ಕಡೆಗೆ ತೆರಳುತ್ತಿದ್ದರು. ರಾತ್ರಿ ಸುಮಾರು 7:50 ಗಂಟೆಗೆ ಬೆಳ್ತಂಗಡಿ ತಾಲೂಕು ಉಜಿರೆ ಗ್ರಾಮದ ಉಜಿರೆ-ಬೆಳಾಲು ಕ್ರಾಸ್ ಬಳಿ ಸ್ಕೂಟಿಯ ಬಲ ಇಂಡಿಕೇಟರ್ ಹಾಕಿ ಬೆಳಾಲು ರಸ್ತೆ ಕಡೆಗೆ ತಿರುಗಿಸುತ್ತಿದ್ದ ವೇಳೆ, ಅವರ ಹಿಂದಿನಿಂದ ಉಜಿರೆ ಕಡೆಯಿಂದ ಧರ್ಮಸ್ಥಳ ಕಡೆಗೆ ಬರುತ್ತಿದ್ದ KA-21-A-9028 ಸಂಖ್ಯೆಯ ಆಟೋ ರಿಕ್ಷಾವನ್ನು ಅದರ ಚಾಲಕ ಹಸೈನ್ ಎಂಬಾತ ದುಡುಕು ಹಾಗೂ ನಿರ್ಲಕ್ಷ್ಯದಿಂದ ಚಲಾಯಿಸಿಕೊಂಡು ಬಂದು ಸ್ಕೂಟಿಗೆ ಹಿಂದಿನಿಂದ ಡಿಕ್ಕಿ ಹೊಡೆದಿದ್ದರು.
ಅಪಘಾತದ ಪರಿಣಾಮ ಸ್ಕೂಟಿ ಸವಾರ ಶ್ರೀನಿವಾಸ ಅವರಿಗೆ ತಲೆಗೆ ರಕ್ತಗಾಯ, ಸಹ ಸವಾರ ಗಿರಿಜಾ ಅವರಿಗೆ ಬಲ ಕಣ್ಣಿನ ಮೇಲ್ಭಾಗ ಹಾಗೂ ಎಡ ಕೈ ಅಂಗೈಗೆ ರಕ್ತಗಾಯ, ಗಣೇಶ್ ಅವರಿಗೆ ಎಡ ಕೈ ಮಣಿಗಂಟಿಗೆ ತರಚಿದ ಗಾಯಗಳಾಗಿದ್ದವು. ಗಾಯಾಳುಗಳಿಗೆ ಉಜಿರೆಯ ಬೆನಕ ಆಸ್ಪತ್ರೆಯಲ್ಲಿ ಪ್ರಾಥಮಿಕ ಚಿಕಿತ್ಸೆ ನೀಡಿ, ಹೆಚ್ಚಿನ ಚಿಕಿತ್ಸೆಗೆ ಮಂಗಳೂರಿನ ಆಸ್ಪತ್ರೆಗೆ ದಾಖಲಿಸಿದ್ದರು. ಈ ಬಗ್ಗೆ ಬೆಳ್ತಂಗಡಿ ಸಂಚಾರಿ ಪೊಲೀಸ್ ಠಾಣೆಯಲ್ಲಿ ಕಲಂ 279,338,304(a) ಐಪಿಸಿ ಅಡಿಯಲ್ಲಿ ಪ್ರಕರಣ ದಾಖಲಾಗಿ ತನಿಖೆಯಲ್ಲಿತ್ತು.ಪ್ರಕರಣದ ತನಿಖೆಯನ್ನು ಸಿಪಿಐ ಶಿವಕುಮಾರ್ ಹಾಗೂ ಪಿಎಸ್ಐ ಓಡಿಯಪ್ಪ ಗೌಡ ಅವರು ನಡೆಸಿ, ಆಟೋ ಚಾಲಕ ಆರೋಪಿ ಹಸೈನ್ ವಿರುದ್ಧ ದೋಷಾರೋಪಣಾ ಪಟ್ಟಿಯನ್ನು ಬೆಳ್ತಂಗಡಿ ಮಾನ್ಯ ನ್ಯಾಯಾಲಯಕ್ಕೆ ಸಲ್ಲಿಸಿದ್ದರು.
ಈ ಪ್ರಕರಣವನ್ನು ಮಾನ್ಯ ಪ್ರಧಾನ ಸಿವಿಲ್ ನ್ಯಾಯಾಧೀಶರು ಮತ್ತು ಜೆಎಂಎಫ್ಸಿ ನ್ಯಾಯಾಲಯ, ಬೆಳ್ತಂಗಡಿ ಅವರು ಸಿಸಿ ಸಂಖ್ಯೆ 2042/2022ರಂತೆ ದಾಖಲಿಸಿಕೊಂಡು ವಿಚಾರಣೆ ನಡೆಸಿ ಆ.3 ರಂದು ಆಟೋ ಚಾಲಕ ಆರೋಪಿ ಹಸೈನ್ ನನ್ನು ಅಪರಾಧಿ ಎಂದು ತೀರ್ಪು ನೀಡಿ ಶಿಕ್ಷೆ ವಿಧಿಸಿದ್ದಾರೆ.ಮಾನ್ಯ ನ್ಯಾಯಾಲಯವು ಆರೋಪಿಗೆ 10 ಸಾವಿರ ದಂಡ ಹಾಗೂ 6 ತಿಂಗಳ ಕಾರಾಗೃಹ ಶಿಕ್ಷೆ ವಿಧಿಸಿ ಆದೇಶಿಸಿದೆ.ಪ್ರಕರಣದಲ್ಲಿ ಮಾನ್ಯ ನ್ಯಾಯಾಧೀಶರಾದ ರಾಮಲಿಂಗಪ್ಪ ಅವರು ವಿಚಾರಣೆ ನಡೆಸಿದ್ದು, ಸಹಾಯಕ ಸರ್ಕಾರಿ ಅಭಿಯೋಜಕರಾದ ಅಶಿತಾ ಎಂ.ಎ. ಅವರು ಸರ್ಕಾರದ ಪರ ವಾದ ಮಂಡಿಸಿದ್ದರು. ಸಂಚಾರಿ ಠಾಣೆಯ ಕೋರ್ಟ್ ಕರ್ತವ್ಯದ ಸಿಬ್ಬಂದಿ ಯೋಗೇಶ್ ಅವರು ಪ್ರಕರಣದ ವಿಚಾರಣೆಯಲ್ಲಿ ಅಗತ್ಯ ಸಹಕಾರ ನೀಡಿರುತ್ತಾರೆ.













